ಎಲೆಕ್ಷನ್ ಮುಂಚೆ ನೀರು ಬಿಟ್ರಿ, ಈಗ ಪ್ರಾಧಿಕಾರದ ಕಡೆ ಕೈ ತೋರಿಸುತ್ತೀರಿ: ಡಿಕೆಶಿಗೆ ಕ್ಲಾಸ್
ನೀರಿಗಾಗಿ ಧರಣಿ ಕುಳಿತ್ತಿದ್ದ ರೈತರು, ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾರು ತಡೆದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ, (ಜೂ.24): ಬೆಳೆಗಳಿಗೆ ನೀರು ಬಿಡುವಂತೆ ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾರಿಗೆ ರೈತರು ಮುತ್ತಿಗೆ ಹಾಕಿದ್ದಾರೆ.
ಇಂದು (ಸೋವಾರ) ಶಿವಕುಮಾರ್ ಅವರು ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದರು. ಇದನ್ನು ತಿಳಿದ ರೈತರು ಡಿಕೆಶಿ ಕಾರು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಮುಂಚೆ ಯಾವುದೇ ಪ್ರಾಧಿಕಾರ ಲೆಕ್ಕಕ್ಕೆ ತೆಗೆದುಕೊಳ್ಳದೇ ನೀರು ಬಿಟ್ರಿ. ಈಗ ನೀರು ಕೊಡಲು ಪ್ರಾಧಿಕಾರದ ಕಡೆ ಕೈ ತೋರಿಸುತ್ತೀರಾ ಎಂದು ಡಿಕೆಶಿಗೆ ರೈತರು ಫುಲ್ ಕ್ಲಾಸ್ ತೆಗೆದುಕೊಂಡರು.
ಕಳೆದ ಮೂರ್ನಾಲ್ಕು ದಿನಗಳಿಂದ ನೀರಿಗಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಆದರೂ ನೀರು ಬಿಟ್ಟಿಲ್ಲ ಎಂದು ರೈತರು ಅಸಮಾಧಾನ ಹೊರಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಆ ಸಮಯದಲ್ಲಿ ನೀರು ಬಿಡಲು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿತ್ತು ಎಂದು ಸಮಜಾಯಿಸಿ ನೀಡಿದರು. ಪ್ರತಿಭಟನೆ ವಿಷಯ ನನಗೆ ಗೊತ್ತಿಲ್ಲ. ಗೊತ್ತಿದ್ದರೆ ಬಂದು ರೈತರ ಬಳಿ ಮಾತನಾಡುತ್ತಿದ್ದೆ. ನಿಮ್ಮ ಸಮಸ್ಯೆ ಬಗ್ಗೆ ಗಮನ ಹರಿಸುತ್ತೇನೆ ಎಂದು ಭರವಸೆ ನೀಡಿ ಅಲ್ಲಿಂದ ತೆರಳಿದರು.