ರಾತ್ರೋರಾತ್ರಿ 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರ ಒಟ್ಟು 6 ಮಂದಿ ಐಪಿಎಸ್ ಅಧಿಕಾರಿಗಳನ್ನು ರಾತ್ರೋ ರಾತ್ರಿ ವರ್ಗಾವಣೆ ಮಾಡಿದೆ. ಚಿಕ್ಕಮಗಳೂರು ಎಸ್ ಪಿ ಅಣ್ಣಾ ಮಲೈ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು : ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ, ಚಿಕ್ಕಮಗಳೂರು ಎಸ್ಪಿ ಸೇರಿದಂತೆ ಆರು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರವು ಸೋಮವಾರ ರಾತ್ರೋರಾತ್ರಿ ವರ್ಗಾವಣೆ ಮಾಡಿದೆ.
ಈ ಆದೇಶವು ರಾತ್ರಿ 1 ಗಂಟೆ ನಂತರ ಹೊರ ಬಂದಿದೆ. ಇನ್ನು ವರ್ಗಾವಣೆಗೆ ಸಾಮಾನ್ಯವಾಗಿ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಅಧೀನ ಕಾರ್ಯದರ್ಶಿ ಸಹಿ ಹಾಕುತ್ತಿದ್ದರು. ಆದರೆ ಈ ಬಾರಿ ಅಧಿಕಾರಿಗಳ ವರ್ಗಾವಣೆಗೆ ಡಿಪಿಆರ್ ಕಾರ್ಯದರ್ಶಿ ಶಿವಕುಮಾರ್ ಸಹಿ ಹಾಕಿದ್ದಾರೆ. ಅಲ್ಲದೆ, ಹೊಸ ಹುದ್ದೆಗೆ ವರ್ಗಾವಣೆಗೊಂಡ ಕೆಲ ಅಧಿಕಾರಿಗಳು ಮಂಗಳವಾರವೇ ಕರ್ತವ್ಯಕ್ಕೆ ಹಾಜರಾತಿ ಹಾಕಿದ್ದಾರೆ.
ವರ್ಗಾವಣೆ ಪಟ್ಟಿಹೀಗಿದೆ:
ಮೂರು ವರ್ಷಗಳಿಂದ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಹುದ್ದೆಯಲ್ಲಿದ್ದ ಆರ್.ಹಿತೇಂದ್ರ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರವು, ಆ ಸ್ಥಾನಕ್ಕೆ ಐಜಿಪಿ ಪಿ.ಹರಿಶೇಖರನ್ರನ್ನು ನಿಯೋಜಿಸಿದೆ. ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರು ಬೆಂಗಳೂರು ನಗರ ದಕ್ಷಿಣ ವಿಭಾಗಕ್ಕೆ ಬಂದಿದ್ದು, ಅವರಿಂದ ತೆರವಾದ ಹುದ್ದೆಗೆ ಸಿಐಡಿಯಲ್ಲಿದ್ದ ಪ್ರರ್ತಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಸಹಾಯಕ ತನಿಖಾಧಿಕಾರಿ ಹರೀಶ್ ಪಾಂಡೆ ವರ್ಗಾವಣೆಗೊಂಡಿದ್ದಾರೆ. ಸಿಸಿಬಿ ಡಿಸಿಪಿ ಜಿನೇಂದ್ರ ಖಣಗಾವಿ ಅವರಿಗೆ ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಹುದ್ದೆ ನೀಡಲಾಗಿದೆ. ಮೈತ್ರಿ ಸರ್ಕಾರ ರಚನೆ ಬಳಿಕ ಹಾಸನದಿಂದ ಎತ್ತಂಗಡಿಗೊಂಡಿದ್ದ ರಾಹುಲ್ ಕುಮಾರ್ ಶಹಾಪುರವಾಡ್ ಅವರಿಗೆ ಬೆಂಗಳೂರು ಪೂರ್ವ ವಿಭಾಗದ ಹೊಣೆಗಾರಿಕೆ ಕೊಡಲಾಗಿದೆ. ಆ ಹುದ್ದೆಯಲ್ಲಿದ್ದ ಅಜಯ್ ಹಿಲೋರಿ ಕೆಎಸ್ಆರ್ಪಿ ಕಾಮಾಂಡೆಟ್ ಆಗಿ ನೇಮಕಗೊಂಡಿದ್ದಾರೆ.