ಪಶು ಪಾಲಕನಿಗೆ ಒಂದೆಡೆ ಮಳೆ ಬಾರದೇ ಬೆಳೆ ನಷ್ಟ ಮತ್ತು ಮೇವಿನ ತೊಂದರೆ ಅನುಭವಿಸುತ್ತಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ರಾಸುಗಳಿಗೆ ವಿವಿಧ ರೀತಿಯ ಕಾಯಿಲೆಗಳು ಉಲ್ಬಣ ಆಗುತ್ತಿದ್ದು ಪಶು ಪಾಲಕನು ತೊಂದರೆ ಅನುಭವಿಸುತ್ತಿದ್ದಾನೆ.

ಕೊರಟಗೆರೆ: ಭಾರತದ ದೇಶದ ಪ್ರಧಾನ ಕಸಬು ಕೃಷಿಯಾಗಿದೆ. ಕೃಷಿಯ ಜೊತೆಗೆ ರೈತರು ಬೇರೆ ಬೇರೆ ಉಪ ಕಸಬುಗಳನ್ನು ಹೊಂದಿರುತ್ತಾರೆ ಇದರ ಜೊತೆಗೆ ಪಶುಪಾಲನೆಯು ಹೌದು. ಪಶು ಪಾಲಕನಿಗೆ ಒಂದೆಡೆ ಮಳೆ ಬಾರದೇ ಬೆಳೆ ನಷ್ಟ ಮತ್ತು ಮೇವಿನ ತೊಂದರೆ ಅನುಭವಿಸುತ್ತಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ರಾಸುಗಳಿಗೆ ವಿವಿಧ ರೀತಿಯ ಕಾಯಿಲೆಗಳು ಉಲ್ಬಣ ಆಗುತ್ತಿದ್ದು ಪಶು ಪಾಲಕನು ತೊಂದರೆ ಅನುಭವಿಸುತ್ತಿದ್ದಾನೆ.

Add Asianetnews Kannada as a Preferred SourcegooglePreferred

ರಾಸುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರೋಗಗಳೆಂದರೆ ಚರ್ಮ ಗಂಟು ರೋಗ, ಕಣ್ಣಿನ ಕ್ಯಾನ್ಸರ್, ಕಾಲುಬಾಯಿ ರೋಗ ಇತ್ಯಾದಿಗಳಾಗಿವೆ. ರಾಜ್ಯದಲ್ಲಿ 2019 ರಿಂದ ಕಾಲುಬಾಯಿ ರೋಗ ಲಸಿಕ ಅಭಿಯಾನವನ್ನು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ನಾಲ್ಕನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು 2023 ರ ಸೆಪ್ಟೆಂಬರ್ 26ರಿಂದ ಈ ತಿಂಗಳ 25 ರವರೆಗೆ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಪಶು ಇಲಾಖೆಯ ಸಹಾಯಕ ನಿದೇರ್ಶಕರಾದ ಡಾ.ನಾಗಭೂಷಣ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಲುಬಾಯಿ ರೋಗವನ್ನು ತಡೆಗಟ್ಟಲು ಜಾನುವಾರುಗಳಿಗೆ ಲಸಿಕೆ ಹಾಕಿಸುವುದು ಕಡ್ಡಾಯ ಮತ್ತು ಪರಿಹಾರ ನಿಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಮತ್ತು ರಕ್ಷಿಸಿ ಎಂದು ತಿಳಿಸಿದರು.

ಕಾಲುಬಾಯಿ ರೋಗ: ಎತ್ತು , ಹೋರಿ, ಹಸು, ಎಮ್ಮೆ ಮತ್ತು ಹಂದಿಗಳು, ರೋಗದ ಲಕ್ಷಣಗಳು: \ಅತಿಯಾದ ಜ್ವರ, ಬಾಯಿಯಲ್ಲಿ ಹುಣ್ಣು , ಜೊಲ್ಲು ಸುರಿಸುವುದು, ಕಾಲು ಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವುದು.

ರೋಗ ಹೇಗೆ ಹರಡುತ್ತದೆ: ರೋಗ ಗ್ರಸ್ತ ಪ್ರಾಣಿಗಳಿಂದ ನೇರ ಸಂಪರ್ಕ, ವೈರಾಣುಗಳಿಂದ ಕಲುಷಿತಗೊಂಡ ಮೇವು ಮತ್ತು ನೀರು, ಗಾಳಿಯ ಮುಖಾಂತರ ಪ್ರಸರಣ, ದನಗಳ ಸಂತೆ ಮತ್ತು ಜಾತ್ರೆಗಳಿಂದ ರೋಗ ಹರಡುತ್ತದೆ.

 ಆರೈಕೆ: \ ಕಾಲು ಮತ್ತು ಬಾಯಿಯಲ್ಲಿನ ಹುಣ್ಣನ್ನು ಶೇಕಡ 0.5ರಷ್ಟು ಅಡುಗೆ ಸೋಡಾ ದ್ರಾವಣದಿಂದ ಶುದ್ಧಗೊಳಿಸುವುದು, ಮೃದು ಆಹಾರವಾದ ಗಂಜಿ, ಬಾಳೆಹಣ್ಣು, ರಾಗಿ ಅಂಬಲಿ ತಿನಿಸುವುದು, ಆಂಟಿ ಬಯೋಟಿಕ್ಸ್ ಮತ್ತು ವಿಟಮಿನ್ ಇಂಜೆಕ್ಷನ್ ಕೊಡಿಸುವುದು,

ತಡೆಗಟ್ಟುವುದು ಹೇಗೆ: ರೋಗಪೀಡಿತ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ಪ್ರತ್ಯೇಕಿಸಿ ಉಪಚರಿಸುವುದು, ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುವುದು, ಕ್ರಿಮಿನಾಶಕ ದ್ರಾವಣವನ್ನು ಬಳಸಿ ದಿನಕ್ಕೆ 3-4 ಬಾರಿ ಕೊಟ್ಟಿಗೆ ಮತ್ತು ಆವರಣ ಸ್ವಚ್ಛತೆಗೊಳಿಸುವುದು, ರೋಗ ಪೀಡಿತ ಜಾನುವಾರು ಉಪಚರಿಸುವವರು ಸಹ ಇತರ ಜಾನುವಾರು ಮಾಲೀಕರ ಸಂಪರ್ಕದಿಂದ ದೂರ ಇರುವುದು, ರೋಗೋದ್ರೇಕದ ಸಂದರ್ಭದಲ್ಲಿ ಹೊಸದಾಗಿ ಜಾನುವಾರು ಕೊಳ್ಳುವುದು ಜಾತ್ರೆ ಅಥವಾ ಸಂತೆಗಳಲ್ಲಿ ಮಾಲೀಕರು ಮತ್ತು ಜಾನುವಾರುಗಳು ಭಾಗವಹಿಸುವುದು ಅಸುರಕ್ಷಿತ, ಜಾತ್ರೆ ಅಥವಾ ಸಂತೆಗಳಲ್ಲಿ ಭಾಗವಹಿಸುವ ಜಾನುವಾರುಗಳಿಗೆ ಕನಿಷ್ಠ 21 ದಿನಗಳ ಹಿಂದೆ ಲಸಿಕೆ ಮಾಡಿದ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ,

ಕಾಲು ಬಾಯಿ ರೋಗವು ಪಿಕಾರ್ನೋ ಎಂಬ ವೈರಸ್ ನಿಂದ ಉಂಟಾಗಲಿದ್ದು, ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಲಸಿಕೆ ಹಾಕಿಸುವುದೊಂದೇ ಕಾಲುಬಾಯಿ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗ, ಎನ್ ಎ ಡಿ ಸಿ ಪಿ ಯೋಜನೆಯಡಿ ಪಶುಪಾಲನೆ ಇಲಾಖೆಯು ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಗ್ರಾ.ಪಂ. ಸಹಯೋಗದೊಂದಿಗೆ ಎಲ್ಲಾ ರಾಸುಗಳಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮ ರೂಪಿಸಿದ್ದು, ನಾಲ್ಕನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ಅಕ್ಟೋಬರ್ 25 ರವರೆಗೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಗ್ರಾಮಗಳಲ್ಲಿನ ರಾಸುಗಳಿಗೆ ಉಚಿತವಾಗಿ ಕಾಲುಬಾಯಿ ರೋಗದ ಲಸಿಕೆ ಹಾಕಲಾಗುವುದು. ರೈತ ಬಾಂಧವರು ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಕೋರಲಾಗಿದೆ.

 -ಡಾ.ನಾಗಭೂಷಣ್. ತಾಲೂಕು ಪಶು ಇಲಾಖೆ ಸಹಾಯಕ ನಿದೇರ್ಶಕರು, ಕೊರಟಗೆರೆ