ಹುಬ್ಬಳ್ಳಿಯಿಂದ ಗೋವಾಕ್ಕೆ ತೆರಳಿದ ಆಟೋರನ್ಗೆ ಸಚಿವ ಶೆಟ್ಟರ್ ಚಾಲನೆ
ಡಿ. 10 ರಿಂದ ಕನ್ಯಾಕುಮಾರಿಯಿಂದ ಆಟೋರಿಕ್ಷಾ ರನ್ ಡಿ. 21ಕ್ಕೆ ಕರ್ಣಾವತಿ ತಲುಪಲಿದೆ| ಇಂಗ್ಲೆಂಡ್, ಆಸ್ಪ್ರೇಲಿಯಾ, ಅಮೆರಿಕ ಹಾಗೂ ಕೆನಡಾದಲ್ಲಿ ನೆಲೆಸಿರುವ ಗುಜರಾತ್ ಮೂಲದ 22 ಮಹಿಳೆಯರು ಸೇರಿ ಒಟ್ಟು 90 ಸ್ವಯಂ ಸೇವಕರು 30 ರಿಕ್ಷಾಗಳಲ್ಲಿ ಪ್ರಯಾಣ ಕೈಗೊಂಡಿದ್ದಾರೆ|
ಹುಬ್ಬಳ್ಳಿ(ಡಿ.16): ವಿಶೇಷ ಮಕ್ಕಳ ಸಹಾಯಾರ್ಥವಾಗಿ ಸೇವಾ ಯುಕೆ (ಇಂಗ್ಲೆಂಡ್) ಸಂಸ್ಥೆ ವತಿಯಿಂದ ಅನಿವಾಸಿ ಭಾರತೀಯರು ಕನ್ಯಾಕುಮಾರಿಯಿಂದ ಗುಜರಾತಿನ ಕರ್ಣಾವತಿಗೆ ಕೈಗೊಂಡ ಆಟೋರಿಕ್ಷಾ ರನ್ನ ಗೋವಾ ಪ್ರಯಾಣಕ್ಕೆ ಭಾನುವಾರ ಬೆಳಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದ್ದಾರೆ.
ಡಿ. 10 ರಿಂದ ಕನ್ಯಾಕುಮಾರಿಯಿಂದ ಆಟೋರಿಕ್ಷಾ ರನ್ ಡಿ. 21ಕ್ಕೆ ಕರ್ಣಾವತಿ ತಲುಪಲಿದೆ. ಇಂಗ್ಲೆಂಡ್, ಆಸ್ಪ್ರೇಲಿಯಾ, ಅಮೆರಿಕ ಹಾಗೂ ಕೆನಡಾದಲ್ಲಿ ನೆಲೆಸಿರುವ ಗುಜರಾತ್ ಮೂಲದ 22 ಮಹಿಳೆಯರು ಸೇರಿ ಒಟ್ಟು 90 ಸ್ವಯಂ ಸೇವಕರು 30 ರಿಕ್ಷಾಗಳಲ್ಲಿ ಪ್ರಯಾಣ ಕೈಗೊಂಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಿವುಡ ಮಕ್ಕಳ ಸಹಾಯಾರ್ಥವಾಗಿ ಪುಣೆ ಸಮೀಪದ ಕೊಕ್ಲಿಯಾದಲ್ಲಿ ಪುನರ ವಸತಿ ಕೇಂದ್ರ ಆರಂಭಿಸುತ್ತಿದ್ದು, ಇದರ ಸಹಾಯಾರ್ಥ ಮತ್ತು ಪ್ರಚಾರಾರ್ಥವಾಗಿ ಅನಿವಾಸಿ ಭಾರತೀಯರು ಈ ಯಾತ್ರೆ ಕೈಗೊಂಡಿದ್ದಾರೆ. ಶಿವಮೊಗ್ಗದಿಂದ ಬಂದ ಯಾತ್ರೆಗೆ ಇಲ್ಲಿಯ ಗಬ್ಬೂರ ಕ್ರಾಸ್ ಬಳಿ ಶನಿವಾರ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಶನಿವಾರ ಸಂಜೆ ಹುಬ್ಬಳ್ಳಿಗೆ ಬಂದ ಪ್ರವಾಸಿಗರಿಗೆ ಸೇವಾ ಭಾರತಿ ಟ್ರಸ್ಟ್ ವತಿಯಿಂದ ವಿವಿಧೆಡೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಯಾತ್ರೆಯಲ್ಲಿ ಪಾಲ್ಗೊಂಡಿರುವ ಗುಜರಾತ್ ಅಹ್ಮದಾಬಾದ್ ಮೂಲದ ಇಂಗ್ಲೆಂಡ್ ನಿವಾಸಿ, ಅಶ್ವಿನ್ ಹಿರಾನಿ ಮಾತನಾಡಿ, ಒಟ್ಟೂ2700 ಕಿಮೀ ದೂರವನ್ನು ನಾವು ಕ್ರಮಿಸಲಿದ್ದೇವೆ. ದಿನಕ್ಕೆ 250-300 ಕಿಮೀ ಪೂರೈಸುತ್ತಿದ್ದು, ಸ್ವಂತ ಖರ್ಚಿನಲ್ಲಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದೇವೆ. ಗಣ್ಯರು ಇದಕ್ಕೆ ಸಹಾಯ ಮಾಡುತ್ತಿದ್ದಾರೆ. ವಿವಿಧ ಕಂಪನಿಗಳು ಪ್ರಾಯೋಜಕತ್ವ ವಹಿಸಿದ್ದು, ಆ ಮೊತ್ತ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ವಿನಿಯೋಗ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಜಗದೀಶ ಶೆಟ್ಟರ ಪತ್ನಿ ಶಿಲ್ಪಾ ಶೆಟ್ಟರ್, ಸೇವಾ ಭಾರತೀಯ ಟ್ರಸ್ಟ್ನ ಕಾರ್ಯದಶಿ ಕೆ. ಗೋವರ್ಧನರಾವ್, ಸಂಯೋಜಕ ಶಂಕರ ಗುಮಾಸ್ತೆ, ಸೇವಾ ಯುಕೆ ಸಂಸ್ಥೆಯ ವೀರಣ್ಣ ಗುಡ್ಡದಕೇರಿ, ಡಾ. ರಘು ಅಕಮಂಜಿ, ಚಂದ್ರಶೇಖರ ಗೋಕಾಕ, ನಾಗೇಶ ಕಲಬುರ್ಗಿ, ಉಮೇಶ ದುಶಿ, ಗಿರೀಶ ಜೋಶಿ, ಸುಬ್ರಹ್ಮಣ್ಯ, ದಿನೇಶ ಸೇರಿದಂತೆ ಇತರರು ಇದ್ದರು.