Asianet Suvarna News Asianet Suvarna News

ಅಧಿಕಾರಿಗಳ ಬೇಜವಾಬ್ದಾರಿತನವೇ ಹೆಣ್ಣು ಭ್ರೂಣ ಹತ್ಯೆಗೆ ಕಾರಣ: ಸಚಿವ ದಿನೇಶ್‌ ಗುಂಡೂರಾವ್

ಆರೋಗ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನವೇ ಹೆಣ್ಣು ಭ್ರೂಣಹತ್ಯೆಗೆ ಪ್ರಮುಖ ಕಾರಣ. ನಮ್ಮ‌ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇಂತಹ ಪ್ರಕರಣದ ಬೆನ್ನು ಬಿದ್ದು ಪತ್ತೆ ಮಾಡಬೇಕಿತ್ತು. 

Irresponsibility of officials is the cause of female foeticide Says Minister Dinesh Gundu Rao gvd
Author
First Published Dec 1, 2023, 1:03 PM IST

ಮಂಡ್ಯ (ಡಿ.01): ಆರೋಗ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನವೇ ಹೆಣ್ಣು ಭ್ರೂಣಹತ್ಯೆಗೆ ಪ್ರಮುಖ ಕಾರಣ. ನಮ್ಮ‌ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇಂತಹ ಪ್ರಕರಣದ ಬೆನ್ನು ಬಿದ್ದು ಪತ್ತೆ ಮಾಡಬೇಕಿತ್ತು. ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಿ ಕೆಲಸ ಮಾಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಹುಳ್ಳೇನಹಳ್ಳಿಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆದಿದೆ ಎನ್ನಲಾಗದ ಆಲೆಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇಂತಹ ಪ್ರಕರಣಗಳಲ್ಲಿ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಜೊತೆಯಲ್ಲಿ ಕೆಲಸ ಮಾಡಬೇಕು. 

ಜಿಲ್ಲೆಯಲ್ಲಿ ನಡೆದಿರುವ ಪ್ರಕರಣದಲ್ಲಿ ಜವಾಬ್ದಾರಿ ಮರೆತಿದ್ದಾರೆ. ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಈ ಬಗ್ಗೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮವಹಿಸಲು ಹೊಸ ಕಾರ್ಯಕ್ರಮ ರೂಪಿಸುತ್ತೇವೆ ಎಂದರು. ಭ್ರೂಣ ಲಿಂಗ ಪತ್ತೆ, ಹತ್ಯೆ ಅನ್ನೋದು ಅತ್ಯಂತ ಕ್ರೂರತನ. ಇಂತಹ ಜಾಲವನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಬಂಧಿತ ವ್ಯಕ್ತಿ ಬಗ್ಗೆ ಆರೋಗ್ಯ ಇಲಾಖೆಯವರು ನಿಗಾ ಇಟ್ಟಿದ್ದರು. ಎರಡು ತಿಂಗಳ ಹಿಂದೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಲೆಮನೆಗೆ ಭೇಟಿ ನೀಡಿದ್ದರು. ಆ ವೇಳೆ ಇಲ್ಲಿ ಯಾವುದೇ ಹೆಣ್ಣು ಭ್ರೂಣ ಪತ್ತೆ, ಹತ್ಯೆಯಂತಹ ಕುರುಹುಗಳು ಪತ್ತೆಯಾಗಿರಲಿಲ್ಲ ಎಂದರು. ಹೆಣ್ಣು ಭ್ರೂಣ ಹತ್ಯೆಯಂತಹ ಪೈಶಾಚಿಕ ಪ್ರಕರಣಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು‌ ಭಾಗಿಯಾಗಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. 

ರಾಜ್ಯ ಸರ್ಕಾರದ ಆಯುಷ್ಯ ಮೂರೇ ತಿಂಗಳು: ಸಂಸದ ಮುನಿಸ್ವಾಮಿ ಭವಿಷ್ಯ

ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡಲು ನಾನು ಒತ್ತಾಯ ಮಾಡುತ್ತೇನೆ. ಮುಂದೆ ಇಂತಹ ಪ್ರಕರಣಗಳು ಜರುಗದಂತೆ ಕ್ರಮವಹಿಸುತ್ತೇವೆ. ಕೃತ್ಯದಲ್ಲಿ ಭಾಗಿಯಾಗಿದ್ದವರಿಗೆ ಉಗ್ರ ಶಿಕ್ಷೆಯಾಗಬೇಕು. ಈ ಪ್ರಕರಣದಲ್ಲಿ ಸಾವಿರಾರು ಅಬಾಶನ್‌ಗಳು ಆಗಿವೆ. ಜನರು ಇಂತಹ ಪ್ರಕರಣದಲ್ಲಿ ಭಾಗಿಯಾಗಲು ಭಯ ಪಡಬೇಕು ಎಂದರು. ಲಿಂಗಾನುಪಾತದಲ್ಲಿ ರಾಜ್ಯದಲ್ಲಿ ಭಾರೀ ವ್ಯತ್ಯಾಸ ಆಗಿದೆ. ಇದು ಸಮಾಜದ ಮೂಲಪಿಡುಗು. ಇದನ್ನು ತೊಲಗಿಸಲು ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು ಎಂದರು. ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಪಿ.ರವಿಕುಮಾರ್, ಕದಲೂರು ಉದಯ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌, ಡಾ.ಬೆಟ್ಟೇಗೌಡ, ಕಾಂಗ್ರೆಸ್‌ ಮುಖಂಡ ಎಂ.ಎಸ್‌.ಚಿದಂಬರ್‌ ಇತರರಿದ್ದರು.

ರಾಜ್ಯ ಸರ್ಕಾರ ಬರ ಎದುರಿಸದೆ ತೆಲಂಗಾಣ ಚುನಾವಣೆಗೆ ಹೋಗಿದ್ದಾರೆ: ಎಚ್.ಡಿ.ರೇವಣ್ಣ

ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಸಚಿವರ ದಿಢೀರ್‌ ಭೇಟಿ: ಆಲೆಮನೆಯೊಂದರಲ್ಲಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ಹೊರಬಿದ್ದ ನಂತರದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮದ್ದೂರು ಹಾಗೂ ಮಂಡ್ಯದ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ದಿಢೀರ್‌ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಪ್ರಕರಣದ ಗಂಭೀರತೆ ಅರಿತು ಖುದ್ದು ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಸ್ಕ್ಯಾನಿಂಗ್ ಸೆಂಟರ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಜಾಗೃತಿ ಮೂಡಿಸಿದರು. ಸರ್ಕಾರದ ಆದೇಶವನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಕೀತು ಮಾಡಿದರು.

Follow Us:
Download App:
  • android
  • ios