ತಮ್ಮನ ಪತ್ನಿ ಮೇಲೆ ಹಲ್ಲೆ: ಕ್ಯಾಶ್ ನಾಗ, ಪುತ್ರ ಅರೆಸ್ಟ್
ಪಾಲಿಕೆ ಮಾಜಿ ಸದಸ್ಯ ರೌಡಿ ಶೀಟರ್ ನಾಗರಾಜ್ ಅಲಿಯಾಸ್ ಕ್ಯಾಶ್ ನಾಗ ಹಾಗೂ ಆತನ ಪುತ್ರ ಸೇರಿ ಮೂವರನ್ನು ಶ್ರೀರಾಮ್ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಹೋದರನ ಪತ್ನಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಬೆಂಗಳೂರು : ಸಹೋದರನ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಪಾಲಿಕೆ ಮಾಜಿ ಸದಸ್ಯ ರೌಡಿ ಶೀಟರ್ ನಾಗರಾಜ್ ಅಲಿಯಾಸ್ ಕ್ಯಾಶ್ ನಾಗ ಹಾಗೂ ಆತನ ಪುತ್ರ ಸೇರಿ ಮೂವರನ್ನು ಶ್ರೀರಾಮ್ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಜಿ ಪಾಲಿಕೆ ಸದಸ್ಯ ನಾಗರಾಜ್, ಪುತ್ರ ಎನ್.ಶಾಸ್ತ್ರಿ ಹಾಗೂ ಈತನ ಸ್ನೇಹಿತ ಪುಟ್ಟಸ್ವಾಮಿ ಬಂಧಿತರು. ಆರೋಪಿಗಳನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ. ನಾಗರಾಜನ ಮತ್ತೊಬ್ಬ ಪುತ್ರ ಶಾಸ್ತ್ರಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದರು.
ತಮಿಳುನಾಡು ಮೂಲದ ಪುಟ್ಟಸ್ವಾಮಿ, ನಾಗರಾಜ್ ಮತ್ತು ಆತನ ಪುತ್ರರಿಗೆ ತಮಿಳುನಾಡಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ನಾಗರಾಜ್, ಶಾಸ್ತ್ರಿ ಮತ್ತು ಪುಟ್ಟಸ್ವಾಮಿ ಒಂದೇ ಬೈಕ್ನಲ್ಲಿ ತಮಿಳುನಾಡಿನ ವೇಲೂರಿನಲ್ಲಿ ಹೋಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾನೆ ಎಂದು ಮಾಹಿತಿ ನೀಡಿದರು.
ನ.25ರಂದು ಬೆಳಗ್ಗೆ 5ರ ಸುಮಾರಿಗೆ ಸಹೋದರ ಧರ್ಮನ ಪತ್ನಿ ಮನೆಗೆ ನುಗ್ಗಿದ ನಾಗರಾಜ್ ಹಾಗೂ ಆತನ ಮಕ್ಕಳು, ಸಹೋದರನ ಪತ್ನಿ ಚಾಮುಂಡೇಶ್ವರಿ ಹಾಗೂ ಇವರ ಪುತ್ರಿ ಶ್ವೇತಾ ಅವರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ಪ್ರಕರಣವನ್ನು ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದರು. ಈ ಸಂಬಂಧ ಶ್ರೀರಾಮ್ಪುರ ಠಾಣೆಗೆ ಚಾಮುಂಡೇಶ್ವರಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.