ಲೋಕಸಭಾ ಚುನಾವಣೆ : ಮಂಡ್ಯ ಫಲಿತಾಂಶದ ಬಗ್ಗೆ EVM ಮೇಲೆ ದಟ್ಟ ಅನುಮಾನ
ದೇಶದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿ ಅಧಿಕಾರ ಸ್ವೀಕಾರವೂ ಆಗಿದೆ. ಆದರೆ ಇವಿಎಂ ಮೇಲಿನ ಅನುಮಾನ ಮಾತ್ರ ಇನ್ನೂ ಕೊನೆಗೊಂಡಂತೆ ಕಾಣುವುದಿಲ್ಲ.
"
ಮಂಡ್ಯ : ಜೆಡಿಎಸ್ ಭದ್ರಕೋಟೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿ ಹಲವು ದಿನಗಳೇ ಕಳೆದಿದ್ದು, ಇದೀಗ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ.
ನಾಗಮಂಗಲ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದು, ಮಂಡ್ಯ ಜನರು ಪುರಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ಗೆ ಮತಹಾಕಿ ಗೆಲ್ಲಿಸುತ್ತಾರೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಅದು ಹೇಗೆ ಬೇರೆ ಅಭ್ಯರ್ಥಿಗೆ ಮತ ಹೋಗುತ್ತವೆ ಎಂದು ಪ್ರಶ್ನೆ ಮಾಡಿದ್ದಾರೆ.
ಚುನಾವಣೆಗಾಗಿ ಇವಿಎಂ ಸಂಶೋಧಿಸಿದ ಜಪಾನ್ ದೇಶದಲ್ಲೇ ಇವಿಎಂ ಬಳಕೆ ಮಾಡುವುದಿಲ್ಲ. ಅವರಿಗೆ ತಾವೇ ಕಂಡು ಹಿಡಿದ ಯಂತ್ರದ ಮೇಲೆ ನಂಬಿಕೆ ಇಲ್ಲ. ಆದರೆ ನಮ್ಮಲ್ಲಿ ಇವಿಎಂ ಬಳಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇವಿಎಂ ಬಗ್ಗೆ ತನಿಖೆ ನಡೆಸಬೇಕು ಎಂದು ಸುರೇಶ್ ಗೌಡ ಆಗ್ರಹಿಸಿದರು.