Asianet Suvarna News Asianet Suvarna News

ವಾರಪತ್ರಿಕೆ ಸಂಪಾದಕನ ಕಿರುಕುಳ, ಪಿಡಿಒ ಆತ್ಮಹತ್ಯೆಗೆ ಯತ್ನ

ವಾರಪತ್ರಿಕೆ ಸಂಪಾದಕ ಹಾಗೂ ಗ್ರಾಪಂ ಸದಸ್ಯನ ಕಿರುಕುಳ ತಾಳಲಾರದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

PDO Tries to commit suicide in mandya due to Journalist Harassment
Author
Bangalore, First Published Jan 22, 2020, 7:59 AM IST

ಮಂಡ್ಯ(ಜ.22): ವಾರಪತ್ರಿಕೆ ಸಂಪಾದಕ ಹಾಗೂ ಗ್ರಾಪಂ ಸದಸ್ಯನ ಕಿರುಕುಳ ತಾಳಲಾರದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾರತೀನಗರ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದಿದೆ.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನಿತಾ ರಾಜೇಶ್ವರಿ ಆತ್ಮಹತ್ಯೆಗೆ ಯತ್ನಿಸಿದವರು. ಅನಿತಾ ರಾಜೇಶ್ವರಿ ಪಿಡಿಒ ಆಗಿ ಕೆಲಸಕ್ಕೆ ಸೇರಿದಾಗಿನಿಂದಲೂ ಪಂಚಾಯ್ತಿ ಸದಸ್ಯ ಹಾಗೂ ವಾರಪತ್ರಿಕೆ ಸಂಪಾದಕನಾಗಿರುವ ಆರ್‌ ಟಿಐ ಕಾರ್ಯಕರ್ತನೊಬ್ಬ ಇಲ್ಲಸಲ್ಲದ ವಿಚಾರಕ್ಕೆ ಕಚೇರಿಗೆ ಬಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ರಂಗನತಿಟ್ಟಿನಲ್ಲಿ ಅನಿಲ್ ಕುಂಬ್ಳೆ ದೋಣಿ ವಿಹಾರ

ಈ ಸಂಬಂಧವಾಗಿ ಅನಿತಾ ರಾಜೇಶ್ವರಿ ತನ್ನ ತಂದೆ ಶಿಕ್ಷಕರಾದ ಮಹದೇವಯ್ಯ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಎಎಸ್‌ಐ ಆಗಿರುವ ತಾಯಿ ಕಮಲಾಕ್ಷಿ ಅವರಿಗೆ ಈ ವಿಷಯ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿರುಕುಳ ನೀಡುತ್ತಿದ್ದ ಗ್ರಾಪಂ ಸದಸ್ಯ ಹಾಗೂ ಆರ್‌ಟಿಐ ಕಾರ್ಯಕರ್ತರೊಂದಿಗೆ ಪೋಷಕರು ಮಾತುಕತೆ ನಡೆಸಿದ್ದರು. ಅಲ್ಲದೇ ಕಿರುಕುಳ ನೀಡದಂತೆ ಮನವಿ ಮಾಡಿದ್ದರು.

ಆದರೂ ಇವರ ಕಿರುಕುಳ ನಿಲ್ಲದ ಕಾರಣ ತೀವ್ರ ಮನನೊಂದ ಅನಿತಾ ರಾಜೇಶ್ವರಿ ಮಂಗಳವಾರ ಮಧ್ಯಾಹ್ನ ಗ್ರಾಮ ಪಂಚಾಯಿತಿಯ ಮೇಲಂತಸ್ತಿನಲ್ಲಿರುವ ಸಭಾಂಗಣಕ್ಕೆ ತೆರಳಿ ರೇಷ್ಮೆ ಹುಳುವಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿದ್ದಾರೆ.

ಸರ್ಕಾರಿ ಕಚೇರಿಯೇ ಇವರಿಗೆ ಸಿನಿಮಾ ಥಿಯೇಟರ್..!

ಸಭಾಂಗಣಕ್ಕೆ ಹೋದ ಅನಿತಾ ರಾಜೇಶ್ವರಿ ಕಚೇರಿಗೆ ವಾಪಸ್‌ ಬಾರದಿದ್ದರಿಂದ ಗ್ರಾಪಂ ಸಿಬ್ಬಂದಿ ನಿಂಗಯ್ಯ ಅನುಮಾನಗೊಂಡು ಪರಿಶೀಲಿಸಿದಾಗ ಅಧಿಕಾರಿ ವಿಷ ಸೇವನೆ ಮಾಡಿದ್ದು ಗೊತ್ತಾಗಿದೆ. ತಕ್ಷಣ ಇವರನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಭಾರತೀನಗರ ಠಾಣೆಯ ಪಿಎಸ್‌ಐ ಮಂಜುನಾಥ್‌, ಮುಂದಿನ ತನಿಖೆ ಕೈಗೊಂಡಿದ್ದಾರೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

Follow Us:
Download App:
  • android
  • ios