ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಬ್ಯಾಂಕುಗಳು ಬಂದ್
ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಬ್ಯಾಂಕ್ ಗಳು ಬಂದ್ ಆಗಿವೆ. ವೆತನ ಏರಿಕೆಗೆ ಆಗ್ರಹ, ವಿಲೀನ ಪ್ರಕ್ರಿಯೆಯನ್ನು ವಿರೋಧಿಸಿ ಬ್ಯಾಂಕ್ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ.
ದಾವಣಗೆರೆ : ಶ್ರೇಣಿ 1ರಿಂದ ಶ್ರೇಣಿ 7ರ ಅಧಿಕಾರಿಗಳ ವೇತನ ಪರಿಷ್ಕರಣೆಗೆ ಸಮ್ಮತಿ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದಿಂದ ಬ್ಯಾಂಕ್ಗಳನ್ನು ಬಂದ್ ಮಾಡುವ ಮೂಲಕ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಂಡಿಪೇಟೆ ಶಾಖೆ ಎದುರು ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಸಂಘಟನೆ ಕಾರ್ಯದರ್ಶಿ ಕೆ.ಎನ್.ಗಿರಿರಾಜ, ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ವಿರುದ್ಧ ಪ್ರತಿ ಬಾರಿಯೂ ನಮ್ಮ ಹಕ್ಕು ಪಡೆಯಲು ಮುಷ್ಕರ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ನಮ್ಮ ಬೇಡಿಕೆಗಳು ಪ್ರಮುಖವಾಗಿ ಶ್ರೇಣಿ 1ರಿಂದ ಶ್ರೇಣಿ 7ರ ಅಧಿಕಾರಿಗಳ ವೇತನ ಪರಿಷ್ಕರಣೆಗೆ ಸಮ್ಮತಿ ನೀಡಬೇಕು. ಸಲ್ಲಿಸಿರುವ ಬೇಡಿಕೆಗಳ ಪ್ರಕಾರವೇ ವೇತನ ಪರಿಷ್ಕರಣೆಯಾಗಲೇಬೇಕು ಎಂದು ಆಗ್ರಹಿಸಿದರು.
ಐದು ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಬಂದ್ಬ್ಯಾಂಕ್ಗಳ ವಿಲೀನವನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಲಾಭದಾಯಕ ಅಥವಾ ಪಾವತಿಸುವ ಸಾಮರ್ಥ್ಯಕ್ಕೆ ತಳಕು ಹಾಕದೇ ಕನಿಷ್ಠ ವೇತನ ಸೂತ್ರದಲ್ಲೇ ವೇತನ ಪರಿಷ್ಕರಣೆಯಾಗಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ ಪ್ರಕಾರ ಎಲ್ಲಾ ಬ್ಯಾಂಕ್ಗಳ ಅಧಿಕಾರಿಗಳಿಗೆ ವೈದ್ಯಕೀಯ ವಿಮಾ ಯೋಜನೆ ನೀಡಬೇಕು. ಸಾರ್ವಜನಿಕ ವಲಯದ ಬ್ಯಾಂಕ್ಗಳ ವಿಲೀನಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರವನ್ನು ಕೈಬಿಡಬೇಕು. ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟುವಿಸ್ತಾರಗೊಳಿಸಬೇಕು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳ ಅಸ್ತಿತ್ವವೂ ಉಳಿಯಬೇಕು. ಬ್ಯಾಂಕ್ಗಳ ವಿಲೀನಕ್ಕೆ ತುದಿಗಾಲ ಮೇಲೆ ನಿಂತಿರುವ ಕೇಂದ್ರ ಸರ್ಕಾರ ತನ್ನ ನಿಲುವು, ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ತಾಕೀತು ಮಾಡಿದರು.
ಪೇಟಿಎಂ ಬ್ಯಾಂಕ್ ಮೇಲೆ ಆರ್ಬಿಐ ಮುನಿಸು: ಅದರಲ್ಲಿರೋ ನಿಮ್ಮ ಹಣ ಬಾಸು?ಕೆಲಸ ಹಾಗೂ ವೈಯಕ್ತಿಕ ಜೀವನದ ಮಧ್ಯ ಸಮನ್ವಯ ಕಾಪಾಡಿ, 5 ದಿನಗಳ ಬ್ಯಾಂಕಿಂಗ್ ಕೆಲಸವನ್ನು ಜಾರಿಗೊಳಿಸಬೇಕು. ಮೂಲ ಬ್ಯಾಂಕಿಂಗ್ ನಡೆಸಿ, ಅನುತ್ಪಾದಕ ಆಸ್ತಿಗಳ ಕಡಿತಕ್ಕೆ ಆದ್ಯತೆ ನೀಡಬೇಕು. ಎನ್ಪಿಎಸ್ ತೆಗೆದು ಹಾಕಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂಬುದೂ ಸೇರಿದಂತೆ ಸಂಘಟನೆಯ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಅವರು ತಾಕೀತು ಮಾಡಿದರು.
ಸಂಘಟನೆ ಮುಖಂಡರಾದ ಹರೀಶ, ಕೃಷ್ಣಪ್ಪ, ಆನಂದಮೂರ್ತಿ, ಸುರೇಶ, ಭಾರತಿ, ಎಲ್ಲಾ ಬ್ಯಾಂಕ್ಗಳ ಶಾಖೆಯ ಅಧಿಕಾರಿಗಳು ಪ್ರತಿಭಟನೆಯಲ್ಲಿದ್ದರು.