ಬಕ್ರೀದ್ ಬಲಿಗಾಗಿ ರಾಜಸ್ಥಾನದಿಂದ ಬಂದಿವೆ 10 ಒಂಟೆಗಳು
ಶಿವಾಜಿನಗರದ ಸ್ಥಳೀಯ ನಿವಾಸಿ ಅಕ್ಲಮ್ ಬಾಷಾ ಹೇಳುವ ಪ್ರಕಾರ ಇಲ್ಲಿ ಪ್ರತೀ ವರ್ಷ ಬಕ್ರೀದ್ ಹಬ್ಬದಂದು ಹೈದರಾಬಾದ್ ಮತ್ತಿತರ ಪ್ರದೇಶಗಳಿಂದ ಒಂಟೆಗಳನ್ನು ತರಿಸಿ ಕಡಿಯಲಾಗುತ್ತದೆ. ಪೊಲೀಸರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ಸಮ್ಮುಖದಲ್ಲೇ ಒಂಟೆಗಳನ್ನು ಇಲ್ಲಿ ಅನ್'ಲೋಡ್ ಮಾಡುತ್ತದೆ ಎಂದು ಬಾಷಾ ಹೇಳುತ್ತಾರೆ.
ಬೆಂಗಳೂರು(ಆ. 24): ರಾಜ್ಯದಲ್ಲಿ ಒಂಟೆಗಳಿಗೆ ನಿಷೇಧವಿದ್ದರೂ ಶಿವಾಜಿನಗರದಲ್ಲಿ ಹಲವು ಒಂಟೆಗಳನ್ನು ಕರೆತಂದಿರುವ ವಿಷಯ ಬೆಳಕಿಗೆ ಬಂದಿದೆ. ರಾಜಸ್ಥಾನದಿಂದ 10 ಒಂಟೆಗಳು ಬಂದಿವೆ. ಬಕ್ರೀದ್ ಹಬ್ಬಕ್ಕೆ ಬಲಿಗಾಗಿ ಇವುಗಳನ್ನು ಕರೆತಂದಿರುವ ಅನುಮಾನವಿದೆ. ಆದರೆ, ಕರ್ನಾಟಕ ರಾಜ್ಯದೊಳಗೆ ಒಂಟೆಗಳನ್ನು ತರುವುದು ಅಕ್ರಮವಾಗಿರುವ ಹಿನ್ನೆಲೆಯಲ್ಲಿ ಇದು ಗಂಭೀರ ಪ್ರಕರಣವೆನಿಸಿದೆ. ಗೋರಕ್ಷಕರು ಹಾಗೂ ಪ್ರಾಣಿ ದಯಾ ಸಂಘದವರು ಒಂಟೆಗಳ ಇರುವಿಕೆ ಬಗ್ಗೆ ಶಿವಾಜಿನಗರ ಹೊರವಲಯ ಠಾಣೆಯ ಪೊಲೀಸರಿಗೆ ಮಾಹಿತಿ ಕೊಟ್ಟರೂ ಏನೂ ಪ್ರಯೋಜನವಾಗಿಲ್ಲವೆನ್ನಲಾಗಿದೆ. ಪೊಲೀಸರು 2 ಒಂಟೆಗಳನ್ನು ಹಿಡಿದು ಪೊಲೀಸ್ ಕ್ವಾರ್ಟರ್ಸ್'ನಲ್ಲಿ ಇಟ್ಟಿರುವುದು ಬಿಟ್ಟರೆ ಉಳಿದಂತೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಅಹ್ಮದ್ ಖುರೇಷಿ ಸೇರಿದಂತೆ ಮೂರ್ನಾಲ್ಕು ಜನರು ರಾಜಸ್ಥಾನದಿಂದ ಈ ಒಂಟೆಗಳನ್ನು ತರಿಸಿರುವ ಕುರಿತು ಸುವರ್ಣನ್ಯೂಸ್'ಗೆ ಮಾಹಿತಿ ಲಭಿಸಿದೆ.
ಶಿವಾಜಿನಗರದ ಸ್ಥಳೀಯ ನಿವಾಸಿ ಅಕ್ಲಮ್ ಬಾಷಾ ಹೇಳುವ ಪ್ರಕಾರ ಇಲ್ಲಿ ಪ್ರತೀ ವರ್ಷ ಬಕ್ರೀದ್ ಹಬ್ಬದಂದು ಹೈದರಾಬಾದ್ ಮತ್ತಿತರ ಪ್ರದೇಶಗಳಿಂದ ಒಂಟೆಗಳನ್ನು ತರಿಸಿ ಕಡಿಯಲಾಗುತ್ತದೆ. ಪೊಲೀಸರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ಸಮ್ಮುಖದಲ್ಲೇ ಒಂಟೆಗಳನ್ನು ಇಲ್ಲಿ ಅನ್'ಲೋಡ್ ಮಾಡುತ್ತದೆ ಎಂದು ಬಾಷಾ ಹೇಳುತ್ತಾರೆ.
ಒಂಟೆ ಯಾಕೆ ನಿಷಿದ್ಧ?
ಒಂಟೆಗಳು ಬದುಕಲು ವಿಶೇಷ ವಾತಾವರಣವಿರಬೇಕು. ರಾಜ್ಯದಲ್ಲಿ ಆ ಪ್ರಾಣಿಗಳಿಗೆ ಅನುಕೂಲವಾಗುವಂಥ ಪರಿಸರವಿಲ್ಲ. ಈ ಹಿನ್ನೆಲೆಯಲ್ಲಿ 2006ರಲ್ಲಿ ಹೈಕೋರ್ಟ್ ರಾಜ್ಯದಲ್ಲಿ ಒಂಟೆ ಇರಿಸಿಕೊಳ್ಳುವುದನ್ನು ನಿಷೇಧಿಸಿತು. ಆಗಿನಿಂದ ರಾಜ್ಯದಲ್ಲಿ ಯಾವುದೇ ರೀತಿಯಲ್ಲೂ ಒಂಟೆಯನ್ನು ತರುವಂತಿಲ್ಲ.
ಈ ಕಾನೂನು ಇದ್ದರೂ ರಾಜಾರೋಷವಾಗಿ ಒಂಟೆಗಳನ್ನು ಕರೆತರುತ್ತಿರುವುದು ಅಕ್ರಮ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾನೂನು ಪಾಲಿಸಬೇಕಾದ ಪೊಲೀಸರೇ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆನ್ನುವುದು ದುರದೃಷ್ಟಕರ.