Chitradurga: ಹೆಂಡತಿಯ ವಿರುದ್ದ ಕೊಲೆ ಆರೋಪ ಮಾಡಿದ ಸಂಬಂಧಿಕರು: ಗಂಡನನ್ನು ಸಾಯಿಸಿಲ್ಲ ಎಂದು ಕಣ್ಣೀರಿಟ್ಟ ಮಡದಿ
ಅದು ಪ್ರೀತಿಸಿ ವಿವಾಹವಾಗಿದ್ದ ಜೋಡಿ. ಹೀಗಾಗಿ ಎರಡು ಕಡೆಯ ಬಂಧು ಮಿತ್ರರಿಂದ ದೂರವಾಗಿ, 18 ವರ್ಷದ ದಾಂಪತ್ಯವನ್ನು ಸಂತಸದಿಂದ ಸಾಗಿಸಿದ್ರು. ಆದ್ರೆ ಈಗ ಗಂಡನೊಂದಿಗೆ ಅನ್ಯೋನ್ಯವಾಗಿದ್ದ ಪತ್ನಿಯೇ ಗಂಡನನ್ನು ಕೊಂದಿದ್ದಾಳೆಂಬ ಗಂಭೀರ ಆರೋಪ ಕೇಳಿ ಬಂದಿದೆ.
![Relatives who accused wife of murder and wife in tears that she did not kill her husband gvd Relatives who accused wife of murder and wife in tears that she did not kill her husband gvd](https://static-gi.asianetnews.com/images/01j49nha9j4w44p1d8b59twmv1/svdv_363x203xt.jpg)
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಆ.02): ಅದು ಪ್ರೀತಿಸಿ ವಿವಾಹವಾಗಿದ್ದ ಜೋಡಿ. ಹೀಗಾಗಿ ಎರಡು ಕಡೆಯ ಬಂಧು ಮಿತ್ರರಿಂದ ದೂರವಾಗಿ, 18 ವರ್ಷದ ದಾಂಪತ್ಯವನ್ನು ಸಂತಸದಿಂದ ಸಾಗಿಸಿದ್ರು. ಆದ್ರೆ ಈಗ ಗಂಡನೊಂದಿಗೆ ಅನ್ಯೋನ್ಯವಾಗಿದ್ದ ಪತ್ನಿಯೇ ಗಂಡನನ್ನು ಕೊಂದಿದ್ದಾಳೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಈ ಘಟನೆ ನಡೆದಿರೋದಾದ್ರು ಎಲ್ಲಿ ಅಂತೀರಾ? ಈ ವರದಿ ನೋಡಿ. ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರೆ. ಆದ್ರೆ ಖಾಸಗಿ ಬಸ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅವಳಿಹಟ್ಟಿ ಗ್ರಾಮದ ಬಸವರಾಜ್ ಎಂಬ ಯುವಕನು, ಬಸ್ಸಲ್ಲಿ ಪ್ರಯಾಣಿಸ್ತಿದ್ದ ವೇಳೆ ಭೀಮಸಮುದ್ರದ ರಾಧ ಎಂಬ ಯುವತಿಯನ್ನು ಪ್ರೀತಿಸಿ ಮದ್ವೆಯಾಗಿದ್ದನು.
ಅಂದಿನಿಂದ ಇವರಿಬ್ರು ಸಹ ಎರಡು ಕಡೆಯ ಸಂಬಂಧಿಗಳನ್ನು ದೂರವಿಟ್ಟಿದ್ದು, ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಶ್ರೀಕೃಷ್ಣ ವೃತ್ತದ ಬಳಿ ಹೊಸಮನೆ ಕಟ್ಕೊಂಡು ಅನ್ಯೋನ್ಯವಾಗಿದ್ದರು. ಇವರಿಗೆ 18 ವರ್ಷದ ಓರ್ವ ಮಗನಿದ್ದು, ಬೆಂಗಳೂರಿನ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾನೆ. ಆದ್ರೆ ಈಗ ಈ ಕುಟುಂಬದ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಆರೋಗ್ಯವಾಗಿದ್ದ ಬಸವರಾಜ್ (44) ದಿಢೀರ್ ಅಂತ ಇಂದು ಬೆಳಗಿನ ಜಾವ ಅನುಮಾನಸ್ಪದವಾಗಿ ಮನೆಯ ಬೆಡ್ ಮೇಲೆ ವಾಂತಿ ಭೇದಿ ಮಾಡಿಕೊಂಡು ಅಸುನೀಗಿದ್ದಾನೆ.
ಹೀಗಾಗಿ ಆಕ್ರೋಶಗೊಂಡಿರುವ ಬಸವರಾಜನ ಸಹೋದರರು, ಇದು ಆಕಸ್ಮಿಕ ಸಾವಲ್ಲ, ಈ ಸಾವಿನ ಹಿಂದೆ ದೊಡ್ಡ ಷಡ್ಯಂತ್ರವಿದೆ. ಹಣದ ವ್ಯವಹಾರ ಹಾಗು ಪತ್ನಿಯ ಅಕ್ರಮ ಸಂಬಂಧದ ವಾಸನೆ ಇದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಸಾವಿಗೆ ನನ್ನ ಅತ್ತಿಗೆ ನೇರ ಹೊಣೆಯಾಗಿದ್ದು, ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯ ಬಯಲಿಗೆಳೆಯುವಂತೆ ಆಗ್ರಹಿಸಿದ್ದಾರೆ. ಇನ್ನು ಈ ಆರೋಪದ ಬಗ್ಗೆ ಮೃತ ಬಸವರಾಜನ ಪತ್ನಿ ರಾಧ ಅವರನ್ನು ಕೇಳಿದ್ರೆ, ನಾನು ನನ್ನ ಗಂಡನ ಕೊಲೆ ಮಾಡಿಲ್ಲ. ಆದ್ರೆ ನನ್ನ ಗಂಡನ ಸಹೋದರರು ಈ ರೀತಿ ಸುಳ್ಳು ಆರೋಪ ಮಾಡ್ತಿದ್ದಾರೆ.
ಮುಂದಿನ ಶುಕ್ರವಾರ ದುನಿಯಾ ವಿಜಯ್ 'ಭೀಮ'ನ ಹಬ್ಬ: ಚಿತ್ರ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ
ಆದ್ರೆ ನಾನು ಯಾವುದೇ ತಪ್ಪು ಮಾಡಿಲ್ಲ. ಯಾರಿಂದಲು ನಾವು ಸಾಲ ಮಾಡಿಲ್ಲ. ಅಲ್ಲದೇ ನಾನು ತಪ್ಪುಮಾಡಿದ್ರೆ ಆ ದೇವರೇ ನನಗೆ ಶಿಕ್ಷೆ ಕೊಡಲಿ ಎಂದಿದ್ದಾರೆ. ಈ ಪ್ರಕರಣ ಸಂಬಂಧ ಚಿತ್ರದುರ್ಗದ ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಒಟ್ಟಾರೆ ಖಾಸಗಿ ಬಸ್ ನಿಲ್ದಾಣದ ಸ್ನೇಹಜೀವಿ ಎನಿಸಿದ್ದ ಅವಳಿಹಟ್ಟಿ ಬಸಣ್ಣ ಸಾವನ್ನಪ್ಪಿದ್ದಾರೆ. ಆದ್ರೆ ಈ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಪ್ರೀತಿಸಿ ಕೈಹಿಡಿದಿದ್ದ ಪತ್ನಿಯನ್ನು ಆವರಿಸಿದೆ. ಹೀಗಾಗಿ ಸೂಕ್ತ ತನಿಖೆಯ ಬಳಿಕವೇ ಪ್ರಕರಣದ ಸತ್ಯಾಸತ್ಯ ಹೊರಬೀಳಬೇಕಿದೆ.