ರಮೇಶ್ ಜಾರಕೀಹೊಳಿಗೆ ಬಿಎಸ್ವೈ ಆಫರ್!
ಶತಾಯಗತಾಯ ಮುಖ್ಯಮಂತ್ರಿ ಆಗಲೇಬೇಕೆಂದು ಬಿಎಸ್ವೈ ಹೈಕಮಾಂಡ್ ಅಮಿತ್ ಶಾ ಜೊತೆ ಮಾತುಕತೆ ನಡೆಸಿರುವುದು ಹಳೆ ವಿಚಾರ. ಇಂಟರೆಸ್ಟಿಂಗ್ ವಿಷ್ಯ ಅದಲ್ಲ. ರಮೇಶ್ ಜಾರಕಿಹೊಳಿಗೆ ತಮ್ಮ ಪಕ್ಷಕ್ಕೆ ಬರುವಂತೆ ಆಫರ್ ನೀಡಿದ್ದರು ಎನ್ನಲಾಗಿದೆ. ಆದರೆ ರಮೇಶ್ ಜಾರಕೀಹೊಳಿ ನೈಸಾಗಿ ಜಾರಿಕೊಂಡರು.
ಬೆಂಗಳೂರು (ಆ. 14): ಏನಕೇನ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಮನಸ್ಸಿನಲ್ಲಿಯೇ ನಿರ್ಧಾರ ಮಾಡಿರುವ 75 ರ ಯಡಿಯೂರಪ್ಪ ತರಾತುರಿಯಲ್ಲಿ ದಿಲ್ಲಿಗೆ ಬಂದು ಮೋದಿ ಮತ್ತು ಶಾ ಅವರನ್ನು ಭೇಟಿ ಮಾಡಿದ್ದು ಏಕೆ ಎಂಬ ಬಗ್ಗೆ ನಾನಾ ಊಹಾಪೋಹಗಳಿವೆ ಬಿಡಿ.
ಆದರೆ ಸೆಂಟ್ರಲ್ ಹಾಲ್ನಲ್ಲಿ ತನ್ನನ್ನು ಎದುರಾದ ಸಚಿವ ರಮೇಶ್ ಜಾರಕಿಹೊಳಿಯನ್ನು ಪಕ್ಕಕ್ಕೆ ಬಲವಂತವಾಗಿ ಕರೆದುಕೊಂಡು ಹೋದ ಯಡಿಯೂರಪ್ಪ, ‘ಅಲ್ಲಪ್ಪ ರಮೇಶ, ಎಷ್ಟೊಂದು ಸತಾಯಿಸುತ್ತೀಯಾ? ನಮ್ಮ ಜೊತೆ ಬಂದುಬಿಡು, ಒಳ್ಳೆ ಸ್ಥಾನಮಾನ ಕೊಡುತ್ತೇನೆ. ನಿನ್ನ ಜೊತೆ ಇರುವ ಎಲ್ಲ ಶಾಸಕರಿಗೂ ಮಂತ್ರಿಸ್ಥಾನ ಪಕ್ಕಾ. ದಿಲ್ಲಿ ನಾಯಕರ ಎದುರು ಮಾತುಕತೆ’ ಎಂದು ಹೇಳಿದ್ದಾರಂತೆ. ಇದಕ್ಕೆ ನೋಡೋಣ ತಡೀರಿ ಎಂದು ರಮೇಶ್ ನೈಸಾಗಿ ಜಾರಿಕೊಂಡರು.
ಆದರೆ ಸೆಂಟ್ರಲ್ ಹಾಲ್ನಲ್ಲಿ ಸಿಕ್ಕ ಕೆಲ ಬಿಜೆಪಿ ನಾಯಕರ ಬಳಿ ರಮೇಶ್ ಜಾರಕಿಹೊಳಿ ಬಹಳ ಹೊತ್ತು ಹರಟೆ ಹೊಡೆಯುತ್ತಾ ಕುಳಿತಿದ್ದರು.
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ