2019ಕ್ಕೆ ಮೋದಿ ಪರ ರಾಮ್ದೇವ್ ಪ್ರಚಾರ ಮಾಡಲ್ಲ..ಕಾರಣ ಏನು?
ತೈಲ ದರ ಏರಿಕೆಯದ್ದೇ ದೊಡ್ಡ ಸುದ್ದಿಯಾಗಿಗಿತ್ತು. ಕರ್ನಾಟಕ ರಾಜ್ಯ ಸರಕಾರ 2 ರೂ. ಇಳಿಸಿರುವುದು ಒಂದು ಕಡೆಯಾದರೆ ಕೇಂದ್ರ ಸರಕಾರ ಮಾತ್ರ ಯಾವ ಕ್ರಮ ತೆಗೆದುಕೊಂಡಿಲ್ಲ. ಇನ್ನೊಂದು ಕಡೆ ರಿಲಯನ್ಸ್ ಅಂಬಾನಿ 20 ರೂ. ಕಡಿಮೆಗೆ ಪೆಟ್ರೋಲ್ ನೀಡುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ಅದನ್ನೆಲ್ಲ ಮೀರಿಸುವ ಮತ್ತೊಂದು ಸುದ್ದಿಯನ್ನು ಯೋಗ ಗುರು ಬಾಬಾ ರಾಮ್ ದೇವ್ ನೀಡಿದ್ದಾರೆ. ನೀಡಿರುವುದು ಮಾತ್ರವಲ್ಲದೇ 2019ಕ್ಕೆ ಮೋದಿ ಪರ ಪ್ರಚಾರನೂ ಮಾಡಲ್ಲ ಎಂದಿದ್ದಾರೆ.
ನವದೆಹಲಿ[ಸೆ.18] ಪತಂಜಲಿ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಬಿಸಿ ಮುಟ್ಟಿಸಿರುವ ಯೋಗ ಗುರು ಬಾಬಾ ರಾಮಾ ದೇವ್ ಇದೀಗ ತೈಲ ಮಾರುಕಟ್ಟೆಗೆ ಹೆಜ್ಜೆ ಇಡಲಿದ್ದಾರೆಯೇ? ಹೀಗೊಂದು ಪ್ರಶ್ನೆ ಮೂಡಿದೆ. ಆದರೆ ಇದೆಲ್ಲದಕ್ಕಿಂತ ಹೆಚ್ಚಾಗಿ ರಾಮ್ ದೇವ್ ಇನ್ನೊಂದು ಮಾತು ಹೇಳಿದ್ದಾರೆ.
2019ರ ಚುನಾವಣೆಗೂ ಮುನ್ನ ತೈಲ ದರವನ್ನು ಕೇಂದ್ರ ಸರಕಾರ ಇಳಿಕೆ ಮಾಡದಿದ್ದರೆ ನರೇಂದ್ರ ಮೋದಿ ಅಥವಾ ಬಿಜೆಪಿ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ತೈಲ ಮಾರುಕಟ್ಟೆ ತಮಗೆ ಸಿಕ್ಕರೆ 35-40 ರೂ.ಗೆ ಪೆಟ್ರೋಲ್, ಡೀಸೆಲ್ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, ಒಂದೊಮ್ಮೆ ಕೇಂದ್ರ ಸರ್ಕಾರ ನನಗೆ ಅವಕಾಶ ನೀಡಿ ಕೆಲ ತೆರಿಗೆ ವಿನಾಯಿತಿ ಕೊಟ್ಟರೆ 35-40 ರೂ.ಗಳಿಗೆ ಪೆಟ್ರೋಲ್, ಡೀಸೆಲ್ ಒದಗಿಸಬಲ್ಲೆ ಎಂದು ಹೇಳಿದ್ದಾರೆ.
ತೈಲವನ್ನು ಜಿಎಸ್ ಟಿಯಡಿಗೆ ತರಬೇಕು. ಸರ್ಕಾರ ಚಿಂತಿಸುತ್ತಿರುವಂತೆ ಶೇ.28 ತೆರಿಗೆ ಶ್ರೇಣಿಗೆ ಹಾಕಬಾರದು, ಅತಿ ಕಡಿಮೆ ತೆರಿಗೆ ಶ್ರೇಣಿಗೆ ಹಾಕಬೇಕು ಎಂದು ರಾಮ್ ದೇವ್ ಹೇಳಿದ್ದಾರೆ.