ಚುಂಚಶ್ರೀಗಳ ವಿರುದ್ಧವೇ ಎ. ಮಂಜು ಆಕ್ರೋಶ
ರಾಜ್ಯದ ಮೈತ್ರಿ ಸರ್ಕಾರ ದೈವ ಬಲದಿಂದ ರಚನೆಯಾಗಿದೆ ಎಂಬ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆಯನ್ನು ಖಂಡಿಸುತ್ತೇನೆ. ನಾನು ಸಹ ಮಠದ ಭಕ್ತನಾಗಿದ್ದೇನೆ. ಆದರೆ, ಸ್ವಾಮೀಜಿ ಈ ರೀತಿ ಒಂದು ಪಕ್ಷದ ಪರವಾಗಿ ಹೇಳಿಕೆಯನ್ನು ನೀಡಬಾರದು ಎಂದು ಎ. ಮಂಜು ಹೇಳಿದ್ದಾರೆ.
ಬೆಂಗಳೂರು : ಮಾಜಿ ಸಚಿವ ಎ. ಮಂಜು ಆದಿಚುಂಚ ನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿಗಳ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದು, ಶ್ರೀಗಳು ಯಾವುದೇ ಒಂದು ಪಕ್ಷದ ಪರವಾಗಿ ಹೇಳಿಕೆ ನೀಡಬಾರದು ಎಂದು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಮೈತ್ರಿ ಸರ್ಕಾರ ದೈವ ಬಲದಿಂದ ರಚನೆಯಾಗಿದೆ ಎಂಬ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆಯನ್ನು ಖಂಡಿಸುತ್ತೇನೆ. ನಾನು ಸಹ ಮಠದ ಭಕ್ತನಾಗಿದ್ದೇನೆ. ಆದರೆ, ಸ್ವಾಮೀಜಿ ಈ ರೀತಿ ಒಂದು ಪಕ್ಷದ ಪರವಾಗಿ ಹೇಳಿಕೆಯನ್ನು ನೀಡಬಾರದು. ಧರ್ಮಕ್ಕೂ ರಾಜಕಾರಣಕ್ಕೂ ಸಂಬಂಧ ಇಲ್ಲ, ಧರ್ಮವೇ ಬೇರೆ ರಾಜಕಾರಣವೇ ಬೇರೆ ಎಂದರು.
ಸಮ್ಮಿಶ್ರ ಸರ್ಕಾರ ದೈವ ಬಲದಿಂದ ರಚನೆಯಾಗಿಲ್ಲ. ಬದಲಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಚ್ಛೆಯಂತೆ ರಚನೆಯಾಗಿದೆ. ಇದಕ್ಕೆ ನಮ್ಮ ಪಕ್ಷದ ಮುಖಂಡರು ಕೂಡ ಕೈಜೋಡಿಸಿದ್ದರಿಂದ ಸಮಿಶ್ರ ಸರ್ಕಾರ ರಚನೆಯಾಗಿದೆ. ಸ್ವಾಮೀಜಿ ಅವರು ಎಲ್ಲ ಧರ್ಮಕ್ಕೂ ಒಳಪಟ್ಟವರು. ತಮ್ಮ ಮಾತಿನಲ್ಲಿ ರಾಜಕೀಯವನ್ನು ಬೆರೆಸಬಾರದು ಎಂದು ಹೇಳಿದರು.
ಯಾವುದೋ ಒಂದು ಪಕ್ಷದ ಮುಖಂಡರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರನ್ನು ಹೊಗಳುವುದು ತಪ್ಪು. ಅವರ ಮಾತಿನಿಂದ ನನಗೂ ತುಂಬಾ ನೋವಾಗಿದೆ. ಇಂತಹ ಮಾತುಗಳನ್ನು ಸ್ವಾಮೀಜಿಗಳು ಆಡಬಾರದಿತ್ತು. ಬದಲಿಗೆ ಸಮ್ಮಿಶ್ರ ಸರ್ಕಾರ ಆಗಿರುವುದರಿಂದ ಇಬ್ಬರು ಸೇರಿ ಜನತೆಗೆ ಅಭಿವೃದ್ಧಿಯ ಕೆಲಸ ಮಾಡುವ ಸಲಹೆಯನ್ನು ಮುಖ್ಯಮಂತ್ರಿಗೆ ಕೊಡಬೇಕಿತ್ತು ಎಂದು ಹೇಳಿದರು.