ಕ್ರೀಡಾ ಮನೋಭಾವನೆಯಿಂದ ಮಾನಸಿಕ, ದೈಹಿಕವಾಗಿ ಸದೃಢ: ಹೊರಟ್ಟಿ
ಬಾಲ್ಯದಿಂದಲೂ ಕ್ರೀಡೆಯಲ್ಲಿರಲಿ ಆಸಕ್ತಿ-ಹೊರಟ್ಟಿ|ಸ ಕರ್ನಾಟಕ ವಿಶ್ವವಿದ್ಯಾಲಯ 69ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ|ಕ್ರೀಡಾ ನಿರ್ದೇಶಕರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಮೂಡುವಂತೆ ಪ್ರಯತ್ನಿಸಬೇಕು| ಕ್ರೀಡೆಗಾಗಿ ಮೀಸಲಿಟ್ಟಹಣ ದುರುಪಯೋಗವಾಗಬಾರದು|
ಧಾರವಾಡ(ಡಿ.11): ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು. ಯಾರಲ್ಲಿ ಕ್ರೀಡಾ ಮನೋಭಾವನೆ ಇರುತ್ತದೆಯೋ ಅವರು ಮಾನಸಿಕ, ದೈಹಿಕವಾಗಿ ಸದೃಢರಾಗಿರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯ 69ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಅಮೃತಧಾರೆ ಕ್ರೀಡಾ ಕೈಪಿಡಿಯನ್ನು ಬಿಡುಗಡೆ ಮಾಡಿದ ಅವರು, ಇತ್ತೀಚಿಗೆ ಕ್ರೀಡೆಯ ಕಡೆಗೆ ಆಸಕ್ತಿ ಕಡಿಮೆ ಆಗುತ್ತಿದೆ. ಓದಿನ ಕಡೆಗೆ ಒಲವು ಹೆಚ್ಚುತ್ತಿದೆ. ಕ್ರೀಡಾ ನಿರ್ದೇಶಕರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಮೂಡುವಂತೆ ಪ್ರಯತ್ನಿಸಬೇಕು. ಕ್ರೀಡೆಗಾಗಿ ಮೀಸಲಿಟ್ಟಹಣ ದುರುಪಯೋಗವಾಗಬಾರದು ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಮಾರಂಭಕ್ಕೆ ಚಾಲನೆ ನೀಡಿದ ಕವಿವಿ ಪ್ರಭಾರಿ ಕುಲಪತಿ ಎ.ಎಸ್. ಶಿರಾಳಶೆಟ್ಟಿ, ಈ ಕ್ರೀಡಾಕೂಟ ಆಯೋಜಿಸಲು ಜೆಎಸ್ಸೆಸ್ ಸಂಸ್ಥೆ ಮುಂದೆ ಬಂದಿದ್ದು ಸಂತೋಷದ ಸಂಗತಿ. ಎಲ್ಲ ಕ್ರೀಡಾಪಟುಗಳು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕೆಂದರು.
ಬಂಗಾಲ ವಾರಿಯರ್ಸ್ ತಂಡದ ಪ್ರೊ ಕಬಡ್ಡಿ ಪಟು ಸುಕೇಶ ಹೆಗಡೆ, ಯಾವ ಆಟದಲ್ಲಿ ನಮಗೆ ಆಸಕ್ತಿ ಇದೆಯೋ ಆ ಆಟದ ಬಗ್ಗೆ ಶ್ರದ್ಧೆ ಹೊಂದಿರಬೇಕು. ಆಟದಲ್ಲಿ ಯಶಸ್ಸು ಕಾಣಲು ಕಠಿಣವಾದ ಪರಿಶ್ರಮ ಅಗತ್ಯ. ನಾನೂ ಕೂಡಾ ಅಥ್ಲೇಟ್ ಇದ್ದೆ, ಕಬಡ್ಡಿಯನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಸೆಸ್ ಕಾರ್ಯದರ್ಶಿ ಡಾ. ನ. ವಜ್ರಕುಮಾರ, ಜೀವನದಲ್ಲಿ ಯಶಸ್ಸು ಕಾಣಲು ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆ ಬೇಕು ಎಂದರು. ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಚಾರ್ಯ ಡಾ.ಜಿ. ಕೃಷ್ಣಮೂರ್ತಿ ಸ್ವಾಗತಿಸಿದರು, ಡಾ. ಜಿನದತ್ತ ಹಡಗಲಿ, ರಂಜನಾ ಬಾದ್ರಿ ನಿರೂಪಿಸಿದರು. ಜಿನ್ನಪ್ಪ ಕುಂದಗೊಳ ವಂದಿಸಿದರು. ಡಾ. ಸೂರಜ್ ಜೈನ್, ಮಹಾವೀರ ಉಪಾದ್ಯೆ ಇದ್ದರು.
ಪ್ರಥಮ ದಿನದ ಕ್ರೀಡಾಕೂಟದ ಅಂತ್ಯದಲ್ಲಿ ಇಲ್ಲಿನ ಜೆಎಸ್ಸೆಸ್ ಸಂಸ್ಥೆ ನಾಲ್ಕು ಬಂಗಾರದ ಪದಕ, ಆರು ಬೆಳ್ಳಿಯ ಪದಕ, ಎರಡು ಕಂಚಿನ ಪದಕ ಪಡೆಯುವ ಮೂಲಕ ಒಟ್ಟು 12 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮೊದಲನೇ ದಿನವೇ ಎರಡು ದಾಖಲೆ ನಿರ್ಮಾಣ ಮಾಡಲಾಯಿತು. ಹೊನ್ನಾವರದ ಎಸ್.ಡಿ.ಎಂ ಪದವಿ ಕಾಲೇಜಿನ ನಾಗರಾಜಗೌಡ ಎತ್ತರ ಜಿಗಿತದಲ್ಲಿ ತನ್ನದೇ ಹೆಸರಿನಲ್ಲಿದ್ದ 1.89 ಮೀ. ಎತ್ತರವನ್ನು 1.90 ಎತ್ತರ ಜಿಗಿಯುವುದರ ಮೂಲಕ ಮೊದಲ ದಾಖಲೆಯನ್ನು ನಿರ್ಮಾಣ ಮಾಡಿದ್ದಾನೆ.ಅದೇ ರೀತಿ ಪುರುಷರ 200 ಮೀ ಓಟದಲ್ಲಿ ಹುಬ್ಬಳ್ಳಿಯ ಕೆ.ಎಲ್.ಇ ಯ ಎಸ್.ಕೆ ಆಟ್ರ್ಸ ಮತ್ತು ಎಚ್.ಎಸ್.ಕೆ. ಸೈನ್ಸ ಕಾಲೇಜಿನ ವಿನಾಯಕ ಸೊಟ್ಟಣ್ಣವರ 21.78 ಸೆಕೆಂಡ್ನಲ್ಲಿ ಓಟವನ್ನು ಕ್ರಮಿಸುವುದರ ಮೂಲಕ ಇದರ ಹಿಂದೆ ಇದ್ದ 21.80 ಸೆಕೆಂಡ್ ದಾಖಲೆಯನ್ನು ಮುರಿದರು.