Asianet Suvarna News Asianet Suvarna News

ಯೇಸು ಪ್ರತಿಮೆ ತೆರವಿಗೆ ಹಿಂದೂ ಪರಿಷತ್ ಆಗ್ರ​ಹ

ಯೇಸು ಪ್ರತಿಮೆ ಪುನರ್ ಸ್ಥಾಪಿತವಾದ ಬೆನ್ನಲ್ಲೇ ಪ್ರತಿಮೆ ತೆರವುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಯ ಮನವಿ ಮಾಡಿದ್ದಾರೆ. 

VHP Workers appeal To Demolish Jesus Statue
Author
Bengaluru, First Published Feb 27, 2020, 10:54 AM IST

 ದೇವನಹಳ್ಳಿ [ಫೆ.27]:  ದೇವನಹಳ್ಳಿ ತಾಲೂಕು ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ದೊಡ್ಡಸಾಗರಹಳ್ಳಿ ಬಳಿಯ ಗುಟ್ಟದಲ್ಲಿರುವ ಸರ್ವೆ ನಂ. 158ರಲ್ಲಿ ಅನಧಿಕೃತವಾಗಿ ಸ್ಥಾಪಿಸಿರುವ ಏಸು ಪ್ರತಿಮೆಯನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ದೊಡ್ಡಸಾಗರಹಳ್ಳಿಯಲ್ಲಿ ಸುಮಾರು 250 ಮನೆಗಳಿದ್ದು ಅವರಲ್ಲಿ ಕ್ರಿಶ್ಚಿಯನ್‌ ಸಮುದಾಯದ 60 ಮನೆ, ಮುಸ್ಲಿಂ ಸಮುದಾಯದ 60 ಮನೆಗಳು ಇವೆ. ಉಳಿದ ಮನೆ​ಗಳು ಹಿಂದೂ ಸಮುದಾಯಕ್ಕೆ ಸೇರಿದವುಗ​ಳಾ​ಗಿವೆ ಎಂದು ದೊಡ್ಡಸಾಗರಹಳ್ಳಿ ಗ್ರಾಮದ ಮುಖಂಡ ಶ್ರೀನಿವಾಸ್‌ ಮಾಧ್ಯಮದವರಿಗೆ ತಿಳಿಸಿದರು.

ದೊಡ್ಡಸಾಗರಹಳ್ಳಿ ಗ್ರಾಮದಲ್ಲಿ ಚರ್ಚ್ ಇತ್ತು. ಅದರ ಪಕ್ಕದಲ್ಲಿಯೇ ಏಸು ಪ್ರತಿಮೆ ಸಹ ಇತ್ತು. ಗ್ರಾಮದ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಏಸು ಪ್ರತಿಮೆ ತೆರವುಗೊಳಿಸಿ ಪಕ್ಕದಲ್ಲಿಯೇ ಇಡಲಾಗಿತ್ತು. ಗ್ರಾಮದ ಗುಟ್ಟದಲ್ಲಿ ಪ್ರತಿ ವರ್ಷಕ್ಕೊಮ್ಮೆ ಪ್ರಾರ್ಥನೆ ಮಾಡುತ್ತಿದ್ದರು.

ಕ್ಯಾಸಿನೋ ಆರಂಭ: 'ಕೂಡಲೇ ಸಂಪುಟದಿಂದ ಸಚಿವ ಸಿ.ಟಿ. ರವಿ ಕೈ ಬಿಡಿ'

ಪ್ರಾರ್ಥ​ನೆ:  ಕಳೆದ ಏಳೆಂಟು ವರ್ಷಗಳಿಂದ ಪ್ರತಿ ತಿಂಗಳ ಮೊದಲನೇ ಭಾನುವಾರ ಎಲ್ಲ ಧರ್ಮಿಯರು ಹೋಗಿ ಸುಮಾರು ಎರಡು ತಾಸು ಅವರ ಮನೆಯ ದೇವರನ್ನು ನೆನೆದು ಪ್ರಾರ್ಥನೆ ಮಾಡುತ್ತಾರೆ. ಪ್ರಾರ್ಥನೆ ನಂತರ ಗುಟ್ಟದ ಕೆಳಗಡೆ ಎಲ್ಲರಿಗೂ ಎಲೆಯಲ್ಲಿ ಊಟದ ವ್ಯವಸ್ಥೆಯನ್ನು ಗ್ರಾಮಸ್ಥರೇ ಮಾಡುತ್ತಿದ್ದಾರೆ.

ರಸ್ತೆ ಅಗಲೀಕರಣ ಸಂದರ್ಭದಲ್ಲಿ ಚರ್ಚ್ ಪಕ್ಕದಲ್ಲಿ ಇಡಲಾಗಿದ್ದ ಏಸು ಪ್ರತಿಮೆಯನ್ನು ಕಳೆದ ಐದು ತಿಂಗಳ ಹಿಂದೆ ಗುಟ್ಟದ ಮೇಲೆ ಸ್ಥಾಪಿಸಲಾಗಿದೆ. ಈ ಗುಟ್ಟದಲ್ಲಿ ಸುಮಾರು 4.20 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ಸ್ಮಶಾನಕ್ಕಾಗಿ ಮಂಜೂರು ಮಾಡಿದ್ದಾರೆ ಎಂದು ಎಂದು ಶ್ರೀನಿವಾಸ್‌ ತಿಳಿಸಿದರು.

ಸ್ಮಶಾನದ ಜಾಗ:

ಆ ಗ್ರಾಮದ ಗುಟ್ಟದಲ್ಲಿನ ಏಸು ಪ್ರತಿಮೆ ತೆರವುಗೊಳ್ಳಲೇಬೇಕು. ಜೊತೆಗೆ ಆ ಜಾಗ ಸ್ಮಶಾನಕ್ಕಾಗಿಯೇ ಮೀಸಲಿಡಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್ಯದರ್ಶಿ ಪಿ. ವಿಶ್ವನಾಥ್‌ ತಿಳಿಸಿ, ತಾಲೂಕಿನಲ್ಲಿ ಮತೀಯ ಸೌಹಾರ್ದತೆ ಕಾಪಾಡಬೇಕೆಂದು ತಹಸೀಲ್ದಾರರಿಗೆ ಮನವಿ ಮಾಡಿದ್ದಾರೆ.

ಕನಕಪುರ ತಾಲೂಕಿನ ಕಪಾಲ ಬೆಟ್ಟದ ಸ್ಥಿತಿ ದೊಡ್ಡಸಾಗರಹಳ್ಳಿ ಗುಟ್ಟ ಆಗಬಾರದು ಎಂದು ವಿಶ್ವ ಹಿಂದೂ ಪರಿಷತ್‌ ಮುಖಂಡರಾದ ರಂಗಸ್ವಾಮಿ, ದೊಡ್ಡೇಗೌಡ, ಮಧುಸೂಧನ್‌ ಹಾಗೂ ತುಮಕೂರು ವಿಭಾಗ ಭಜರಂಗದಳ ಸಂಚಾಲಕ ನರೇಶ್‌ ಹಾಗೂ ವಿನಯ್‌ ತಿಳಿಸಿದ್ದಾರೆ.

ತಹಸೀಲ್ದಾರ್‌ ಭೇಟಿ:

ವಿಶ್ವಹಿಂದೂ ಪರಿಷತ್‌ನವರು ಮನವಿ ನೀಡಿದ ಹಿನ್ನೆಲೆಯಲ್ಲಿ ದೊಡ್ಡಸಾಗರಹಳ್ಳಿ ಗ್ರಾಮದ ಗುಟ್ಟಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಆ ಗುಟ್ಟದ ಮೇಲೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆ​ದ​ರು. ಶಾಂತಿ ಸುವ್ಯವಸ್ಥೆಗಾಗಿ ಗುರುವಾರ ಗ್ರಾಮದ ಹಾಲುಡೇರಿ ಬಳಿ ಗ್ರಾಮಸ್ಥರ ಸಭೆ ಕರೆಯಲಾ​ಗಿದೆ ಎಂದು ತಿಳಿದುಬಂದಿದೆ.

ತಹಸೀಲ್ದಾರ್‌ ಅಜಿತ್‌ ಕುಮಾರ್‌ ರೈ ಮಾಧ್ಯಮದವರೊಂದಿಗೆ ಮಾತನಾಡಿ, ದೊಡ್ಡಸಾಗರಹಳ್ಳಿ ಗುಟ್ಟದಲ್ಲಿ 34 ಎಕರೆ ಸರ್ಕಾರಿ ಜಮೀನಿದ್ದು ಅದರಲ್ಲಿ ನಾಲ್ಕು ಎಕರೆ ಸ್ಮಶಾನಕ್ಕಾಗಿ ಮೀಸಲಿಡಲಾಗಿದೆ. ಉಳಿದ 30ಎಕರೆ ಸರ್ಕಾರಿ ಜಮೀನನ್ನು ಇರು​ವಂತೆಯೇ ಉಳಿಸಲಾಗುವುದು ಎಂದರು.

Follow Us:
Download App:
  • android
  • ios