ಹೆಂಡ್ತಿ ಟಾರ್ಚರ್ ತಡೆಯಲಾಗದೆ ಗಂಡ ಪ್ರಾಣ ಕಳ್ಕೊಂಡ
ಪತ್ನಿಯ ಕಿರುಕುಳ ತಡೆಯಲಾಗದೇ ಪತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನನೊಂದು ವಿಷ ಸೇವಿಸಿ ಸಾವನ್ನಪ್ಪಿದ್ದಾನೆ
ಹಾಸನ [ಫೆ.29]: ಪತ್ನಿಯ ಕಿರುಕುಳ ತಾಳಲಾರದೆ ಮನನೊಂದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ಬಾಳೆಹಳ್ಳ ಗ್ರಾಮದಲ್ಲಿ ಈಚೆಗೆ ನಡೆದಿದೆ. ಗ್ರಾಮದ ವಾಸಿ ಸಂಜನ್ಗೌಡ (33) ಎಂಬವರೇ ಮೃತ ದುರ್ದೈವಿ. ಇವರಿಗೆ 6 ವರ್ಷದ ಮಗಳಿದ್ದಾಳೆ.
ಈಗ್ಗೆ 12 ವರ್ಷಗಳ ಹಿಂದೆ ಸಂಜನಗೌಡ ಅವರು ಸಕಲೇಶಪುರ ತಾಲೂಕಿನ ಹಾಡ್ಯ ಗ್ರಾಮದ ವಾಸಿ ಮಂಜುನಾಥ ಎಂಬುವರ ಮಗಳು ಭುವನೇಶ್ವರಿಯನ್ನು ಪ್ರೀತಿಸಿ ವಿವಾಹವಾಗಿದ್ದರು.
ಸಂಜನಗೌಡ ಮತ್ತು ಭುವನೇಶ್ವರಿ ಬೆಂಗಳೂರಿನ ಬೊಮ್ಮೇನಹಳ್ಳಿ ವಿಶ್ವಪ್ರಿಯಾ ಲೇಔಟ್ನಲ್ಲಿ ವಾಸವಾಗಿದ್ದರು. ಈಚೆಗೆ ಇವರಿಬ್ಬರಲ್ಲಿ ಹೊಂದಾಣಿಕೆಯಾಗದ ಕಾರಣ ಬೆಂಗಳೂರಿನಲ್ಲಿ ಬೇರೆ ಬೇರೆ ವಾಸವಾಗಿದ್ದರು.
ಬೆಳಗಾವಿ: ಬಾಡೂಟಕ್ಕೆ ಕರೆಯದಕ್ಕೆ ಹೀಗ್ ಮಾಡೋದಾ?...
ಅಲ್ಲದೇ, ಭುನೇಶ್ವರಿ ಅವರು ಪದೇ ಪದೇ ಮನೆಯ ಹತ್ತಿರ ಬರಬೇಡ. ಎಲ್ಲಿಯಾದರೂ ಹೋಗಿ ನಮಗೆ ನಿರಾಳವಾಗಿರುತ್ತದೆ ಎಂದು ಸಂಜನ್ಗೌಡ ಅವರಿಗೆ ಹೇಳಿದ್ದಾರೆ. ಈ ವಿಷಯವನ್ನು ಸಂಜನ್ಗೌಡ ತಮ್ಮ ತಾಯಿಗೆ ತಿಳಿಸಿದ್ದರು. ಫೆ.23ರಂದು ಸಂಜನ್ಗೌಡ ಅವರು ಊರಿಗೆ ಬಂದಿದ್ದರು. ಆದರೆ, ಫೆ.26ರಂದು ಮನನೊಂದು ವಿಷ ಸೇವಿಸಿದ್ದರು. ಕೂಡಲೇ ಅವರನ್ನು ಹೆತ್ತೂರು ಮತ್ತು ಸಕಲೇಶಪುರ ಆಸ್ಪತ್ರೆಗೆ ತೋರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಂಜನ್ಗೌಡ ಮೃತಪಟ್ಟಿದ್ದಾರೆ.
ತಮ್ಮ ಮಗ ಸಂಜನ್ಗೌಡ ಅವರ ಸಾವಿಗೆ ಕಾರಣರಾದ ಸೊಸೆ ಭುನೇಶ್ವರಿ, ಆಕೆಯ ತಾಯಿ ನಳಿನಿ, ಸಹೋದರ ಲತೇಶ್ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ತಾಯಿ ಸರೋಜಮ್ಮ ಯಸಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.