ಅಮೆರಿಕ ಹೈ ಪ್ರೊಫೈಲ್ ಕೆಲಸ ಬಿಟ್ಟು ಭಾರತದಲ್ಲಿ ರೈತನಾದ ವಿಜ್ಞಾನಿ
ಅಮೆರಿಕಾದ ಸೌತ್ ಕೆರೊಲಿನಾದ ವೈದ್ಯಕೀಯ ಮಹಾ ವಿದ್ಯಾಲಯದ ಕಾರ್ಡಿಯಾಲಜಿ ವಿಭಾಗದಲ್ಲಿ ಹೈ ಪ್ರೊಫೈಲ್ ವಿಜ್ಞಾನಿಯಾಗಿದ್ದ ಡಾ. ಹರಿನಾಥ್.
ಭಾರತದಲ್ಲಿರುವ ಬಂಧುಗಳಿಂದ ಫೋನ್ ಕಾಲ್ ಬಂತು. ಅವರ ತಾಯಿ ಅಸೌಖ್ಯದಿಂದ ಆಸ್ಪತ್ರೆ ಸೇರಿದ್ದರು. ಹರಿನಾಥ್ ಅವರ ಅಮ್ಮನಿಗೆ ಸಂಧಿವಾತದ ಜೊತೆಗೆ ಬೆನ್ನೆಲುಬಿನ ಬೇನೆಯಿತ್ತು. ಇದು ತೀವ್ರವಾಗಿದ್ದ ಕಾರಣ ವೈದ್ಯರು ಹೆಚ್ಚು ಪವರ್ನ ಮೆಡಿಸಿನ್ ಕೊಡುತ್ತಿದ್ದರು. ಇದರಿಂದ ಅಮ್ಮನಿಗೆ ಗ್ಯಾಸ್ಟ್ರಿಕ್ನಂಥ ಸಮಸ್ಯೆ ಹೆಚ್ಚಾಗಿ ಒದ್ದಾಡುತ್ತಿದ್ದರು. ‘ದಿನ ಕಳೆದಂತೆ ಅಮ್ಮನ ಪರಿಸ್ಥಿತಿ ಬಿಗಡಾಯಿಸುತ್ತಾ ಹೋಯಿತು. ಜಾಗತಿಕ ಮಟ್ಟದ ಮೆಡಿಸಿನ್ ರಿಸರ್ಚರ್ ಆಗಿ, ಅನೇಕ ಬಗೆಯ ಮೆಡಿಸಿನ್ಗಳನ್ನು ಸೃಷ್ಟಿಸುತ್ತಿದ್ದ ನಾನು ಕೈಲಾಗದಂತೆ ಕೂತಿದ್ದೆ. ಆಗ ಜಪಾನಿನ ವಿಜ್ಞಾನಿಯೊಬ್ಬರು ನುಗ್ಗೆ ಎಲೆ ಜ್ಯೂಸ್ ಬಗ್ಗೆ ಬರೆದಿದ್ದ ಲೇಖನ ನೆನಪಾಯ್ತು. ಬೇರೆ ದಾರಿ ಇರಲಿಲ್ಲ. ಆದದ್ದಾಗಲಿ ಅಂತ ನುಗ್ಗೆ ಎಲೆಯಿಂದ ಮಾಡಿದ ಜ್ಯೂಸ್ ಅನ್ನು ದಿನಾ ಅಮ್ಮನಿಗೆ ಕುಡಿಯಲು ಕೊಟ್ಟೆ. ನನಗೇ ಅಚ್ಚರಿಯಾಗುವಂತೆ ಅಮ್ಮ ಚೇತರಿಸಿಕೊಂಡರು. ಬಹಳ ಗುಣವಾಗಿ ಮನೆಗೆ ಮರಳಿದರು’ ಎನ್ನುವಾಗ ಡಾ. ಹರಿನಾಥ್ ಕಣ್ಣಂಚು ಒದ್ದೆಯಾಗುತ್ತದೆ.
ಡಾ. ಹರಿನಾಥ್ ಕಸಿಗಣೇಸನ್ ಇಂದು ಅಪ್ಪಟ ಆರ್ಗ್ಯಾನಿಕ್ ಕೃಷಿಕ. ಕೋಟ್ಯಂತರ ರುಪಾಯಿ ಆದಾಯ ತರುತ್ತಿದ್ದ ತಮ್ಮ ಹೈ ಪ್ರೊಫೈಲ್ ಕೆಲಸಕ್ಕೆ ಗುಡ್ಬೈ ಹೇಳಿ ವರ್ಷಗಳೇ ಕಳೆದಿವೆ. ತಮಿಳುನಾಡು ಬಾರ್ಡರ್ನಲ್ಲಿರುವ ಪೆನ್ನಗರಮ್ ಎಂಬ ಹಳ್ಳಿಯತ್ತ ಹೋದರೆ ಉಳಿದ ರೈತರ ಹೊಲಗಳ ಜೊತೆಗೆ ಹರಿನಾಥ್ ಅವರ ಜಮೀನೂ ಕಾಣಸಿಗುತ್ತದೆ. ಅಲ್ಲಿ ಪಟಾಪಟಿ ಚಡ್ಡಿ ಮೇಲೊಂದು ಕೊಳೆಯಾದ ಬನಿಯನ್ನು ಹಾಕಿಕೊಂಡು ಉಳಿದ ರೈತರೊಂದಿಗೆ ಕೃಷಿಕಾರ್ಯದಲ್ಲಿ ಮಗ್ನರಾದ ಹರಿನಾಥ್ ಸಿಗುತ್ತಾರೆ. ನಸು ಬೆಳ್ಳಗಾದ ಕೂದಲು, ದಾಡಿ, ಪ್ರಶಾಂತ ನಗೆ ಬೀರುವ ಮುಖದಲ್ಲಿ ಅವರೊಬ್ಬ ಸಂತನ ಹಾಗೆ ಕಂಡರೂ ಅಚ್ಚರಿಯಿಲ್ಲ. ಕೆಲವೇ ಸಮಯದ ಹಿಂದೆ ಅಮೆರಿಕಾದ ಪ್ರತಿಷ್ಠಿತ ಮಹಾವಿದ್ಯಾಲಯದ ಹೈ ಪ್ರೊಫೈಲ್ ವಿಜ್ಞಾನಿ ಎಲ್ಲಿ.. ಚಪ್ಪಲಿಯನ್ನೂ ಹಾಕದೇ ಕೆಸರು ಗದ್ದೆಯಲ್ಲಿ ಬಿತ್ತನೆ ಮಾಡುವ ಅಪ್ಪಟ ರೈತ ಹರಿನಾಥ ಎಲ್ಲಿ... ಬಾಲ್ಯದಿಂದಲೇ ಆಸಕ್ತಿ: ಹರಿನಾಥ್ ಅವರ ತಂದೆ ಚಿಕ್ಕ ವಯಸ್ಸಿನಲ್ಲೇ ಗತಿಸಿದ್ದರು. ಶಿಕ್ಷಕಿಯಾಗಿದ್ದ ತಾಯಿ ಬಲುಕಷ್ಟದಿಂದ ಮಗನನ್ನು ಬೆಳೆಸಿದರು. ಕಾಡಿನ ಸಮೀಪವಿದ್ದ ಮನೆ, ಶಿಕ್ಷಕ ವೃತ್ತಿಯ ಜೊತೆಗೆ ಸಾಂಪ್ರದಾಯಿಕ ವ್ಯವಸಾಯ ಮಾಡುತ್ತಿದ್ದ ಕುಟುಂಬದಲ್ಲಿ ಹರಿನಾಥ್ ಬೆಳೆದರು. ಆಗಲೇ ಕೃಷಿಯತ್ತ ಬಹಳ ಆಸಕ್ತಿ ಇತ್ತು. ಮುಂದೆ ಚೆನ್ನೈಯಲ್ಲಿ ಉನ್ನತ ಪದವಿ ಪಡೆದರು. ಮುಂದೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಈ್ಕಈ)ಯಲ್ಲಿ ಸಂಶೋಧಕನಾಗಿ ಉದ್ಯೋಗ ಶುರುವಾಯ್ತು.
ಕಲಾಂ ಮೆಚ್ಚಿದ ಹುಡುಗ
ಹರಿನಾಥ್ ಡಿಆರ್ಡಿಓದಲ್ಲಿ ಸಂಶೋಧಕನಾಗಿದ್ದಾಗ ಅಮೆರಿಕಾದ ಕೆರೊಲಿನಾದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಂಶೋಧನಾ ಕಾರ್ಯಕ್ಕೆಂದು ತೆರಳಬೇಕಾಯ್ತು. ಕನಿಷ್ಠ ಒಂದು ವರ್ಷದ ರಜೆಯ ಅವಶ್ಯಕತೆ ಇತ್ತು. ಅದು ಡಾ.ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ಕಾಲ. ಸಂಶೋಧಕನಾಗಿ ಬಹಳ ಚುರುಕಾಗಿ ಕೆಲಸ ಮಾಡುತ್ತಿದ್ದ ಹರಿನಾಥ್ ಬಗ್ಗೆಕಲಾಂ ಅವರಿಗೆ ಮೊದಲೇ ಗೊತ್ತಿತ್ತು. 2 ವರ್ಷಗಳ ರಜೆ ಮಂಜೂರು ಮಾಡುವ ಮೊದಲು ಅವರು ಹರಿನಾಥ್ ಅವರಿಗೆ ಒಂದು ಮಾತು ಹೇಳಿದರು,‘ನೀನು ಅಮೆರಿಕಾದಲ್ಲೇ ನಿಲ್ಲಬೇಡ. ಮರಳಿ ಭಾರತಕ್ಕೆ ಬಾ. ಹುಟ್ಟಿದ ದೇಶಕ್ಕೆ ನಿನ್ನ ಸೇವೆ ಸಿಗಲಿ’ ಅಂತ. ಕಲಾಂ ಅವರ ಮಾತು, ವಿಚಾರಗಳು ಹರಿನಾಥ್ ಅವರಿಗೆ ಪ್ರೇರಣೆಯಾಯ್ತು.