ಸಂಚಾರ ಸುರಕ್ಷತೆಗಾಗಿ ಮಂತ್ರಾಲಯಕ್ಕೆ ಸೈಕಲ್ ಜಾಥಾ
- ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಘಟಕದಿಂದ ಸೈಕಲ್ ಜಾಥಾ
- ಇಲ್ಲಿಯವರೆಗೂ 89ಕ್ಕೂ ಹೆಚ್ಚು ಬಾರಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸೈಕಲ್ನಲ್ಲಿ ಜಾಗೃತಿ ಪ್ರವಾಸ
ಶಿವಮೊಗ್ಗ[ಜು.14]: ಚಾಲಕರ ಬೇಜವಾಬ್ದಾರಿ, ಮದ್ಯಪಾನ ಸೇವಿಸಿ ಚಾಲನೆ ಮಾಡುವುದರ ಜೊತೆಗೆ ಹದಗೆಟ್ಟ ರಸ್ತೆಗಳಿಂದ ಅಪಘಾತ ಸಂಖ್ಯೆ ಹೆಚ್ಚುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಘಟಕದ ನಿರ್ದೇಶಕ ಜಿ. ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ಸೈಕಲ್ ಕ್ಲಬ್ ಹಾಗೂ ಯೂತ್ ಹಾಸ್ಟೆಲ್ ತರುಣೋದಯ ಘಟಕದಿಂದ ರಸ್ತೆ ಸುರಕ್ಷತೆ ಹಾಗೂ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶಿವಮೊಗ್ಗದಿಂದ ಮಂತ್ರಾಲಯದವರೆಗೆ ಕೈಗೊಳ್ಳಲಾದ 5 ದಿನದ ಜಾಗೃತಿ ಸೈಕಲ್ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿನಿತ್ಯ ಬೈಸಿಕಲ್ ತುಳಿಯುವುದರಿಂದ ದೇಹ ಹಾಗೂ ಮನಸ್ಸು ಸದೃಢವಾಗುವುದರ ಜೊತೆಗೆ, ವಾಯುಮಾಲಿನ್ಯ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸೈಕಲ್ ಬಳಕೆ ಮಾಡುವಂತೆ ಪ್ರೋತ್ಸಾಹ ನೀಡಬೇಕೆಂದರು. ಶಿವಮೊಗ್ಗದಲ್ಲಿ ಸೈಕಲ್ ಕ್ಲಬ್ ಸ್ಥಾಪನೆ ಯಾಗಿ 3 ವರ್ಷ ತುಂಬಿದೆ. ಇದುವರೆಗೂ 89ಕ್ಕೂ ಹೆಚ್ಚು ಬಾರಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸೈಕಲ್ನಲ್ಲಿ ಜಾಗೃತಿ ಪ್ರವಾಸಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಸೈಕಲ್ ಕ್ಲಬ್ಬಿನಲ್ಲಿ 80 ಮಂದಿ ಸದಸ್ಯರು ಸಕ್ರಿಯರಾಗಿದ್ದಾರೆ ಎಂದರು.
ಪ್ರವಾಸದಲ್ಲಿ ಸೈಕಲ್ ಲೋಕದ ನರಸಿಂಹಮೂರ್ತಿ, ಭಾಸ್ಕರ್, ರವಿ, ನಟರಾಜ್, ಎಂ.ಪಿ. ನಾಗರಾಜ್, ಪ್ರಕಾಶ್, ಶಂಭು, ವಿಜಯೇಂದ್ರ, ರೇವಣಕರ, ಹರ್ಷಾ,
ಶ್ರೀಧರ್ ಇನ್ನಿತರರು ಈ ಜಾಗೃತಿ ಪ್ರವಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ಗಿರೀಶ್ ಕಾಮತ್ ಇನ್ನಿತರರು ಉಪಸ್ಥಿತರಿದ್ದರು.
[ಸಾಂದರ್ಭಿಕ ಚಿತ್ರ]