ಸಿಎಂ ಸೇರಿ 11 ಶಾಸಕರ ವಿರುದ್ಧ ಆರೋಪಪಟ್ಟಿ
ಹಲ್ಲೆ ಪ್ರಕರಣವೊಂದರ ಸಂಬಂಧ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ 11 ಶಾಸಕರ ವಿರುದ್ಧ ಇದೀಗ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ದಾಖಲು ಮಾಡಲಾಗಿದೆ.
ನವದೆಹಲಿ: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನ್ಷು ಪ್ರಕಾಶ್ ಮೇಲೆ ನಡೆದಿತ್ತು ಎನ್ನಲಾದ ಪ್ರಕರಣ ಸಂಬಂಧ ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ಆರೋಪಪಟ್ಟಿಸಲ್ಲಿಸಿದ್ದು, ಅದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಆಮ್ಆದ್ಮಿ ಪಕ್ಷದ ಇತರೆ 11 ಶಾಸಕರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ.
ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟೇಟ್ ಸಮರ್ ವಿಶಾಲ್ ನ್ಯಾಯಪೀಠದ ಮುಂದೆ ದೋಷಾರೋಪ ಪಟ್ಟಿದಾಖಲಾಗಿದೆ. ಶಾಸಕರುಗಳಾದ ಅಮಾನತುಲ್ಲಾ ಖಾನ್, ಪ್ರಕಾಶ್ ಜರ್ವಾಲ್, ನಿತಿನ್ ತ್ಯಾಗಿ, ರಿತುರಾಜ್ ಗೋವಿಂದ್, ಸಂಜೀವ್ ಜಾ, ಅಜಯ್ ದತ್, ರಾಜೇಶ್ ರಿಶಿ, ರಾಜೇಶ್ ಗುಪ್ತ, ಮದನ್ ಲಾಲ್, ಪ್ರವೀಣ್ ಕುಮಾರ್, ದಿನೇಶ್ ಮೊಹಾನಿಯಾ ಹೆಸರು ದೋಷಾರೋಪ ಪಟ್ಟಿಯಲ್ಲಿದೆ.
7 ವರ್ಷ ಜೈಲು: ಆಮ್ಆದ್ಮಿ ಪಕ್ಷದ ಸಿಎಂ, ಶಾಸಕರ ವಿರುದ್ಧ ಅಕ್ರಮ ಬಂಧನ, ಸರ್ಕಾರಿ ಸಿಬ್ಬಂದಿಗೆ ಕರ್ತವ್ಯ ನಿಭಾಯಿಸಲು ಅಡ್ಡಿ ಪಡಿಸಲು ಕ್ರಿಮಿನಲ್ ಬಲ ಪ್ರಯೋಗ ಮೊದಲಾದ ದೋಷಾರೋಪ ಹೊರಿಸಲಾಗಿದೆ. ಆ.25ರಂದು ದೋಷಾರೋಪ ಪರಿಶೀಲನೆಗೆ ಕೋರ್ಟ್ ದಿನ ನಿಗದಿಪಡಿಸಿದೆ. ಒಂದು ವೇಳೆ ಆರೋಪಿಗಳ ಮೇಲೆ ದೋಷ ಸಾಬೀತಾದಲ್ಲಿ ಅವರಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿರುತ್ತದೆ.
ಏನಿದು ಪ್ರಕರಣ?: 2018ರ ಫೆ.19ರಂದು ವಿಷಯವೊಂದರ ಚರ್ಚೆಗಾಗಿ ರಾತ್ರಿ ತಮ್ಮ ನಿವಾಸಕ್ಕೆ ಆಗಮಿಸುವಂತೆ ಅನ್ಷು ಪ್ರಕಾಶ್ಗೆ ಸಿಎಂ ಕೇಜ್ರಿವಾಲ್ ಸೂಚಿಸಿದ್ದರು. ಹೀಗೆ ಅವರು ಬಂದಿದ್ದ ವೇಳೆ ಸಿಎಂ ಮತ್ತು ಅನ್ಷು ಪ್ರಕಾಶ್ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಅನ್ಷು ಪ್ರಕಾಶ್ ಮೇಲೆ ಸಿಎಂ ಸೇರಿದಂತೆ ಸ್ಥಳದಲ್ಲಿ ಆಪ್ ಶಾಸಕರು ಹಲ್ಲೆ ನಡೆಸಿದರು ಎಂಬ ಆರೋಪವಿದೆ. ಈ ಆರೋಪವನ್ನು ಆಮ್ಆದ್ಮಿ ಪಕ್ಷ ಮೊದಲಿನಿಂದಲೂ ತಿರಸ್ಕರಿಸುತ್ತಲೇ ಬಂದಿತ್ತು.
ಈ ಘಟನೆ ಬಳಿಕವೇ ದೆಹಲಿ ಸರ್ಕಾರದ ವಿರುದ್ಧ ಐಎಎಸ್ ಅಧಿಕಾರಿಗಳು ಅಸಹಕಾರ ಪ್ರತಿಭಟನೆ ಆರಂಭಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿ, ಸ್ವತಃ ಸಿಎಂ ಕೇಜ್ರಿವಾಲ್ ಅವರೇ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಒಂದು ವಾರ ಪ್ರತಿಭಟನೆ ಕುಳಿತಿದ್ದರು.