ಅಧಿಕಾರ ಕಳೆದುಕೊಳ್ಳುತ್ತಾ ಬಿಜೆಪಿ ಸರ್ಕಾರ..?
ಆಡಳಿತ ಪಕ್ಷವಾಗಿರುವ ಬಿಜೆಪಿ ಅಧಿಕಾರವನ್ನು ಕಳೆದುಕೊಳ್ಳುತ್ತಾ ಎನ್ನುವ ಅನುಮಾನಗಳು ಕಾಡಿದೆ. ಕಾಂಗ್ರೆಸ್ ಇದೀಗ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿ ಎಂದು ದೇವರಿಗೆ ಪತ್ರ ಬರೆದಿದ್ದು ಅಚ್ಚರಿಗೆ ಕಾರಣವಾಗಿದೆ.
ಭೋಪಾಲ್ : ರಾಜಕೀಯದಲ್ಲಿ ತಮ್ಮ ವಿರೋಧಿಗಳನ್ನು ಮಣಿಸಲು ನಾಯಕರು ಯಜ್ಞ-ಯಾಗಾದಿಗಳನ್ನು, ಪೂಜೆ-ಪುರಸ್ಕಾರಗಳನ್ನು ಮಾಡಿದ್ದು ನೋಡಿದ್ದೇವೆ.
ಆದರೆ, ಮಧ್ಯಪ್ರದೇಶದಲ್ಲಿ ತಮ್ಮ ವಿರೋಧಿಯಾದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆಡಳಿತ ಕೊನೆಗೊಳಿಸುವಂತೆ ಪ್ರಾರ್ಥಿಸಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ದೇವರಿಗೇ ಪತ್ರ ಬರೆದಿದ್ದಾರೆ.
ಶನಿವಾರ ಉಜ್ಜೈನಿಯ ಮಹಾಕಾಲ ದೇವರ ಆಶೀರ್ವಾದ ಪಡೆದು, ರಾಜ್ಯಾದ್ಯಂತ ಚುನಾವಣಾ ಯಾತ್ರೆ ನಡೆಸಲು ಶಿವರಾಜ್ ನಿರ್ಧರಿಸಿದ್ದರೆ, ಕಮಲನಾಥ್ ಶುಕ್ರವಾರ ಮಹಾಕಾಲ ದೇವರಿಗೆ ಪತ್ರ ಬರೆದು, ಬಿಜೆಪಿ ಆಡಳಿತ ಕೊನೆಗೊಳಿಸುವಂತೆ ಕೋರಿದ್ದಾರೆ.
ಶಿವರಾಜ್ 2013ರಲ್ಲಿ ಮಹಾಕಾಲ ದೇವಸ್ಥಾನಕ್ಕೆ ಆಗಮಿಸಿ ರಾಜ್ಯವನ್ನು ಅತ್ಯುತ್ತಮ ರಾಜ್ಯವಾಗಿ ಮಾಡುವುದಾಗಿ ಭರವಸೆ ನೀಡಿ, ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಭರವಸೆಯನ್ನು ಈಡೇರಿಸದೆ ಮಾತಿಗೆ ತಪ್ಪಿರುವ ಅವರನ್ನು ಶಿಕ್ಷಿಸುವಂತೆ ಕಮಲನಾಥ್ ಪತ್ರದಲ್ಲಿ ವಿನಂತಿಸಿದ್ದಾರೆ.