ಛತ್ತೀಸ್ಗಢದಲ್ಲಿ ಚುನಾವಣೆಗೂ ಮುನ್ನ 62 ನಕ್ಸಲರ ಶರಣಾಗತಿ!
ಛತ್ತೀಸ್ಗಢ ಚುನಾವಣೆಗೂ ಮುನ್ನ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ. ನಕ್ಸಲರ ನಿರ್ಧಾರವನ್ನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದ್ದಾರೆ. ಇಲ್ಲಿದೆ ನಕ್ಸಲರ ದಿಡೀರ್ ನಿರ್ಧಾರದ ಹಿಂದಿನ ಕಾರಣಗಳು.
ರಾಯ್ಪುರ(ನ.08): ನಕ್ಸಲ್ ಪೀಡಿತ ಛತ್ತೀಸ್ಗಢದಲ್ಲಿ ಚುನಾವಣೆಗೂ ಮುನ್ನ 62 ನಕ್ಸಲರು ಶಸ್ತ್ರಾಸ್ತ್ರಗಳ ಸಮೇತ ಮಂಗಳವಾರ ಶರಣಾಗತರಾಗಿದ್ದಾರೆ. ಚುನಾವಣೆಗೂ ಮುನ್ನ ಈ ಬೆಳವಣಿಗೆ ಬಹುದೊಡ್ಡ ಸಾಧನೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.
ಶರಣಾಗತರಾದ 62 ನಕ್ಸಲರ ಪೈಕಿ 55 ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ನಾರಾಯಣಪುರ ಜಿಲ್ಲೆಯಲ್ಲಿ ಒಪ್ಪಿಸಿದ್ದಾರೆ ಎಂದು ಬಸ್ತರ್ ಐಜಿಪಿ ವಿವೇಕಾನಂದ ಸಿನ್ಹಾ ಹೇಳಿದ್ದಾರೆ. ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಯೋಜನೆಯಿಂದ ನಕ್ಸಲರು ಹಿಂಸಾ ಮಾರ್ಗವನ್ನು ತ್ಯಜಿಸುತ್ತಿದ್ದಾರೆ. ಈ ಸಾಧನೆಗಾಗಿ ಮುಖ್ಯಮಂತ್ರಿ ರಮಣ್ಸಿಂಗ್ ಹಾಗೂ ಪೊಲೀಸ್ ಪಡೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಛತ್ತೀಸ್ಗಢದಲ್ಲಿ ನ.12 ಮತ್ತು 20ರಂದು ಎರಡು ಹಂತದಲ್ಲಿ ವಿಧಾನಸಭೆ ಚುಣಾವಣೆ ನಡೆಯಲಿದೆ. ಮೊದಲ ಹಂತದ ಬಹುತೇಕ ಕ್ಷೇತ್ರಗಳು ನಕ್ಸಲ್ ಪೀಡಿತ ಬಸ್ತರ್ಗೆ ಸೇರಿವೆ. ಇತ್ತೀಚೆಗೆ ನಕ್ಸಲ್ ದಾಳಿಯಲ್ಲಿ ದೂರದರ್ಶನ ವಾಹಿನಿಯ ಕ್ಯಾಮರಾಮನ್ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಸಾವಿಗೀಡಾಗಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.