ಬಂದಿದೆ ಅಂಬಾರಿ ಆನೆ ಬಲರಾಮನ ಆತ್ಮಕಥನ : ಏನಿದರ ವಿಶೇಷತೆ?
ಅಂಬಾರಿ ಹೊರುವ ಆನೆ ಬಲರಾಮನ ಆತ್ಮಕಥನ ‘ಆನೆ ಬಂತೊಂದಾನೆ.. ಬಲರಾಮನ ಗಜಪಯಣ’ ಕೃತಿಯನ್ನು ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ
ಬೆಂಗಳೂರು : ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಅಂಬಾರಿ ಹೊರುವ ಆನೆ ಬಲರಾಮನ ಆತ್ಮಕಥನ ‘ಆನೆ ಬಂತೊಂದಾನೆ.. ಬಲರಾಮನ ಗಜಪಯಣ’ ಕೃತಿಯನ್ನು ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಕೃತಿಯ ಲೇಖಕರಾದ ಡಿ.ಕೆ. ಭಾಸ್ಕರ್ ಮತ್ತು ಅಲ್ಲಾಡಿ ಜಯಶ್ರೀ ತಿಳಿಸಿದರು.
ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃತಿಯನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಸಿ.ಆರ್. ನವೀನ್ ಅನುವಾದ ಮಾಡಿದ್ದು, ಅರಣ್ಯದಲ್ಲಿ ಹುಟ್ಟಿಬೆಳೆದಿರುವ ಆನೆಯೊಂದು ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಆಕರ್ಷಣೆಯಾದ ನೈಜ ಕಥನವನ್ನು ‘ಆನೆ ಬಂತೊಂದಾನೆ.. ಬಲರಾಮನ ಗಜಪಯಣ’ ಹೊಂದಿದೆ. ಈ ಕೃತಿ ಅ.10ರಂದು ಬಿಡುಗಡೆಯಾಗಿದೆ ಎಂದು ತಿಳಿಸಿದರು.
ತುಂಟ ಮರಿ ಬಲರಾಮ ಅರಣ್ಯದಲ್ಲಿ ಕಳೆದಿರುವ ಸುಂದರ ಕ್ಷಣಗಳು, ಕ್ರಮೇಣ ಗೌರವಾನ್ವಿತ ಬಲರಾಮನಾಗಿ ರೂಪುಗೊಂಡಿರುವುದು, ಆತನನ್ನು ಸೆರೆ ಹಿಡಿಯುವ ಮನಸ್ಸು ಕ್ಷೋಭೆಗೊಳಿಸುವ ಖೆಡ್ಡಾ ಕಾರ್ಯಾಚರಣೆ, ಅವನ ಕನಸುಗಳೆಲ್ಲ ನುಚ್ಚು ನೂರಾಗುವುದು, ಮೈಸೂರಿಗೆ ಆತನ ಪಯಣ, ದಸರಾ ಮೆರವಣಿಗೆ ನಾಯಕತ್ವ ವಹಿಸಿಕೊಳ್ಳುವುದು, ವಿಜಯದಶಮಿಯ ದಿನ ಅಂಬಾರಿ ಹೊತ್ತು ಸಾಗುವುದು ಎಲ್ಲವನ್ನೂ ಕೃತಿಯಲ್ಲಿ ಕಟ್ಟಿಕೊಡಲಾಗಿದೆ ಎಂದು ಹೇಳಿದರು.