ತಾಲಿಬಾನ್ಗೆ ಹಿಂದುತ್ವ ಹೋಲಿಸಿದ ಸ್ವರಾ, ಕಂಗನಾ ಬಾಯ್ಫ್ರೆಂಡ್ ರಹಸ್ಯ; ಆ.18ರ ಟಾಪ್ 10 ಸುದ್ದಿ!
ತಾಲಿಬಾನ್ ಉಗ್ರರು ಹಾಗೂ ಸಂಘಟನೆಯನ್ನು ಹಿಂದುತ್ವಕ್ಕೆ ಹೋಲಿಸಿದ ಸ್ವರಾ ಭಾಸ್ಕರ್ ಬಂಧಿಸುವಂತೆ ಅಭಿಯಾನ ಆರಂಭಗೊಂಡಿದೆ. ಅಫ್ಘನ್ನಲ್ಲಿದ್ದ 150 ಭಾರತೀಯರ ಏರ್ಲಿಫ್ಟ್ ಕಾರ್ಯಾಚರಣೆ ಹಿಂದೆ ರೋಚಕ ಕತೆ ಇದೆ. ಶಿಕ್ಷಣ ನೀತಿ ಪ್ರಾಯೋಗಿಕ ಜಾರಿಗೆ ಸಿಎಂ ಸೂಚನೆ ನೀಡಿದ್ದಾರೆ. ಕಂಗನಾ ರನಾವತ್ ಬಾಯ್ ಫ್ರೆಂಡ್ ಸೀಕ್ರೆಟ್, ಜನಾಶೀರ್ವಾದ ಯಾತ್ರೆ ವೇಳೆ ಗುಂಡಿನ ಸದ್ದು ಸೇರಿದಂತೆ ಆಗಸ್ಟ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಅಫ್ಘನ್ನಲ್ಲಿದ್ದ 150 ಭಾರತೀಯರ ರೋಚಕ ಏರ್ಲಿಫ್ಟ್, ಸಾಹಸದ ಹಿಂದೆ ಇವರೇ ಕಿಂಗ್!
ಅಷ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಸಿಲುಕಿದ್ದ ರಾಯಭಾರ ಸಿಬ್ಬಂದಿ, ಐಟಿಬಿಪಿಯ ಕಮಾಂಡೋಗಳು ಸೇರಿ 150 ಮಂದಿ ಮತ್ತು 3 ಶ್ವಾನಗಳನ್ನು ರೋಚಕ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ಭಾರತಕ್ಕೆ ಕರೆತರಲಾಗಿದೆ. ತಾಲಿಬಾನಿಗಳ ಸವಾಲನ್ನು ಮೆಟ್ಟಿನಿಂತು ಭಾರತೀಯರನ್ನು ಕರೆತರಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನಡೆಸಿದ ತಡರಾತ್ರಿ ಕಾರ್ಯಾಚರಣೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಐಸಿಸ್ಗೆ ಯುವಕರ ಸೆಳೆಯುತ್ತಿದ್ದ ಕೇರಳದ 2 ಮಹಿಳೆಯರ ಬಂಧನ!
ಸಾಮಾಜಿಕ ಮಾಧ್ಯಮದ ಮುಖಾಂತರ ಐಸಿಸ್ ಉಗ್ರರ ಸಿದ್ಧಾಂತದ ಪ್ರಚಾರ ನಡೆಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಮಹಿಳೆಯರನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಬಂಧಿಸಿದೆ.
ಟೋಕಿಯೋ 2020: ಕ್ರೀಡಾ ಸಾಧಕರ ಜತೆ ಮೋದಿ ಮಾತುಕತೆಯಲ್ಲಿ ಸಿಕ್ಕ 8 ಅಂಶಗಳಿವು..!
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 7 ಪದಕಗಳನ್ನು ಗೆಲ್ಲುವುದರೊಂದಿಗೆ ಭಾರತ ಒಲಿಂಪಿಕ್ಸ್ನಲ್ಲಿ ಹಿಂದೆಂದಿಗಿಂತಲೂ ಗರಿಷ್ಠ ಪದಕ ಜಯಿಸಿದ ಸಾಧನೆ ಮಾಡಿದೆ. ಈ ಮೊದಲು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತ 6 ಪದಕಗಳನ್ನು ಜಯಿಸಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಒಂದು ಚಿನ್ನ, ಎರಡು ಬೆಳ್ಳಿ ಸೇರಿದಂತೆ ಒಟ್ಟು 7 ಪದಕಗಳನ್ನು ಜಯಿಸಿ ಉತ್ತಮ ಸಾಧನೆಯನ್ನೇ ತೋರಿದೆ.
ತಾಲಿಬಾನ್ಗೆ ಹಿಂದುತ್ವ ಹೋಲಿಕೆ: #ArrestSwaraBhaskar ಟ್ರೆಂಡ್
ತಾಲೀಬಾನ್ ಉಗ್ರರ ಕ್ರೌರ್ಯದ ಬಗ್ಗೆ ಸಿನಿಮಾ ತಾರೆಗಳು, ಸೆಲೆಬ್ರಿಟಿಗಳು ಸೇರಿ ಬಹಳಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಕಂಗನಾ ರಣಾವತ್ ಅವರೂ ಈ ಕುರಿತು ಸರಣಿ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿ ಪೋಸ್ಟ್ ಮಾಡಿದ್ದರು. ಈಗ ನಟಿ ಸ್ವರಾ ಭಾಸ್ಕರ್ ಅವರೂ ಈ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೊಳಗಾಗಿದ್ದಾರೆ. ಅಫ್ಘಾನಿಸ್ತಾನ್ ಪ್ರಜೆಗಳ ಕುರಿತು ಬಹಳಷ್ಟು ಜನ ಸಂತಾಪ ವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ಬೆಂಬಲಿತ ಮಾಹಿತಿಗೆ ಫೇಸ್ಬುಕ್, ವಾಟ್ಸಾಪ್ನಲ್ಲಿ ನಿಷೇಧ!
ತಾಲಿಬಾನ್ ಮತ್ತು ತಾಲಿಬಾನ್ ಬೆಂಬಲಿಸುವ ಎಲ್ಲಾ ಅಂಶಗಳನ್ನು ತನ್ನ ವೇದಿಕೆಯಿಂದ ಫೇಸ್ಬುಕ್ ನಿಷೇಧಿಸಿದೆ. ಅಲ್ಲದೆ ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುವುದಾಗಿ ಅದು ಹೇಳಿದೆ. ಅಲ್ಲದೆ ಉಗ್ರರಿಗೆ ಸಂಬಂಧಿಸಿದಂತೆ ಪ್ರಕಟವಾಗುವ ಅಂಶಗಳ ಮೇಲೆ ನಿಗಾಕ್ಕೆ ಅಷ್ಘಾನಿಸ್ತಾನಕ್ಕೆ ಮೀಸಲಾದ ತಜ್ಞರ ತಂಡ ರೂಪಿಸಲಾಗಿದೆ ಎಂದು ಕಂಪನಿ ಹೇಳಿದೆ. ಹಲವು ವರ್ಷಗಳಿಂದ ತನ್ನ ಸಂದೇಶಗಳನ್ನು ಹರಡಲು ತಾಲಿಬಾನ್ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದೆ.
ಹೊಸ ಕ್ರೆಡಿಟ್ ಕಾರ್ಡ್: HDFC ಮೇಲಿನ 8 ತಿಂಗಳ ನಿಷೇಧ ತೆರವು!
ಗ್ರಾಹಕರಿಗೆ ಹೊಸದಾಗಿ ಕ್ರೆಡಿಟ್ ಕಾರ್ಡ್ಗಳ ವಿತರಣೆ ಮಾಡದಂತೆ ಎಚ್ಡಿಎಫ್ಸಿ ಬ್ಯಾಂಕ್ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು 8 ತಿಂಗಳಗಳ ಬಳಿಕ ಆರ್ಬಿಐ ತೆರವು ಮಾಡಿದೆ.
ಶಿಕ್ಷಣ ನೀತಿ ಪ್ರಾಯೋಗಿಕ ಜಾರಿಗೆ ಸಿಎಂ ಸೂಚನೆ
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಯೋಗಿಕವಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಸುನಂದಾ ಪುಷ್ಕರ್ ಸಾವು ಪ್ರಕರಣ: ಶಶಿ ತರೂರ್ಗೆ ಬಿಗ್ ರಿಲೀಫ್, ನಿರ್ದೋಷಿ ಎಂದ ಕೋರ್ಟ್!
ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ನಿರ್ದೋಷಿ ಎಂದು ದೆಹಲಿ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆ ವೇಳೆ ನಾಡ ಬಂದೂಕು ಸದ್ದು, ಬೆಂಬಲಿಗರ ಪುಂಡಾಟ
ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಲ್ಲಿ ಗುಂಡಿನ ಸದ್ದು! ಕೇಂದ್ರ ಸಚಿವ ಭಗವಂತ ಖೂಬಾಗೆ ನಾಡಬಂದೂಕಿನಿಂದ ಸ್ವಾಗತಿಸಲಾಗಿದೆ. ಯಾದಗಿರಿ ತಾ. ಯರಗೋಳ ಗ್ರಾಮದಲ್ಲಿ ಖೂಬಾ ಬೆಂಬಲಿಗರು ನಾಡಬಂದೂಕಿನಿಂದ ಸ್ವಾಗತ ಕೋರಿದ್ದಾರೆ.