ಅನೈತಿಕ ಗೆಳೆತನ ತಂದಿಟ್ಟಿತು ಜೀವಕ್ಕೆ ಕುತ್ತು
ನೈತಿಕ ಸಂಬಂಧವೊಂದು ಜೀವಕ್ಕೆ ಕುತ್ತು ತಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಂಡತಿಯೊಂದಿಗೆ ಗೆಳಯನೇ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಗೆಳೆಯನನ್ನೇ ಹತ್ಯೆ ಮಾಡಿದ ಘಟನೆ ನಡೆದಿದೆ.
ಬೆಂಗಳೂರು : ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಗೆಳೆಯನನ್ನು ಹತ್ಯೆ ಮಾಡಿದ್ದ ಕಾರ್ಮಿಕನೊಬ್ಬ, ಈಗ ಸಹಚರನ ಜತೆ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೈಯ್ಯಪ್ಪನಹಳ್ಳಿ ಸಮೀಪದ ನಿವಾಸಿಗಳಾದ ಸೀಮಂತ್ ಕುಮಾರ್ ಸಿಂಗ್ ಬಾಬು ಹಾಗೂ ಬೀರೇಶ್ ಬಂಧಿತರು. ಹದಿನೈದು ದಿನಗಳ ಹಿಂದೆ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಚಂದ್ರಕುಮಾರ್ ಸಿಂಗ್ನನ್ನು ಕೊಂದು ಬಳಿಕ ಆರೋಪಿಗಳು ತಪ್ಪಿಸಿಕೊಂಡಿದ್ದರು. ಬಳಿಕ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ತನಿಖೆಗಿಳಿದ ಪೊಲೀಸರು, ಆಂಧ್ರಪ್ರದೇಶದ ವಾರಂಗಲ್ನಲ್ಲಿ ಅಡಗಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂದ್ರಕುಮಾರ್ ಸಿಂಗ್, ಸೀಮಂತ್ ಕುಮಾರ್ ಸಿಂಗ್ ಬಾಬು ಹಾಗೂ ಬೀರೇಶ್ ಸಿಂಗ್ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದ ಈ ಗೆಳೆಯರು, ಬೈಯ್ಯಪ್ಪನಹಳ್ಳಿ ಸಮೀಪ ನೆರೆಹೊರೆಯಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಸೀಮಂತ್ ಕುಮಾರ್ ಪತ್ನಿ ಜತೆ ಚಂದ್ರ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದು ಕೆರಳಿದ ಸೀಮಂತ್, ತನ್ನ ಪತ್ನಿಗೆ ಗೆಳೆಯನ ಜೊತೆ ಸಂಪರ್ಕ ಕಡಿದುಕೊಳ್ಳುವಂತೆ ತಾಕೀತು ಮಾಡಿದ್ದ. ನಂತರವೂ ತನ್ನ ಪತ್ನಿ ಜತೆ ಸ್ನೇಹ ಮುಂದುವರೆಸಿದ್ದರಿಂದ ಕ್ರುದ್ಧನಾದ ಸೀಮಂತ್, ಚಂದ್ರಕುಮಾರ್ ಸಿಂಗ್ನ ಕೊಲೆಗೆ ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಹದಿನೈದು ದಿನಗಳ ಹಿಂದೆ ಕಗ್ಗದಾಸಪುರದ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಚಂದ್ರಕುಮಾರ್ನನ್ನು ಕರೆಸಿಕೊಂಡ ಆರೋಪಿಗಳು, ವೈರ್ನಿಂದ ಆತನ ಕುತ್ತಿಗೆ ಬಿಗಿದು ಕೊಂದು ಬಳಿಕ ಮೃತದೇಹವನ್ನು ಮೂಟೆ ತುಂಬಿ ಪೈಪ್ನೊಳಗೆ ತುರುಕಿ ಪರಾರಿಯಾಗಿದ್ದರು. ಬಳಿಕ ಮೃತನ ಸೋದರ, ತನ್ನ ತಮ್ಮ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದ.
ಈ ಬಗ್ಗೆ ಪೊಲೀಸರು ತನಿಖೆ ನಡೆಸುವಾಗ ಚಂದ್ರನ ಅನೈತಿಕ ಸಂಬಂಧ ವಿಚಾರವು ಬೆಳಕಿಗೆ ಬಂದಿತು. ಆದರೆ ಅಷ್ಟರಲ್ಲಿ ನಗರ ತೊರೆದು ಆಂಧ್ರದಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಕೊನೆಗೆ ಮೊಬೈಲ್ ಕರೆಗಳ ಜಾಡು ಬೆನ್ನಹತ್ತಿದ ಪೊಲೀಸರು, ಆಂಧ್ರಪ್ರದೇಶದ ವಾರಂಗಲ್ನಲ್ಲಿ ಹಂತಕರನ್ನು ಸೆರೆಹಿಡಿದಿದ್ದಾರೆ ಎಂದು ಮೂಲಗಳು ಹೇಳಿವೆ.