Asianet Suvarna News Asianet Suvarna News

ವಿಜಯಪುರ: ಮಳೆ ಬಂತು.. ಈಗ ಕುರಿಗಾರರಿಗೆ ಬೇಡಿಕೆ ಯಾಕೆ ಹೆಚ್ಚು ಗೊತ್ತಾ?

ಕುರಿ ಸಾಕಿ ಕುಬೇರನಾದ ಎಂಬ ನಾಣ್ನುಡಿ ಇದೆ. ಕುರಿಗಾರರು ಲಕ್ಷಾಂತರ ರುಪಾಯಿ ಮೊತ್ತದ ವ್ಯವಹಾರ ಮಾಡುತ್ತಾರೆ. ಕುರಿಗಾರರಿಗೆ ಕಠಿಣ ಪರಿಶ್ರಮವೂ ಅಗತ್ಯ. ಇವರು ರೈತ ಸಮೂಹಕ್ಕೆ ಅಗತ್ಯವಾಗಿ ಬೇಕಾದವರು. ಇವರು ಕುರಿ ನಿಲ್ಲಿಸಿ ಭೂಮಿಯನ್ನು ಫಲವತ್ತಾಗಿಸುವ ಬಂಟರು. ಹೀಗೆಯೆ ಹೆಚ್ಚೆಚ್ಚು ಬೆಳೆಯಲು ರೈತರಿಗೆ ಸಹಕಾರಿಯಾಗುತ್ತೆ.

demand for sheep herds after good rainfall in north karnataka

ತಾಂಬಾ, ವಿಜಯಪುರ: ಬೇಸಿಗೆಯಲ್ಲಿ ಜಮೀನಿನ ಫಲವತ್ತತೆ ಹೆಚ್ಚಿಸಲು ಸಂಚಾರಿ ಕುರಿಗಳು ಬಹು ಪ್ರಯೋಜನಕಾರಿ. ಹೀಗಾಗಿ ಈಗ ಕುರಿಗಾರರಿಗೆ ಬಹು ಬೇಡಿಕೆ ಬಂದಿದೆ. ಜಮೀನುಗಳಲ್ಲಿ ಬೆಳೆಗಳು ಉತ್ತಮವಾಗಿ ಬೆಳೆದಿರುವಾಗ ಜಮೀನಿನಲ್ಲಿ ಕುರಿಗಾರರು ಸಂಚರಿಸಿದರೆ, ರೈತರಿಂದ ಛೀಮಾರಿ ಹಾಕಿಕೊಳ್ಳುತ್ತಾರೆ. ಅದೇ ಕುರಿಗಾರರನ್ನು ಬೇಸಿಗೆ ಕಾಲದಲ್ಲಿ ರೈತರು ಹಣ ಕೊಟ್ಟು ಹೊಲಕ್ಕೆ ಕರೆಸಿಕೊಳ್ಳುತ್ತಾರೆ.

ಕುರಿ ಗೊಬ್ಬರದ ಮಹತ್ವ ತಿಳಿದಿರುವ ರೈತರು ಕುರಿಗಳ ಮಾಲೀಕರಿಗೆ ತಮ್ಮ ಜಮೀನಿನಲ್ಲಿ ತಂಗಲು ಅವರ ಹಿಂದೆ ಬೀಳುತ್ತಾರೆ. ಹೀಗಾಗಿ ಈ ಭಾಗದಲ್ಲಿ ಹೊಲ, ಗದ್ದೆ ತೋಟಗಳಲ್ಲಿ ಕುರಿಗಾರರು ತಮ್ಮ ಕುರಿಗಳ ಹಿಂಡಿನೊಂದಿಗೆ ಬಿಡಾರ ಹೂಡಿದ್ದಾರೆ. ಇದಕ್ಕೆಲ್ಲ ಬರುವ ವಿಜಯಪುರ, ಬಾಗಲಕೋಟೆ ಜಿಲ್ಲೆಯ ನಾನಾ ಕಡೆಗಳಿಂದಲ್ಲದೇ ಬೆಳಗಾವಿ ಜಿಲ್ಲೆಯ ನಾನಾ ಭಾಗಳಿಂದ ನೂರಾರು ಸಂಚಾರಿ ಕುರಿಗಾರರು ಬರುತ್ತಾರೆ. 

ಜಮೀನಿಗೆ ಕುರಿ ಗೊಬ್ಬರ ಉತ್ತಮ. ಕಳೆದೆರಡು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸುವ ರೈತರು ಸಮೂಹ ಬಿತ್ತನೆಗೆ ಬೇಕಾದ ಕನಿಷ್ಠ ಮಳೆಯೂ ಆಗದಿರುವದರಿಂದ ಬಹುತೇಕ ಜಮೀನುಗಳು ಬಿತ್ತನೇಯಾಗದೆ ಖಾಲಿ ಬಿದ್ದಿದ್ದವು. ಇದೀಗ ಮುಂಗಾರು ಮಳೆ ಚೆನ್ನಾಗಿ ಆಗುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲ ಭೂಮಿಯ ಫಲವತ್ತತೆ ಹೆಚ್ಚಿಸಲು ಕುರಿಗಾರರ ಬೆನ್ನು ಬಿದ್ದು ತಮ್ಮ ಹೊಲ, ಗದ್ದೆಗಳಲ್ಲಿ ಕುರಿಗಳ ಹಿಂಡಿನ ದೊಡ್ಡಿಗಳನ್ನು ಹಾಕಿಸುತ್ತಾರೆ.

ಕುರಿ ಹಿಕ್ಕಿ ಗೊಬ್ಬರ ಉತ್ತಮ: ಹೊಲಗಳಲ್ಲಿ ಕುರಿಗಳನ್ನು ನಿಲ್ಲಿಸಿದರೆ ಕೊಟ್ಟಿಗೆ ಗೊಬ್ಬರಕ್ಕಿಂತಲೂ ಉತ್ತಮ ರೀತಿಯಲ್ಲಿ ಭೂಮಿ ಫಲವತ್ತತೆ ಆಗುತ್ತದೆ. ಫಸಲು ಚೆನ್ನಾಗಿ ಬರುತ್ತದೆ ಎಂಬ ಕಾರಣದಿಂದ ರೈತರು ಹೊಲಗಳಲ್ಲಿ ಕುರಿ ಹಿಂಡುಗಳನ್ನು ನಿಲ್ಲಿಸಲು ಹಾತೊರೆಯುತ್ತಾರೆ. ಈಗಾಗಲೆ ಭೂ ಫಲವತ್ತೆತೆಗಾಗಿ ಸಾಕಷ್ಟು ರೈತರು ದುಬಾರಿ ಕೊಟ್ಟಿಗೆ ಗೊಬ್ಬರ ಹಾಕಿದ್ದಾರೆ. ಕುರಿ ಹಿಂಡನ್ನು ಜಮೀನಿನಲ್ಲಿ ತಂಗಲು ಬಯಸುವ ರೈತರು ಕುರಿಗಾರರಿಗೆ ಇಂತಿಷ್ಟು ಕುರಿಗಳಿಗೆ ಇಂತಿಷ್ಟು ಜೋಳ ಎಂದು ನೀಡುತ್ತಾರೆ. ಅದೇ ಜೋಳವನ್ನು ಕುರಿಗಳಿಗೆ ಮತ್ತು ತಮ್ಮ ಊಟಕ್ಕೆ ಕುರಿಗಾರರು ಬಳಸಿಕೊಳುತ್ತಾರೆ.

ಕುರಿ ಸಾಕಿ ಕುಬೇರನಾದ ಎಂಬ ನಾಣ್ನುಡಿ ಇದೆ. ಕುರಿಗಾರರು ಲಕ್ಷಾಂತರ ರುಪಾಯಿ ಮೊತ್ತದ ವ್ಯವಹಾರ ಮಾಡುತ್ತಾರೆ. ಕುರಿಗಾರರಿಗೆ ಕಠಿಣ ಪರಿಶ್ರಮವೂ ಅಗತ್ಯ. ಇವರು ರೈತ ಸಮೂಹಕ್ಕೆ ಅಗತ್ಯವಾಗಿ ಬೇಕಾದವರು. ಇವರು ಕುರಿ ನಿಲ್ಲಿಸಿ ಭೂಮಿಯನ್ನು ಫಲವತ್ತಾಗಿಸುವ ಬಂಟರು. ಹೀಗೆಯೆ ಹೆಚ್ಚೆಚ್ಚು ಬೆಳೆಯಲು ರೈತರಿಗೆ ಸಹಕಾರಿಯಾಗುತ್ತೆ.

ಜೋಳದ ನುಚ್ಚು ಕುರಿಹಾಲು ಹಾಗು ಬೆಲ್ಲ ಕುರಿಗಾರರ ನಿತ್ಯದ ಆಹಾರ. ನಾಯಿಗಳಿಗೊ ಇದನ್ನೇ ನೀಡಿ ದಷ್ಟಪುಷ್ಟವನ್ನಾಗಿಸುತ್ತಾರೆ. ನಂಬಿಗಸ್ಥ ನಾಯಿಗಳು ಯಜಮಾನರು ಇರದಿದ್ದರೊ ಕುರಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತವೆ. ಕುರಿಗಳನ್ನು ಮತ್ತು ನಾಯಿಗಳನ್ನು ನಮ್ಮ ಮಕ್ಕಳಿನಂಗ ಸಾಕ್ತೀವಿ. ಅವನ್ನ ಚೆನ್ನಾಗಿ ಜೋಪಾನ ಮಾಡಿದ್ರ ಬಂಗಾರದಂಗ ಮೇಯಿ ಸಿದ್ರ ಕುರಿಗಳು ನಮ್ಮ ಕೈಗೆ ಬಂಗಾರದ ಕಡಗ ಹಾಕಸ್ತಾವ್ರೀ' ಎಂದು ತಾಂಬಾ ಹಿರೇಮಸಳಿ ರಸ್ತೆ ಮೇಲೆ ಕುರಿಗಳನ್ನು ಹೊಡೆದುಕೊಂಡು ಹೊರಟ ರಾಯಚೂರ ಜಿಲ್ಲೆಯ ಸಿದ್ದಪ್ಪ ಅವಣ್ಣ ಪೂಜಾರಿ ಕುರಿಗಾರ ಹೇಳುತ್ತಾರೆ.

ವರದಿ: ಲಕ್ಷ್ಮಣ ಹಿರೇಕುರಬರ, ಕನ್ನಡಪ್ರಭ
epaper.kannadaprabha.in

Follow Us:
Download App:
  • android
  • ios