ಮದುವೆ ಆಗು ಎಂದ ಪ್ರಿಯತಮೆಗೆ ಪ್ರಿಯತಮ ಮಾಡಿದ್ದೇನು..?
ಹಲವು ದಿನಗಳಿಂದ ಸಂಬಂಧದಲ್ಲಿ ಇದ್ದ ಪ್ರಿತಮೆಯು ತನ್ನನ್ನು ವಿವಾಹವಾಗು ಎಂದಿದ್ದಕ್ಕೆ ಆ ಪ್ರಿಯತಮನೋರ್ವ ಆಕೆಯನ್ನು ಹತ್ಯೆ ಮಾಡಿ ಅವಳ ಚಿನ್ನಾಭರಣಗಳನ್ನು ಲೂಟಿ ಮಾಡಿ ತೆರಳಿದ್ದು, ಆತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರು : ಕೆಲ ದಿನಗಳ ಹಿಂದೆ ಗೊರಗುಂಟೆಪಾಳ್ಯದ 4ನೇ ಕ್ರಾಸ್ನಲ್ಲಿ ನಡೆದಿದ್ದ ಗಾರ್ಮೆಂಟ್ಸ್ ಉದ್ಯೋಗಿ ರುಕ್ಮಿಣಿ ಕೊಲೆ ಪ್ರಕರಣ ಸಂಬಂಧ ಮೃತಳ ಗೆಳೆಯನನ್ನು ಆರ್ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚೌಡೇಶ್ವರಿ ನಗರದ ನಿವಾಸಿ ರಮೇಶ್ ಬಂಧಿತನಾಗಿದ್ದು, ಆರೋಪಿಯಿಂದ ಕೃತ್ಯಕ್ಕೆ ಬಳಸಲಾದ ಮಾರಕಾಸ್ತ್ರ ಹಾಗೂ ಮೃತಳ ಮನೆಯಲ್ಲಿ ದೋಚಲಾಗಿದ್ದ ಚಿನ್ನಾಭರಣ ಜಪ್ತಿಯಾಗಿದೆ. ಹಣಕಾಸು ವಿಚಾರವಾಗಿ ಅ.25ರಂದು ರುಕ್ಮಿಣಿ ಅವರನ್ನು ಕೊಂದು ರಮೇಶ್ ಪರಾರಿಯಾಗಿದ್ದ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಇನ್ಸ್ಪೆಕ್ಟರ್ ಮೊಹಮ್ಮದ್ ಮುಕಾರಮ್ ನೇತೃತ್ವದ ತಂಡವು, ಮೊಬೈಲ್ ಕರೆಗಳ ಮಾಹಿತಿ ಆಧಾರಿಸಿ ಆರೋಪಿಯನ್ನು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲವ್, ಸೆಕ್ಸ್, ದೋಖಾ:
ಸೋಮವಾರಪೇಟೆ ತಾಲೂಕಿನ ರಮೇಶ್, ಚೌಡೇಶ್ವರಿ ನಗರದಲ್ಲಿ ತನ್ನ ಕುಟುಂಬದ ಜತೆ ನಗರದಲ್ಲಿ ನೆಲೆಸಿದ್ದ. ಪೀಣ್ಯ ಹತ್ತಿರದ ಗಾರ್ಮೆಂಟ್ಸ್ನಲ್ಲಿ ರುಕ್ಮಿಣಿ ಮತ್ತು ರಮೇಶ್ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆಗ ಅವರಿಬ್ಬರ ಮಧ್ಯೆ ಸ್ನೇಹವಾಗಿ ಕ್ರಮೇಣ ಅದು ಸಂಬಂಧಕ್ಕೆ ತಿರುಗಿದೆ. ಈ ಗೆಳೆತನದಲ್ಲಿ ಅವರ ನಡುವೆ ಹಣಕಾಸು ವ್ಯವಹಾರವೂ ಸಹ ನಡೆದಿತ್ತು. ಇತ್ತೀಚಿಗೆ ರುಕ್ಮೀಣಿ, ‘ನೀನು ವಿವಾಹ ವಿಚ್ಛೇದನ ಪಡೆದು ತನ್ನನ್ನು ಮದುವೆ ಮಾಡಿಕೋ’ ಎಂದೂ ಪ್ರಿಯಕರ ರಮೇಶ್ನನ್ನು ಒತ್ತಾಯಿಸುತ್ತಿದ್ದಳು. ಇದಕ್ಕೆ ಆತನ ವಿರೋಧವಿತ್ತು. ಇದೇ ಮದುವೆ ವಿಷಯವಾಗಿ ಪ್ರೇಮಿಗಳ ನಡುವೆ ಮನಸ್ತಾಪವಾಗಿದೆ.
ಇತ್ತ ರಮೇಶ್ ಕುಟುಂಬದಲ್ಲೂ ಕೌಟುಂಬಿಕ ಕಲಹ ಶುರುವಾಗಿದೆ. ಇದರ ನಡುವೆ ಹಣಕಾಸು ಸಮಸ್ಯೆಗೆ ಆತ ಸಿಲುಕಿದ್ದಾನೆ. ಮೂರು ತಿಂಗಳು ಬಾಡಿಗೆ ನೀಡದ ಕಾರಣಕ್ಕೆ ರಮೇಶ್ ಮನೆ ಮಾಲೀಕರು, ಮನೆಗೆ ಬೀಗ ಹಾಕಿದ್ದರು. ಇದರಿಂದ ಆತನ ಪತ್ನಿ ಮತ್ತು ಮಕ್ಕಳು ಬೀದಿಗೆ ಬಿದ್ದಿದ್ದರು. ಈ ಸಮಸ್ಯೆ ಹಿನ್ನೆಲೆಯಲ್ಲಿ ರಮೇಶ್, ರುಕ್ಮಿಣಿ ಬಳಿ ಹಣಕಾಸು ನೆರವು ಕೋರಿದ್ದ. ಈ ಮನವಿಗೆ ತಿರಸ್ಕರಿಸಿದ ಆಕೆ, ಮದುವೆ ಮಾಡಿಕೊಳ್ಳುವಂತೆ ಮತ್ತೆ ತಗಾದೆ ತೆಗೆದಿದ್ದಳು. ಇದರಿಂದ ಕೆರಳಿದ ರಮೇಶ್, ಅ.25ರಂದು ಪ್ರಿಯತಮೆ ಮನೆಗೆ ತೆರಳಿ ಆಕೆ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಮೃತಳು ಧರಿಸಿದ್ದ ಚಿನ್ನಾಭರಣ ದೋಚಿದ್ದ. ಅವುಗಳನ್ನು ಚಿನ್ನಾಭರಣ ವ್ಯಾಪಾರಿ ಬಳಿ ಅಡಮಾನವಿಟ್ಟು .70 ಸಾವಿರ ಪಡೆದಿದ್ದ. ಈ ಹಣವನ್ನು ತನ್ನ ಪತ್ನಿಗೆ ಮನೆಗೆ ಬಾಡಿಗೆ ಕಟ್ಟುವಂತೆ ನೀಡಿದ ಆತ, ತಾನು ಕೆಲಸದ ನಿಮಿತ್ತ ಹೊರ ಹೋಗುತ್ತಿರುವುದಾಗಿ ನಗರದಿಂದ ತಪ್ಪಿಸಿಕೊಂಡಿದ್ದ.
ಬಂಧನ ಭೀತಿಯಿಂದ ರಮೇಶ್, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹೀಗೆ ಕರಾವಳಿ ಪ್ರದೇಶದ ಧಾರ್ಮಿಕ ಕೇಂದ್ರಗಳಲ್ಲಿ ರಕ್ಷಣೆ ಪಡೆದಿದ್ದ. ಕೊನೆಗೆ ಆತನ ಮೊಬೈಲ್ ಕರೆಗಳ ಮೂಲಕ ಜಾಡು ಹಿಡಿದು ಪೊಲೀಸರು ಬಲೆಗೆ ಹಾಕಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.