Asianet Suvarna News Asianet Suvarna News

ಗೋಕಾಕ: ಶಾಸಕ ರಮೇಶ ಜಾರಕಿಹೊಳಿಗೆ ಹಳೆಯ ಸಮಸ್ಯೆಗಳೇ ದೊಡ್ಡ ಸವಾಲು

ಕ್ಷೇತ್ರದಲ್ಲಿ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಹಳ್ಳಿಗಳಲ್ಲಿನ ಚಿತ್ರಣ ಇನ್ನಾದರೂ ಬದಲಾದೀತೇ ಎಂಬ ನಿರೀಕ್ಷೆಯಲ್ಲಿದ್ದಾರೆ ಜನರು| ಸತತವಾಗಿ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರೂ ಕ್ಷೇತ್ರದ ಮತದಾರರು ಮಾತ್ರ ಅವರನ್ನು ಕೈಬಿಟ್ಟಿಲ್ಲ|

MLA Ramesh Jarakiholi Faces Big Challenges in Gokak in Belagavi District
Author
Bengaluru, First Published Dec 13, 2019, 9:02 AM IST

ಬೆಳಗಾವಿ(ಡಿ.13): ಗೋಕಾಕ ವಿಧಾನಸಭೆ ಕ್ಷೇತ್ರದಲ್ಲಿ ನೂತನ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಹೊಸ ಸಮಸ್ಯೆಗಳಿಂತ ಹಳೆ ಸಮಸ್ಯೆಗಳದ್ದೇ ದೊಡ್ಡ ಸವಾಲು ಎದುರಾಗಿದೆ. ಮೊದಲ ಬಾರಿ ಉಪಚುನಾವಣೆ ಎದುರಿಸಿದ ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರ ಗೆಲವಿನ ಮೂಲಕ ಬಿಜೆಪಿ ತನ್ನ ಖಾತೆ ತೆರೆದಿದೆ. 

ಕ್ಷೇತ್ರದಲ್ಲಿ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಹಳ್ಳಿಗಳಲ್ಲಿನ ಚಿತ್ರಣ ಇನ್ನಾದರೂ ಬದಲಾದೀತೇ ಎಂಬ ನಿರೀಕ್ಷೆಯಲ್ಲಿದ್ದಾರೆ ಜನರು. ಸತತವಾಗಿ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರೂ ಕ್ಷೇತ್ರದ ಮತದಾರರು ಮಾತ್ರ ಅವರನ್ನು ಕೈಬಿಟ್ಟಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಜೊತೆಗೆ ಮಹತ್ವದ ಖಾತೆ ದೊರೆಯಲಿದೆ. ಹಾಗಾಗಿ, ಕ್ಷೇತ್ರದ ಜನರು ಹಲವಾರು ಅಭಿವೃದ್ಧಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಜಕೀಯ ಮೇಲಾಟದಲ್ಲಿ ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ತೀರಾ ಹಿನ್ನಡೆಯಾಗಿದೆ. ಪ್ರಮುಖವಾಗಿ ತಾಲೂಕು ಕೇಂದ್ರವಾಗಿರುವ ಗೋಕಾಕ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬವಾಗುತ್ತಿವೆ. 

ನಿರಂತರ ಕುಡಿಯುವ ನೀರಿನ ಯೋಜನೆ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿದೆ. ವಾಸ್ತವದಲ್ಲಿ 24X7 ನಿರಂತರ ನೀರು ಪೂರೈಕೆ ಆಗುತ್ತಿಲ್ಲ. ವಾರದಲ್ಲಿ ಎರಡು ಬಾರಿ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಮಾಸ್ಟರ್ ಪ್ಲಾನ್ ಮಾಡಿದ್ದರಿಂದ ಗೋಕಾಕ ನಗರದ ಒಳರಸ್ತೆಗಳಲ್ಲಿನ ಸಂಚಾರ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರಿದೆ. ಎಲ್ಲಿ ನೋಡಿಡರಲ್ಲಿ ಧೂಳು ಕಂಡುಬರುತ್ತಿದೆ. ಗೋಕಾಕ ನಗರವನ್ನು ಒಂದು ಸುತ್ತು ಹೊಡೆದರೆ ಸಾಕು ಕೆಂಧೂಳು ನಮ್ಮನ್ನು ಆವರಿಸುತ್ತದೆ. 

ಮೂಲಭೂತ ಸೌಲಭ್ಯಗಳದ್ದೇ ದೊಡ್ಡ ಸಮಸ್ಯೆ: 

ಗೋಕಾಕ ಕ್ಷೇತ್ರದಲ್ಲಿನ ಸಮಸ್ಯೆಗಳು ಇಂದು ನಿನ್ನೆಯದ್ದಲ್ಲ. ಗೋಕಾಕ ನಗರ ಸೇರಿದಂತೆ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಕಂಡಿದ್ದರೂ ಚರಂಡಿಗಳೇ ಇಲ್ಲ. ಹಾಗಾಗಿ, ಸ್ನಾನದ ನೀರು ಹೋಗಲು ಚರಂಡಿಗಳಿಲ್ಲದಿರುವುದರಿಂದ ಎಲ್ಲರೂ ರಸ್ತೆಯ ಮೇಲೆಯೇ ನೀರನ್ನು ಬಿಡುವುದು ಸಾಮಾನ್ಯ. ಇದರಿಂದಾಗಿ ಸೊಳ್ಳೆ, ನೊಣಗಳ ಕಾಟ ತಪ್ಪಿದ್ದಲ್ಲ. ಸದಾ ದುರ್ನಾತ ಬೀರುತ್ತಲೆ ಇರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಹೋದರೆ, ರಸ್ತೆಗಳ ಮೇಲೆಯೇ ಚರಂಡಿ ನೀರು ಸಂಗ್ರಹವಾಗಿದೆ. ಇಲ್ಲಿ ಸಂಚರಿಸಬೇಕಾದರೆ ಮೂಗು ಮುಚ್ಚಿಕೊಂಡೇ ಹೋಗಬೇಕಿದೆ. 

ನಿರಂತರ ಜ್ಯೋತಿ ಯೋಜನೆಯಡಿ ಮನೆಗಳಿಗೆ ಕಲ್ಪಿಸಲಾಗಿರುವ ವಿದ್ಯುತ್ ಮಾತ್ರ ನಿರಂತರವಾಗಿ ಇಲ್ಲ. ಪದೇ ಪದೆ ವಿದ್ಯುತ್ ಸ್ಥಗಿತವಾಗುತ್ತಲೇ ಇರುತ್ತವೆ. ನಿರಂತರ ಜ್ಯೋತಿ ಇಲ್ಲಿ ಹೆಸರಿಗಷ್ಟೇ ಆಗಿದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಬಹುತೇಕ ಗ್ರಾಪಂಗಳ ಕಚೇರಿಗಳಲ್ಲಿ ಇಂಟರ್‌ನೆಟ್ ಸೌಲಭ್ಯವೇ ಇಲ್ಲ. ಗ್ರಾಮಸ್ಥರು ತಮ್ಮ ಮನೆ ಉತಾರ ಪಡೆಯಲು ಹರಸಾಹಸ ಮಾಡಬೇಕಾಗುತ್ತದೆ. 

ಹದಗೆಟ್ಟ ರಸ್ತೆಗಳು: 

ಗೋಕಾಕ ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳು ಹದಗೆಟ್ಟಿವೆ. ರಸ್ತೆ ಮಾರ್ಗದಲ್ಲಿ ದೊಡ್ಡ ದೊಡ್ಡ ಕಂದಕಗಳು ಸೃಷ್ಟಿಯಾಗಿವೆ. ವಾ ಹನ ಸವಾರರು ಎಚ್ಚ ರಿಕೆಯಿಂದ ವಾಹನ ಚಾಲನೆ ಮಾಡಬೇಕಿದೆ. ತುಸು ಮೈಮರೆತು ವಾಹನ ಚಾಲನೆ ಮಾಡಿದರೆ ಅಪಘಾತ ತಪ್ಪಿದ್ದಲ್ಲ. ಘಟಪ್ರಭಾ ನದಿಗೆ ಬಂದ ಪ್ರವಾಹದ ವೇಳೆಯೂ ನದಿ ತೀರದ ರಸ್ತೆಗಳು, ಸೇತುವೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ರಸ್ತೆಗಳು ಹಾಳಾಗಿವೆ. ಗೋಕಾಕ- ಅಂಕಲಗಿ, ಫಾಲ್ಸ್ ರಸ್ತೆ, ವಣ್ಣೂರ ರಸ್ತೆ, ಗೋಕಾಕ- ತವಗ ಹೀಗೆ ಬಹುತೇಕ ಪ್ರಮುಖ ರಸ್ತೆಗಳು ಹದಗೆಟ್ಟು ಹೋಗಿವೆ. ಏನೇ ಇರಲಿ ಗೋಕಾಕ ವಿಧಾನಸಭೆ ಕ್ಷೇತ್ರದಲ್ಲಿನ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ನೂತನ ಶಾಸಕ ರಮೇಶ ಜಾರಕಿಹೊಳಿ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾಯ್ದುನೋಡಬೇಕು. ಆರನೇ ಬಾರಿ ಶಾಸಕರಾಗಿರುವ ರಮೇಶ ಜಾರಕಿಹೊಳಿ ಬಗ್ಗೆ ಜನರ ಬಹು ನಿರೀಕ್ಷೆ.

ವಾಹ ಸಂತ್ರಸ್ತರ ಗೋಳು ಕಳೆದ ಆಗಸ್ಟ್ ತಿಂಗಳಲ್ಲಿ ಪ್ರವಾಹ ಬಾಧಿತ ಘಟಪ್ರಭಾ ನದಿ ತೀರದ ಗ್ರಾಮಸ್ಥರ ಪರಿಸ್ಥಿತಿ ಹೇಳತೀರದು. ಗೋಕಾಕ ನಗರ ಸೇರಿದಂತೆ ಈ ನದಿ ತೀರದ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ. ಘಟಪ್ರಭಾ ನದಿಗೆ ಬಂದ ಪ್ರವಾಹದಲ್ಲಿ ಮನೆಗಳು ಕೊಚ್ಚಿ ಹೋಗಿವೆ. ನೂರಾರು ಜನರು ಅಕ್ಷರಶಃ ಬೀದಿ ಪಾಲಾಗಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಸಂತ್ರಸ್ತರ ಗೋಳು ಹೇಳತೀರದಾಗಿದೆ. ಮನೆ ಕಳೆದುಕೊಂ ಡಿರುವ ಸಂತ್ರಸ್ತರು ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವುದು ತಪ್ಪಿಲ್ಲ. ಅರ್ಹ ಫಲಾನು ಭವಗಳ ಪಟ್ಟಿಯಿಂದ ಕೆಲವರನ್ನೂ ಕೈಬಿಡಲಾಗಿದೆ ಎಂಬ ಆರೋಪವಿದೆ. ಹೀಗಾಗಿ ಸಂತ್ರಸ್ತರಿಗೆ ಸೂರಿನ ಜತೆಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕಿದೆ.

ಸವಾಲುಗಳೇನು?

1. ನಿರಂತರ ನೀರು ಪೂರೈಕೆ ಆಗುತ್ತಿಲ್ಲ. ವಾರದಲ್ಲಿ ಎರಡು ಬಾರಿ ಮಾತ್ರ ಪೂರೈಕೆ 

2. ಮಾಸ್ಟರ್ ಪ್ಲಾನ್ ಕಾಮಗಾರಿಯಿಂದ ನಗರದಲ್ಲಿ ಸಂಚಾರ ಅಸ್ತವ್ಯಸ್ತಸ್ತ ಗೋಕಾಕ ನಗರದಲ್ಲಿ ಧೂಳಿನ 

3. ಹಾವಳಿ. ಆರೋಗ್ಯದ ಮೇಲೆ ತೀವ್ರ ಪರಿಣಾಮ 

4. ಇಂದಿಗೂ ನೀಗದ ಪ್ರವಾಹ ಸಂತ್ರಸ್ತರ ಗೋಳು. ಕಚೇರಿಯಿಂದ ಕಚೇರಿಗೆ ಅಲೆದಾಟ 

5. ಗೋಕಾಕ ನಗರ ಮತ್ತು ಸಂಪರ್ಕ ರಸ್ತೆಗಳು ಗುಂಡಿಮಯ.

ಈ ಬಗ್ಗೆ ಮಾತನಾಡಿದ ನೂತನ ಶಾಸಕ ರಮೇಶ ಜಾರಕಿಹೊಳಿ ಅವರು, ಗೋಕಾಕ ವಿಧಾನಸಭೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಆದ್ಯತೆ ನೀಡಲಾಗುವುದು. ನಮ್ಮ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗುವುದು. ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios