ಪ್ರತಿಯೊಬ್ಬರಿಗೂ ಸಕಾರಾತ್ಮಕ ಮನಸ್ಥಿತಿ ಮುಖ್ಯ. ನಕಾರಾತ್ಮಕ ಮನಸ್ಥಿತಿಯವರು ಸಮಾಜದ ಭಯೋತ್ಪಾದಕರಿದ್ದಂತೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಪದ್ಮಶ್ರೀ ಡಾ.ಸಿ.ಎನ್‌.ಮಂಜುನಾಥ್‌ ಹೇಳಿದರು.  

ಮೈಸೂರು (ಜು.17): ಪ್ರತಿಯೊಬ್ಬರಿಗೂ ಸಕಾರಾತ್ಮಕ ಮನಸ್ಥಿತಿ ಮುಖ್ಯ. ನಕಾರಾತ್ಮಕ ಮನಸ್ಥಿತಿಯವರು ಸಮಾಜದ ಭಯೋತ್ಪಾದಕರಿದ್ದಂತೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಪದ್ಮಶ್ರೀ ಡಾ.ಸಿ.ಎನ್‌.ಮಂಜುನಾಥ್‌ ಹೇಳಿದರು. ಹುಣಸೂರು ತಾ.ಚೌಡಿಕಟ್ಟೆಯ ಶಿವಯೋಗ್‌ ದೇಸಿ ಗೋಶಾಲೆ, ಮೈಸೂರಿನ ವಿದ್ಯಾವಿಕಾಸ್‌ ಶಿಕ್ಷಣ ಸಂಸ್ಥೆ, ಡಾ.ಎಂ.ಎಚ್‌.ಮರೀಗೌಡ ಹಾರ್ಟಿಕಲ್ಚರಲ್‌ ಎಜುಕೇಷನಲ್‌ ಅ್ಯಂಡ್‌ ರಿಸಚ್‌ರ್‍ ಫೌಂಡೇಷನ್‌ ಸಹಯೋಗದಲ್ಲಿ ಕರ್ನಾಟಕ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಸಿಟಿವ್‌ ತಮ್ಮಯ್ಯ ಅವರ ಆರೋಗ್ಯ ವಿಚಾರಧಾರೆ ಆಧರಿಸಿದ, ಕೆ.ಸಿ.ವೆಂಕಟೇಶ್‌ ನಿರೂಪಣೆಯ ‘ನಮ್ಮ ಆರೋಗ್ಯ, ಆಹಾರ, ಜವಾಬ್ದಾರಿ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred

ಪಾಸಿಟಿವ್‌ ಮನಸ್ಥಿತಿಯೇ ಒಂದು ಔಷಧಿ ಇದ್ದಂತೆ. ಸಕಾರಾತ್ಮಕ ಮನಸ್ಥಿತಿ ಇದ್ದಲ್ಲಿ ಅವರ ಆರೋಗ್ಯ, ಸುತ್ತಮುತ್ತಲಿನವರ ಆರೋಗ್ಯ ಚೆನ್ನಾಗಿರುತ್ತದೆ. ಸಮಾಜಮುಖಿಯಾಗಿ ಕೆಲಸ ಮಾಡಲು ಕೆಲವರಿಗೆ ಪ್ರೇರಣೆ ನೀಡುತ್ತದೆ. ಆದರೆ, ನಕಾರಾತ್ಮಕ ಧೋರಣೆ ಇದ್ದಲ್ಲಿ ಭಯೋತ್ಪಾದಕರಿದ್ದಂತೆ. ಏಕೆಂದರೆ ಭಯೋತ್ಪಾದಕರು ನೂರಾರು ಮಂದಿಯನ್ನು ಕೊಂದರೆ ನಕಾರಾತ್ಮಕ ಮನಸ್ಥಿತಿ ಇಡೀ ಸಮಾಜಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ ದೈಹಿಕ, ಮಾನಸಿಕ, ಸಮಾಜದ ಆರೋಗ್ಯ ಮುಖ್ಯ ಎಂದರು. ರಾಜ್ಯದಲ್ಲಿ ‘ನಂದಿನಿ’ ಹಾಗೂ ‘ಹಾಮ್‌ಕಾಮ್ಸ್‌’ ಎರಡು ಕಣ್ಣುಗಳಿದ್ದಂತೆ. 

ಬಿಜೆಪಿಯಿಂದ ಮತ್ತೆ ಕೋಮುಗಲಭೆ ಸೃಷ್ಟಿ: ಸಚಿವ ಈಶ್ವರ ಖಂಡ್ರೆ

ಪ್ರತಿಯೊಬ್ಬರೂ ಹಾಲು ಹಾಗೂ ತರಕಾರಿಗಳನ್ನು ಮೂರು ದಿನ ಅಂದರೆ ನಿನ್ನೆ, ಇವತ್ತು, ನಾಳೆ ಸೇವಿಸಬೇಕು ಎಂದು ಸಲಹೆ ಮಾಡಿದ ಅವರು, ಹಸಿವಿನ ಸೂಚ್ಯಂಕದಲ್ಲಿ ಭಾರತ 102-106ನೇ ಸ್ಥಾನದಲ್ಲಿದೆ. ಆದರೆ 90 ಸಾವಿರ ಕೋಟಿಯಷ್ಟುಆಹಾರವನ್ನು ನಷ್ಟಮಾಡುತ್ತಿದ್ದೇವೆ. ಯಾರಿಗೆ ಆಗಲಿ ಕೊಡುವಾಗ ಹಳಸಿದ್ದನ್ನು ಕೊಡಬಾರದು. ಉಳಿಸಿದ್ದನ್ನು ಕೊಡಬೇಕು ಎಂದರು. ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್‌, ಪಾರ್ಶ್ವವಾಯು ಮೊದಲಾದ ರೋಗಗಳು ಹೆಚ್ಚುತ್ತಿರುವುದಕ್ಕೆ ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯೇ ಕಾರಣ ಎಂದು ವ್ಯಾಖ್ಯಾನಿಸಿದರು.

ತಿನ್ನುವುದಕ್ಕೆ ಇತಿಮಿತಿ ಇರಲಿ, ನಾಲಿಗೆಗೆ ರುಚಿ ಎಂದು ಸಿಕ್ಕಿದ್ದನ್ನೆಲ್ಲಾ ತಿನ್ನದಿದ್ದಲ್ಲಿ ಆರೋಗ್ಯ ಚೆನ್ನಾಗಿರುತ್ತದೆ. ವಾದ- ವಿವಾದ ಕಡಿಮೆ ಮಾಡಿದರೆ ಸಂಬಂಧಗಳು ಚೆನ್ನಾಗಿರುತ್ತವೆ. ಬೀಗರೂಟ ಮಿಸ್‌ ಆದ್ರೆ ಯಾರೂ ವ್ಯಥೆಪಡಬೇಡಿ. ಕುಡಿಯದೇ ಇದ್ರೆ ದೇಶಕ್ಕೂ ಒಳ್ಳೆಯದು, ದೇಹಕ್ಕೂ ಒಳ್ಳೆಯದು ಎಂದ ಅವರು, ಪ್ರತಿಯೊಬ್ಬರೂ ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ವಾಕಿಂಗ್‌ ಮಾಡಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಒಳ್ಳೆಯ ಗೆಳೆಯರನ್ನು ಸಂಪಾದಿಸಬೇಕು. ಔಷಧಿಯಿಂದ ಅಡ್ಡಪರಿಣಾಮ ಇದೆ. ಆದರೆ ಇವುಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಸದಾ ನಗುನಗುತ್ತಾ ಇರಬೇಕು. ಕೋಪ ಮಾಡಿಕೊಳ್ಳದಿರಿ. ಒಳ್ಳೆಯ ಸ್ನೇಹಿತರಿದ್ದಲ್ಲಿ ಆಯಸ್ಸು 10.12 ವರ್ಷ ಹೆಚ್ಚಾಗುತ್ತದೆ ಎಂದರು. ಮೊಬೈಲ್‌, ಟಿವಿ ಧಾರಾವಾಹಿಗಳು, ಸಾಮಾಜಿಕ ಜಾಲತಾಣಗಳಿಂದ ಮಿದುಳು, ಕಿವಿಗೆ ಹಾನಿಯಾಗುತ್ತದೆ ಎಂದ ಎಚ್ಚರಿಸಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಅನುದಾನಕ್ಕಿಂತ ಅನುಷ್ಟಾನ ಮುಖ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಹಾಗೂ ಬಾಯಲ್ಲಿ ಇರುವುದರಿಂದ ಬಿಳಿ ಅಕ್ಕಿ, ಸಕ್ಕರೆ, ಉಪ್ಪು ಕಡಿಮೆ ಮಾಡಿ, ಮದ್ಯಪಾನ, ಧೂಮಪಾನ ಬಿಡಿ. ಅನುಮಾನ, ಅಹಂಕಾರ, ಅಸೂಯೆ ಬಿಡಿ. ಪ್ರತಿನಿತ್ಯ ಕನಿಷ್ಠ 45 ನಿಮಿಷ ವಾಕಿಂಗ್‌ ಮಾಡಿ ಎಂದರು.

ತೋಟಗಾರಿಕೆ ಇಲಾಖೆ ನಿವೃತ್ತ ನಿರ್ದೇಶಕ ಡಾ.ಎಲ್‌.ಹನುಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವಾಸು, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮುಖ್ಯ ಅತಿಥಿಗಳಾಗಿದ್ದರು. ಕೃತಿ ಕುರಿತು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ತಜ್ಞ ಕೆ.ಪಿ.ಸುರೇಶ, ಪ್ರಕೃತಿ ಚಿಕಿತ್ಸಾ ಕಾರ್ಯಕರ್ತ ಕೆ.ಎಸ್‌. ಗಿರಿರಾಜು ಮಾತನಾಡಿದರು. ಶಿಕ್ಷಣ ಇಲಾಖೆಯ ಡಾ.ಬಿ.ಸಿ. ದೊಡ್ಡೇಗೌಡ ಸ್ವಾಗತಿಸಿದರು. ಡಾ.ನೀ.ಗೂ. ರಮೇಶ್‌ ನಿರೂಪಿಸಿದರು. ಡಾ.ಕೆ. ಶಂಕರೇಗೌಡ ವಂದಿಸಿದರು.

ಸಂಶೋಧನೆ ಜಾಸ್ತಿಯಾದಂತೆ ಕಾಯಿಲೆಗಳು ಜಾಸ್ತಿ: ಎಲ್ಲರೂ ಕಾಲ ಬದಲಾಗಿದೆ ಎನ್ನುತ್ತಾರೆ. ಕಾಲ ಅಲ್ಲೇ ಇದೆ. ಆದರೆ, ಬದಲಾಗಿರುವುದು ಜನ. ಬೇವು ಕಹಿಯಾಗಿಯೇ, ಮಾವು ಸಿಹಿಯಾಗಿಯೇ ಇದೆ. ಆದರೆ, ಮನುಷ್ಯರ ಅಪೇಕ್ಷೆಗಳು ಬದಲಾಗಿವೆ. ಮೊದಲಾದ ಯುವಕರು ವಯಸ್ಸಾದ ತಂದೆ-ತಾಯಿಯನ್ನು ಆಸ್ಪತ್ರೆಗಳಿಗೆ ಕರೆತರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು ತದ್ವಿರುದ್ಧವಾಗಿದೆ. ಮಧುಮಕ್ಕಳಲ್ಲಿ ಮಧುಮೇಹ ಎಂಬಂತೆ ಆಗಿದೆ. ಹೆಚ್ಚು ವಿದ್ಯಾವಂತರಾದಂತೆಲ್ಲಾ ಸಾಮಾನ್ಯ ಜ್ಞಾನ ಕಡಿಮೆಯಾಗುತ್ತಿದೆ. ಸಂಶೋಧನೆಗಳು ಜಾಸ್ತಿಯಾದಂತೆ ಕಾಯಿಲೆಗಳು ಜಾಸ್ತಿಯಾಗುತ್ತಿವೆ ಎಮದು ಡಾ.ಸಿ.ಎನ್‌.ಮಂಜುನಾಥ್‌ ಹೇಳಿದರು.

ಬೆಂ-ಮೈ ಹೈವೇಯಲ್ಲಿ ನಿಯಮ ಉಲ್ಲಂಘನೆ: ಪೊಲೀಸರಿಂದ 1 ಲಕ್ಷ ದಂಡ ವಸೂಲಿ

10 ವರ್ಷದವರೆಗೆ ವಯಸ್ಸು, 20 ವರ್ಷದವರೆಗೆ ಮಾರ್ಕು್ಸ, 30 ವರ್ಷದವರಿಗೆ ಸಂಬಳ, 40 ವರ್ಷದವರೆಗೆ ಉಳಿತಾಯ ಕೇಳ್ತಾರೆ. 60 ವರ್ಷ ಆದ್ರೆ ಬಿ.ಪಿ, ಶುಗರ್‌ ಇದ್ಯಾ ಅಂಥ ಕೇಳ್ತಾರೆ. 70 ಆದ್ರೆ ಮತ್ತೆ ವಯಸ್ಸು ಕೇಳ್ತಾರೆ. ಇದನ್ನು ಅರ್ಥಮಾಡಿಕೊಂಡು ಪರಿಪೂರ್ಣವಾದ ಬದುಕು ಸಾಗಿಸಲು ಪವಿತ್ರವಾದ ಮನಸ್ಸು, ಹೃದಯ ವೈಶಾಲ್ಯತೆ, ಮಾನವೀಯತೆ ಇರಬೇಕು. ಪ್ರಕೃತಿ ನಮಗೆ ಆಮ್ಲಜನಕ ಕೊಟ್ಟಿದೆ. ನೀರು ಕೊಟ್ಟಿದೆ. ಆದರೆ, ಅದೇ ಪ್ರಕೃತಿಯನ್ನು ಕೆಣಕಿದರೆ ಭೂಕಂಪ, ಸುನಾಮಿ, ಭೂಕುಸಿತ, ಕೋವಿಡ್‌ ಮೊದಲಾದವು ಬರುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಕೃತಿಯನ್ನು ಕಾಪಾಡಬೇಕು. ವಾಹನ ದಟ್ಟಣೆ ಕಡಿಮೆ ಮಾಡಬೇಕು. ಮರಗಿಡಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.