ಭೀಕರ ದುರಂತ : ಮೃತದೇಹ 1ಕಿಮೀ ಎಳೆದು ತಂದ ರೈಲು
ಯಶವಂತಪುರ ಎಕ್ಸ್ ಪ್ರೆಸ್ ರೈಲು ಉಪ್ಪಾರಹಳ್ಳಿ ಸೇತುವೆ ಬಳಿ ಬರುತ್ತಿದ್ದಂತೆ ಯುವಕನ್ನೊಬ್ಬ ರೈಲಿಗೆ ಸಿಲುಕಿ ಪ್ರಾಣಬಿಟ್ಟಿದ್ದಾನೆ. ಈ ವೇಳೆ ಆತನ ಮೃತದೇಹವನ್ನು ರೈಲು 1 ಕಿ.ಮೀನಷ್ಟು ದೂರ ಎಳೆದು ತಂದಿದೆ.
ತುಮಕೂರು: ಎಂಜಿನ್ ಮುಂಭಾಗಕ್ಕೆ ಸಿಲುಕಿದ ಯುವಕನ ಮೃತದೇಹದೊಂದಿಗೆ ನಿಲ್ದಾಣಕ್ಕೆ ಬಂದ ರೈಲು ನೋಡಿ ಕ್ಷಣಹೊತ್ತು ಜನ ಗಾಬರಿಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ಘಟನೆಯಿಂದ ಕೆಲಕಾಲ ರೈಲು ನಿಲ್ದಾಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬೆಳಗ್ಗೆ ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದ ಯಶವಂತಪುರ ಎಕ್ಸ್ ಪ್ರೆಸ್ ರೈಲು ಉಪ್ಪಾರಹಳ್ಳಿ ಸೇತುವೆ ಬಳಿ ಬರುತ್ತಿದ್ದಂತೆ ಯುವಕನ್ನೊಬ್ಬ ರೈಲಿಗೆ ಸಿಲುಕಿ ಪ್ರಾಣಬಿಟ್ಟಿದ್ದಾನೆ. ಈ ವೇಳೆ ಆತನ ಮೃತದೇಹ ಎಂಜಿನ್ ಮುಂಭಾಗ ಸಿಲುಕಿಕೊಂಡಿತ್ತು.
ಹೀಗೆ ಮೃತದೇಹ ಹೊತ್ತ ರೈಲು ಸುಮಾರು 1 ಕಿ.ಮೀ. ಕ್ರಮಿಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರು ಎಂಜಿನ್ನಲ್ಲಿ ಮೃತದೇಹ ಸಿಕ್ಕಿಹಾಕಿಕೊಂಡಿರುವುದನ್ನು ನೋಡಿ ಗಾಬರಿಗೊಂಡಿದ್ದಾರೆ. ಮೃತದೇಹದೊಂದಿಗೆ ಬಂದ ರೈಲನ್ನು ನೋಡುತ್ತಿದ್ದಂತೆ ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ರೈಲ್ವೆ ಪೊಲೀಸರು ಪರಿಶೀಲಿಸಿ ಎಂಜಿನ್ಗೆ ಸಿಲುಕಿಕೊಂಡಿದ್ದ ದೇಹವನ್ನು ಇಳಿಸಿದ್ದಾರೆ. ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಈ ಘಟನೆಯಿಂದ ಗೊಂದಲ ಉಂಟಾಗಿತ್ತು.
ಮೃತ ವ್ಯಕ್ತಿ ಯಾರೆಂಬುದು ತಿಳಿದಿಲ್ಲ. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಮೃತನ ಸಂಬಂಧಿಕರಿಗಾಗಿ ರೈಲ್ವೆ ಪೊಲೀಸರು ಹುಡುಕುತ್ತಿದ್ದಾರೆ. 20 ನಿಮಿಷಗಳ ಗೊಂದಲದ ಬಳಿಕ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.