‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ’
ಸರ್ಕಾರವನ್ನು ಪತಗೊಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಸರ್ಕಾರ ಬಿದ್ದರೂ ಯಡಿಯೂರಪ್ಪ ಮುಖ್ಯಮಂತ್ರಿ ಯಾಗುವುದಿಲ್ಲ. ಇದನ್ನು ಬಿಜೆಪಿಯವರೇ ಹೇಳುತ್ತಿದ್ದಾರೆ ಎಂದು ಎಚ್.ಡಿ ರೇವಣ್ಣ ಹೇಳಿದ್ದಾರೆ.
ಬೆಂಗಳೂರು : ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದ್ದು, ಒಂದು ವೇಳೆ ಮೈತ್ರಿ ಸರ್ಕಾರ ಪತನವಾದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗು ವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರವನ್ನು ಪತಗೊಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಸರ್ಕಾರ ಬಿದ್ದರೂ ಯಡಿಯೂರಪ್ಪ ಮುಖ್ಯಮಂತ್ರಿ ಯಾಗುವುದಿಲ್ಲ. ಇದನ್ನು ಬಿಜೆಪಿಯವರೇ ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಅವರ ಪಕ್ಷದ ಕೆಲವು ನಾಯಕರಿಗೆ ಮನಸ್ಸಿಲ್ಲ. ಸಮಯ ಬಂದಾಗ ಅವರ ಹೆಸರನ್ನು ಬಹಿರಂಗ ಪಡಿಸುತ್ತೇನೆ ಎಂದು ತಿಳಿಸಿದರು.
ಸರ್ಕಾರ ಪತವಾದರೆ ರಾಜ್ಯಪಾಲರ ಆಡಳಿತ ಬರುತ್ತದೆ. ತರುವಾಯ ಇತರೆ ರಾಜ್ಯಗಳ ಜತೆಗೆ ಕರ್ನಾಟಕದಲ್ಲಿಯೂ ಚುನಾವಣೆ ನಡೆಯಲಿದೆ. ಬಿಜೆಪಿ ಹೇಳುವ ಹಾಗೆ ಸರ್ಕಾರ ಬಿದ್ದು ಹೋಗುವುದಿಲ್ಲ. ಪೂರ್ಣವಧಿಯನ್ನು ಪೂರೈಸಲಿದ್ದು, ಯಾವುದೇ ಸಮಸ್ಯೆ ಇಲ್ಲ. ದೇವರ ದಯೆಯಿಂದ ಸರ್ಕಾರ ರಚಿಸಿದ್ದೇವೆ.
ಎಷ್ಟು ವರ್ಷ ಇರುತ್ತದೋ, ಅಷ್ಟು ವರ್ಷ ಕೆಲಸ ಮಾಡುತ್ತೇವೆ. 10 ವರ್ಷ ಪ್ರತಿಪಕ್ಷದಲ್ಲಿ ಕೆಲಸ ಮಾಡಿದ್ದೇವೆ. ಸರ್ಕಾರ ಬಿದ್ದು ಹೋಗುತ್ತದೆ ಎಂದರೆ ಅದನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಎಂದರು. ಬಿಜೆಪಿ ಈಗಲೇ ಬರೆದಿಟ್ಟುಕೊಳ್ಳಲಿ ಬಿಜೆಪಿಗೆ ಕೈಗೆ ಯಾವುದೇ ಕಾರಣಕ್ಕೂ ಅಧಿಕಾರ ಸಿಗುವುದಿಲ್ಲ. ಈ ಬಗ್ಗೆ ಭವಿಷ್ಯ ಬೇಕಾದರೆ ಹೇಳುತ್ತೇನೆ ಎಂದು ಇದೇ ವೇಳೆ ಲೇವಡಿ ಮಾಡಿದರು. ಪುತ್ರ ಪ್ರಜ್ವಲ್ ರೇವಣ್ಣ, ಅತ್ತೆ ಕಾಳಮ್ಮ ಅವರು ಹಾಸನದಲ್ಲಿ ಭೂ ಕಬಳಿಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರೇವಣ್ಣ, ಸರ್ಕಾರಿ ಜಮೀನು ಕಬಳಿಸಿದರೆ ಮುಟ್ಟು ಗೋಲು ಹಾಕಿಕೊಳ್ಳಬಹುದು ಎಂದರು.