ಲೋಕಾಯುಕ್ತ ಕೊಲೆಯತ್ನಕ್ಕೆ ಹೊಸ ಟ್ವಿಸ್ಟ್! ಹಲ್ಲೆ ಹಿಂದೆ ವ್ಯವಸ್ಥಿತ ಸಂಚು?
- ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಚಾಕು ಇರಿತ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡ?
- ಉದ್ದೇಶ ಪೂರ್ವಕವಾಗಿ ಆರೋಪಿ ತೇಜ್ ರಾಜ್ ಶರ್ಮಾ ಮೂಲಕ ಹಲ್ಲೆ ನಡೆಸಿರುವ ದುಷ್ಟ ಶಕ್ತಿಗಳು?
ಬೆಂಗಳೂರು: ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ನ್ಯಾ. ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ನಡೆಸಿರುವುದು ಬರೇ ಹತಾಶೆಯ ಕೃತ್ಯವಲ್ಲ, ಬದಲಾಗಿ ಅದರ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ ಎಂಬ ಅನುಮಾನಗಳು ಹುಟ್ಟಿವೆ.
ಕೆಲವು ‘ಕಾಣದ ಕೈಗಳು’ ಉದ್ದೇಶ ಪೂರ್ವಕವಾಗಿ ಆರೋಪಿ ತೇಜ್ ರಾಜ್ ಶರ್ಮಾ ಮೂಲಕ ವಿಶ್ವನಾಥ್ ಶೆಟ್ಟಿ ಮೇಲೆ ಹಲ್ಲೆ ನಡೆಸಿವೆಯೋ? ಎಂಬ ಬಗ್ಗೆ ಸಿಸಿಬಿ ಪೊಲೀಸರರು ತನಿಖೆ ನಡೆಸುತ್ತಿದ್ದಾರೆ.
ಸಿಸಿಬಿ ಪೊಲೀಸರಿಂದ ಆ ದುಷ್ಟಶಕ್ತಿಯ ಹುಡುಕಾಟ ನಡೆದಿದೆ. ಅದಕ್ಕಾಗಿ ಸಿಸಿಬಿ ಪೊಲೀಸರು ಮಂಪರು ಪರೀಕ್ಷೆಯ ಮೊರೆಹೋಗಿದ್ದಾರೆ.
ಈ ಹಿಂದೆ ಸಿಸಿಬಿ ಪೊಲೀಸರು ತನಿಖೆ ನಡೆಸಿ ಸಲ್ಲಿಸಿದ್ದ ಚಾರ್ಜ್ಶೀಟ್ನ್ನು ಕಂಡು ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಕೆಂಡಾಮಂಡಲರಾಗಿದ್ದರು. ಆರೋಪಿ ಹೇಳಿದ್ದನ್ನು ಮಾತ್ರ ದಾಖಲಿಸಿದ್ದೀರಿ, ಆತನ ಹಿಂದಿರುವ ದುಷ್ಟಶಕ್ತಿ ಹುಡುಕಿ ಎಂದಿದ್ದರು.
ಬಳಿಕ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರ ಸೂಚನೆ ಮೇರೆಗೆ ಮರುತನಿಖೆಗೆ ಇಳಿದಿರುವ ಸಿಸಿಬಿ, ಎಷ್ಟೇ ಪ್ರಯತ್ನ ಪಟ್ಟರೂ ತನ್ನ ಹಿಂದಿನ ಶಕ್ತಿಯ ಬಗ್ಗೆ ಬಾಯ್ಬಿಡದ ತೇಜ್ರಾಜ್ ಶರ್ಮಾ ಬಾಯಿ ಬಿಡಿಸಲು ಮಂಪರು ಪರೀಕ್ಷೆಗೆ ಮುಂದಾಗಿದ್ದರು.
ಇದೀಗ ಕೋರ್ಟ್ ಅನುಮತಿ ಪಡೆದು, ಡಿಸಿಪಿ ಜೀನೆಂದ್ರ ಖಣಗಾವಿ ನೇತೃತ್ವದಲ್ಲಿ ಸಿಸಿಬಿ ತಂಡ ಅಹಮದಾಬಾದ್ಗೆ ತೆರಳಿದ್ದು, ಬುಧವಾರ ತೇಜ್ರಾಜ್ ಶರ್ಮಾನನ್ನು ಮಂಪರು ಪರೀಕ್ಷೆಗೊಳಪಡಿಸಲಿದೆ. ಮಂಪರು ಪರೀಕ್ಷೆಯ ನಂತರ ಹಲ್ಲೆಯ ಹಿಂದಿನ ಶಕ್ತಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.
ಕಳೆದ ಮಾ.7 ರಂದು, ವಿಧಾನಸೌಧ ಪಕ್ಕದಲ್ಲಿರುವ ಲೋಕಾಯುಕ್ತ ಕಟ್ಟಡದಲ್ಲಿರುವ ನ್ಯಾ. ಶೆಟ್ಟಿ ಕಚೇರಿಗೆ ಸಂದರ್ಶಕನ ಸೋಗಿನಲ್ಲಿ ತೆರಳಿ ಆರೋಪಿ ತೇಜ್ರಾಜ್ ಶರ್ಮಾ ಚಾಕುವಿನಿಂದ ಹಲ್ಲೆ ನಡೆಸಿದ್ದನು.