ಗುಜರಾತ್ ತೊರೆದು ಗುಳೆ ಹೊರಟರಾ ಕಾರ್ಮಿಕರು?
ಗುಜರಾತ್ನಲ್ಲಿ ಉತ್ತರ ಭಾರತದ ವಲಸಿಗರ ವಿರುದ್ಧ ಹಿಂಸೆ ಭುಗಿಲೆದ್ದಿದೆ. ಬೇರೆ ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ವಾಪಸ್ ಹೊರಟಿದ್ದಾರೆ. ರೈಲಿನಲ್ಲಿ ಕಿಕ್ಕಿರಿದು ಕುಳಿತು ಹೋಗುತ್ತಿರುವ ಫೋಟೋ ವೈರಲ್ ಆಗಿದೆ.
ಗುಜರಾತ್ (ಅ. 15): ಠಾಕೂರ್ ಸಮುದಾಯಕ್ಕೆ ಸೇರಿದ ಬಾಲಕಿಯೊಬ್ಬಳ ಮೇಲೆ ಬಿಹಾರ ಮೂಲದ ಕಾರ್ಮಿಕನೊಬ್ಬ ಗುಜರಾತಿನಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂಬ ಸುದ್ದಿಯು ಗುಜರಾತ್ನಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗಿದೆ. ಅದಾದ ನಂತರ ಗುಜರಾತ್ನಲ್ಲಿ ಉತ್ತರ ಭಾರತದ ವಲಸಿಗರ ವಿರುದ್ಧ ಹಿಂಸೆ ಭುಗಿಲೆದ್ದಿದೆ.
ಇದರೊಂದಿಗೆ ಈ ಕುರಿತ ಸುಳ್ಳುಸುದ್ದಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದ್ಯ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ಬಂದು ಗುಜರಾತ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತೆ ತಮ್ಮ ಊರಿಗೆ ಮರಳುತ್ತಿದ್ದಾರೆ ಎಂಬ ಸಂದೇಶದೊಂದಿಗೆ ರೈಲಿನಲ್ಲಿ ಸಾವಿರಾರು ಜನರು ಕಿಕ್ಕಿರಿದು ಕುಳಿತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೊದಲಿಗೆ ‘ದಿ ಹೆಡ್ಲೈನ್’ ಎಂಬ ಹೆಸರಿನ ಫೇಸ್ಬುಕ್ ಪೇಜ್ ಈ ಫೋಟೋವನ್ನು ಪೋಸ್ಟ್ ಮಾಡಿದ್ದು, ಸುಮಾರು 12,000 ಬಾರಿ ಶೇರ್ ಆಗಿದೆ. ಇದಿಷ್ಟೇ ಅಲ್ಲದೆ ‘ಫ್ಯೂಚರ್ ಇಂಡಿಯಾ’ ಸೇರಿದಂತೆ ಹಲವು ಪೇಜ್ಗಳು ಇದನ್ನು ಶೇರ್ ಮಾಡಿವೆ. ಫೇಸ್ಬುಕ್ ಮಾತ್ರವಲ್ಲದೆ ಟ್ವೀಟರ್ನಲ್ಲೂ ಇದು ಹರಿದಾಡುತ್ತಿದೆ. ಆದರೆ ನಿಜಕ್ಕೂ ಗುಜರಾತ್ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಬಳಿಕ ಬಿಹಾರ ಮತ್ತು ಉತ್ತರಪ್ರದೇಶದ ಕಾರ್ಮಿಕರು ಹೀಗೆ ಏಕಾಏಕಿ ನಿರ್ಗಮಿಸುತ್ತಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ.
ಏಕೆಂದರೆ ಈ ಬಗ್ಗೆ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಆಲ್ಟ್ನ್ಯೂಸ್ ಪರಿಶೀಲಿಸಿದ್ದು, ಆಗ ಈ ಫೋಟೋ ಉತ್ತರಪ್ರದೇಶದ್ದು ಮತ್ತು 2010 ರದ್ದು ಎಂಬುದು ಪತ್ತೆಯಾಗಿದೆ. ವಾಸ್ತವವಾಗಿ 2010 ರಲ್ಲಿ ಉತ್ತರ ಪ್ರದೇಶದ ಹಿಂದು ಭಕ್ತಾದಿಗಳು ‘ಗುರು ಪೂರ್ಣಿಮ’ದ ಪ್ರಯುಕ್ತ ಪ್ಯಾಸೆಂಜರ್ ಟ್ರೈನ್ನಲ್ಲಿ ಮಥುರಾಗೆ ಪ್ರಯಾಣ ಬೆಳೆಸಿದ ಸಂದರ್ಭದ ಫೋಟೋ ಇದು . ಇದೇ ಫೋಟೋವನ್ನು ಹಲವು ಬಾರಿ ಸುಳ್ಳುಸುದ್ದಿ ಹಬ್ಬಿಸಲು ಬಳಸಿಕೊಳ್ಳಲಾಗುತ್ತಿದೆ.
-ವೈರಲ್ ಚೆಕ್