ಈಗ ಚಳಿಗಾಲವೋ, ಇಲ್ಲ ಮಳೆಗಾಲವೋ ಎಂದು ತಿಳಿಯಲು ತಜ್ಞರ ನೇಮಕ..!
ಹವಾಮಾನ ಈಗ ಹೇಗಿದೆ ಅಂದರೆ ಮಳೆಗಾಲ ಯಾವುದು, ಚಳಿಗಾಲ ಯಾವುದು ಎಂದೇ ಅರ್ಥವಾಗುತ್ತಿಲ್ಲ. ಈ ಕುರಿತಂತೆ ಸುಳ್ ಸುದ್ದಿ ಮೂಲಗಳಿಂದ ಮತ್ತೊಂದು ಭಯಂಕರ ಮಾಹಿತಿ ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜ.07): ರಾಜ್ಯದಲ್ಲಿ ಚಳಿಗಾಲದಲ್ಲೂ ಏಕಾಏಕಿ ಮಳೆ ಆರಂಭವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಜನರು ಚಳಿ ಹಾಗೂ ಮಳೆಯಿಂದ ಬೇಸತ್ತು ಹೋಗಿದ್ದಾರೆ.
ಜನವರಿ ಎಂದರೆ ಅದು ಚಳಿಗಾಲ ಎಂಬುದು ಜನರ ಅಭಿಪ್ರಾಯ. ಆದರೆ, ನಿನ್ನೆ ನಡೆದ ವಿದ್ಯಮಾನದಿಂದ ಹವಾಮಾನ ಇಲಾಖೆಯೂ ಗೊಂದಲಕ್ಕೆ ಈಡಾಗಿದೆ. ನಿಖರವಾಗಿ ಈಗ ಮಳೆಗಾಲವೋ, ಚಳಿಗಾಲವೋ ಅಥವಾ ಬೇಸಿಗೆ ಕಾಲವೋ ಎಂದು ತಿಳಿಯಲು ಸಾಧ್ಯವಾಗುತ್ತಿಲ್ಲ. ಒಂದು ವಾರದ ಹಿಂದಷ್ಟೇ ಭಯಂಕರ ಚಳಿಯ ವಾತಾವರಣವಿತ್ತು. ಆದರೆ ಇದೀಗ ಕಳೆದೆರಡು ದಿನಗಳಲ್ಲಿ ಮಳೆಗಾಲ ಶುರುವಾಗಿದೆ.
ಇತ್ತೀಚೆಗಷ್ಟೇ ಕಾಲೇಜುಗಳು ಆರಂಭವಾದ ಬೆನ್ನಲ್ಲೇ ಮಳೆರಾಯನಿಗೂ ಅನುಮಾನ ಬಂದು ಇದು ಜೂನ್ ಇರಬೇಕೆಂದು ಮಳೆ ಸುರಿಸುತ್ತಿದ್ದಾನೆ ಎಂಬಂತಹ ಟ್ರೋಲ್ಗಳು ಸಹ ಹರಿದಾಡಿದ್ದವು. ಇದರ ಬೆನ್ನಲ್ಲೇ ಸರ್ಕಾರ ತಜ್ಞರನ್ನು ನೇಮಿಸಿದೆಯಂತೆ..!
ಯಾರೇ ಹೋದ್ರೂ ಜೆಡಿಎಸ್ ಪಕ್ಷಕ್ಕೆ ಏನೂ ತೊಂದರೆಯಿಲ್ಲ: ಕುಮಾರಸ್ವಾಮಿ
ಹೀಗಾಗಿ ಈಗ ಯಾವ ಕಾಲ ಎಂದು ತಿಳಿಯಲು ತಜ್ಞರ ಸಮಿತಿಯೊಂದನ್ನು ನೇಮಿಸಲಾಗಿದೆ. ಈ ಸಮಿತಿ ರಾಜ್ಯದೆಲ್ಲೆಡೆಯ ಹವಾಮಾನ ವರದಿಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ. ನಾಳೆ ರಾಜ್ಯದಲ್ಲಿ ಬಿಸಿಲು ಬರುವ ಸಾಧ್ಯತೆ ಇದೆ ಎಂದು ಸುಳ್ಸುದ್ದಿ ಮೂಲಗಳು ತಿಳಿಸಿವೆ.