ಬೆಂಗಳೂರು ಏರ್ ಶೋ ಲಖನೌಗೆ ಸ್ಥಳಾಂತರ..?
ಬೆಂಗಳೂರಿನಿಂದ ಲಕ್ನೋಗೆ ಏರ್ ಶೋ ಸ್ಥಳಾಂತರವಾಗುತ್ತಾ ಎನ್ನುವ ಗೊಂದಲ ಇನ್ನೂ ಕೂಡ ಬಗೆಹರಿದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಬೆಂಗಳೂರು : ಬೆಂಗಳೂರಿನ ಹೆಮ್ಮೆ ಎನಿಸಿದ್ದ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವೆನಿಸಿದ ಏರೋ ಇಂಡಿಯಾ ಉದ್ಯಾನ ನಗರಿಯ ಕೈ ತಪ್ಪುವುದೇ ಅಥವಾ ಇಲ್ಲವೇ ಎಂಬ ಬಗ್ಗೆ ಮೂಡಿದ್ದ ಗೊಂದಲಕ್ಕೆ ಸದ್ಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ನೂ ಕೂಡ ಯಾವುದೆ ಸ್ಪಷ್ಟನೆ ನೀಡಿಲ್ಲ. ಶನಿವಾರ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇನ್ನೂ ಕೂಡ ಲಖನೌಗೆ ಸ್ಥಳಾಂತರ ಮಾಡಲು ಯಾವುದೇ ನಿರ್ಧಾರವನ್ನೂ ಕೈಗೊಂಡಿಲ್ಲ ಎಂದು ಈ ಹೇಳಿದ್ದಾರೆ.
ರಕ್ಷಣಾ ಇಲಾಖೆಯ ಮೂಲಗಳು ಏರೋ ಇಂಡಿಯಾ ಈ ಬಾರಿ ಉತ್ತರ ಪ್ರದೇಶದ ಲಖನೌ ನಗರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದರೆ, ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಇಲ್ಲ ಏರೋ ಇಂಡಿಯಾ ಬೆಂಗಳೂರಿನಲ್ಲಿಯೇ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವೈಮಾನಿಕ ಪ್ರದರ್ಶನದ ಸ್ಥಳಾಂತರ ಬಗ್ಗೆ ಈ ಬಾರಿಯೂ ವದಂತಿ ಹುಟ್ಟಿದೆಯಷ್ಟೇ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ 11 ಬಾರಿ ವೈಮಾನಿಕ ಪ್ರದರ್ಶನ ದೈವಾರ್ಷಿಕ ವಾಯು ಪ್ರದರ್ಶನವಾದ ಏರೋ ಇಂಡಿಯಾ ಯಲಹಂಕದ ವಾಯುನೆಲೆಯಲ್ಲಿ 1996 ರಿಂದ ನಡೆಯುತ್ತಾ ಬಂದಿದೆ. ಹೀಗೆ ಕಳೆದ 22 ವರ್ಷಗಳಿಂದ ಎರಡು ವರ್ಷಗಳಿಗೊಮ್ಮೆ ಏರ್ ಶೋ ನಡೆಯುತ್ತಿದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಯಲಹಂಕದ ವಾಯುನೆಲೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು 2009 ರಲ್ಲಿ ಕೇಂದ್ರ ಸರ್ಕಾರ 200 ದಶಲಕ್ಷ ಹಣವನ್ನು ನೀಡಿತ್ತು.
ಏರೋ ಇಂಡಿಯಾದಲ್ಲಿ ವಿಶ್ವಾದ್ಯಂತದ ವೈಮಾನಿಕ ಕ್ಷೇತ್ರದ ದಿಗ್ಗಜ ಸಂಸ್ಥೆಗಳು ತಮ್ಮ ಅತ್ಯಾಧುನಿಕ ಲೋಹದ ಹಕ್ಕಿಗಳು, ವಾಯು ಸೇನೆಗೆ ಅಗತ್ಯವೆನಿಸುವ ಯುದ್ಧ ಪರಿಕರಗಳನ್ನು ಪ್ರದರ್ಶಿಸುತ್ತವೆ. ಕೋಟ್ಯಂತರ ಡಾಲರ್ಗಳ ವಹಿವಾಟು ಈ ಪ್ರದರ್ಶನದ ವೇಳೆ ನಡೆಯುತ್ತದೆ. ಇನ್ನು ಈ ಪ್ರದರ್ಶನದ ವೇಳೆ ನಡೆಯುವ ಆಕರ್ಷಕ ವೈಮಾನಿಕ ಪ್ರದರ್ಶನ ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಈ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಜಗತ್ತಿನ ಎಲ್ಲೆಡೆಯಿಂದ ಪ್ರವಾಸಿಗರು ಆಗಮಿಸುವುದರಿಂದ ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರಿ. ಹೋಟೆಲ್ ಉದ್ಯಮಕ್ಕೂ ಭಾರಿ ಆದಾಯ ಬರುತ್ತದೆ.