10 ಸಾಧಕರಿಗೆ ಇನ್ಫಿ ‘ಆರೋಹಣ’ ಪ್ರಶಸ್ತಿ: ಆವಿಷ್ಕಾರ ಪರಿಹಾರ ಶೋಧಿಸಿದವರಿಗೆ ಸನ್ಮಾನ
ಐವರಿಗೆ 20 ಲಕ್ಷ, ಐವರಿಗೆ ತಲಾ 10 ಲಕ್ಷ ಮೌಲ್ಯದ ಪ್ರಶಸ್ತಿ| ಇನ್ಫೋಸಿಸ್ ಕ್ಯಾಂಪಸ್ನಲ್ಲಿ 2ನೇ ಅವೃತ್ತಿ ಪ್ರಶಸ್ತಿ ಪ್ರದಾನ| ನಿರ್ಗತಿಕರು, ಹಿಂದುಳಿದವರ ಶ್ರೇಯೋಭಿವೃದ್ಧಿ, ಸಾಮಾಜಿಕ ಸಮಸ್ಯೆಗೆ ಆವಿಷ್ಕಾರ ಪರಿಹಾರ ಶೋಧಿಸಿದವರಿಗೆ ಸನ್ಮಾನ|
ಬೆಂಗಳೂರು(ಫೆ.20): ನಿರ್ಗತಿಕರು ಹಾಗೂ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಆವಿಷ್ಕಾರದ ಮೂಲಕ ಪರಿಹಾರ ಶೋಧಿಸಿದ ಹತ್ತು ಮಂದಿಗೆ ಇನ್ಫೋಸಿಸ್ ಫೌಂಡೇಶನ್ ‘ಆರೋಹಣ’ ಸೋಶಿಯಲ್ ಇನ್ನೋವೇಷನ್ ಅವಾರ್ಡ್ ನೀಡಿ ಗೌರವಿಸಿದೆ.
ಬುಧವಾರ ಬೆಂಗಳೂರಿನ ಇಸ್ಫೋಸಿಸ್ ಕ್ಯಾಂಪಸ್ನಲ್ಲಿ ನಡೆದ ಎರಡನೇ ಆವೃತ್ತಿಯ ‘ಆರೋಹಣ’ ಸೋಶಿಯಲ್ ಇನ್ನೋವೇಷನ್ ಅವಾರ್ಡ್ ಸಮಾರಂಭದಲ್ಲಿ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಹತ್ತು ಮಂದಿಗೆ ಒಟ್ಟು 1.50 ಕೋಟಿ ಮೊತ್ತದ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ವಿಭಾಗದ ಐದು ಆವಿಷ್ಕಾರಗಳಿಗೆ 20 ಲಕ್ಷ ಮೊತ್ತದ ಪ್ರಶಸ್ತಿ ಹಾಗೂ ಐದು ಮಂದಿಗೆ 10 ಲಕ್ಷ ಮೊತ್ತದ ಪ್ರಶಸ್ತಿ ನೀಡಿದರು.
ಚಿನ್ನದ ಪ್ರಶಸ್ತಿ (20 ಲಕ್ಷ) ಪುರಸ್ಕೃತರು:
ಆರೋಗ್ಯ ರಕ್ಷಣೆ ವಿಭಾಗದಲ್ಲಿ ರಕ್ತ ಹೊರ ತೆಗೆಯದೇ ಹಿಮೋಗ್ಲೋಬಿನ್ ಮಟ್ಟ ಅಳೆಯುವ ಉಪಕರಣ (ನಾನ್ ಇನ್ವೇಸಿವ್, ನಾನ್ ಕಾಂಟ್ಯಾಕ್ಟ್ ರೋಬಸ್ಟ್ ಹ್ಯಾಂಡ್ ಹೆಲ್ಡ್ ಪೋರ್ಟೆಬಲ್ ಡಿವೈಸ್) ಶೋಧಿಸಿದ ಪಾರ್ಥ ಪ್ರತಿಮ್ ದಾಸ್ ಮಹಾಪಾತ್ರ (ಕೋಲ್ಕತ್ತ), ಮಲೇರಿಯಾ, ಡೆಂಘಿ, ಚಿಕನ್ಗುನ್ಯಾ ರೋಗ ನಿಯಂತ್ರಿಸುವ ಉಪಕರಣ ಅಭಿವೃದ್ಧಿಪಡಿಸಿದ ಡಾ ಬಿನಿತಾ.ಎಸ್.ತುಂಗಾ ಮತ್ತು ಡಾ ರಾಶಬೆಹರಿ ತುಂಗಾ (ಬೆಂಗಳೂರು), ಮೂತ್ರದ ಮೂಲಕ ಟಿಬಿ ಪತ್ತೆ ಮಾಡುವ ಉಪಕರಣ ಆವಿಷ್ಕರಿಸಿದ ಮುಂಬೈನ ತುಮಾಸ್ (ಫೌಂಡೇಶನ್ ಫಾರ್ ಟ್ಯುಬರ್ಕ್ಯುಲೋಸಿಸ್ ಮಾಲ್ನ್ಯೂಟ್ರಿಶನ್ ಆ್ಯಂಡ್ ಏಡ್ಸ್)’, ಸುಸ್ಥಿರತೆ ವಿಭಾಗದಲ್ಲಿ ಮ್ಯಾನ್ಹೋಲ್ ಸ್ವಚ್ಛಗೊಳಿಸುವ ‘ಬ್ಯಾಂಡಿಕೊಟ್’ ಎಂಬ ವಿಶ್ವದ ಮೊದಲ ರೋಬೋಟ್ ಯಂತ್ರ ಶೋಧಿಸಿದ ‘ಕೆ.ರಶೀದ್, ಎಂ.ಕೆ.ವಿಮಲ್ ಗೋವಿಂದ್ ಮತ್ತು ಎನ್.ಪಿ.ನಿಖಿಲ್ (ಕೇರಳ)’, ನಿರ್ಗತಿಕರ ರಕ್ಷಣೆ ವಿಭಾಗದಲ್ಲಿ ಸ್ಟ್ಯಾಂಡಿಂಗ್ ವ್ಹೀಲ್ಚೇರ್ ಆವಿಷ್ಕರಿಸಿದ ‘ಪಿ.ಎಲ್ ರಾಮಲಿಂಗಂ (ಚೆನ್ನೈ) ಅವರಿಗೆ ಚಿನ್ನದ ಪ್ರಶಸ್ತಿ ನೀಡಲಾಯಿತು.
ಬೆಳ್ಳಿ ಪ್ರಶಸ್ತಿ (10 ಲಕ್ಷ) ಪುರಸ್ಕೃತರು:
ಆರೋಗ್ಯ ರಕ್ಷಣೆಯಲ್ಲಿ ನವಜಾತ ಶಿಶುಗಳಿಗೆ ಉಸಿರಾಟ ವ್ಯವಸ್ಥೆ ಕಲ್ಪಿಸುವ ‘ಸಾನ್ಸ್’ ಯಂತ್ರ ಅಭಿವೃದ್ಧಿಪಡಿಸಿದ ‘ನಿತೇಶ್ ಕುಮಾರ್ ಜಾಂಗೀರ್ (ಬೆಂಗಳೂರು)’, ಹಾಲಿ ಇರುವ ಆರ್ಥೋಟಿಕ್ ಕ್ಯಾಲಿಪರ್ಸ್ಗೆ ಪರ್ಯಾಯವಾಗಿರುವ ಮೆಕ್ಯಾನಿಕಲಿ ಆ್ಯಕ್ಟುವೇಟೆಡ್ ಸ್ಟಾನ್ಸ್ ಕಂಟ್ರೋಲ್ಡ್ ನೀ ಆ್ಯಂಕಲ್ ಫäಟ್ ಆರ್ಥೋಟಿಕ್ (ಎಂಎಸ್ಎಸ್ಸಿ-ಕೆಎಎಫ್ಒ) ಅಭಿವೃದ್ಧಿ ಪಡಿಸಿದ ‘ಅನೀಶ್ ಕರ್ಮ (ನವದೆಹಲಿ)’, ಅಪಸ್ಮಾರವನ್ನು ತಡೆಯುವ ಮತ್ತು ಮಾನಸಿಕ ಆರೋಗ್ಯದ ಸ್ಥಿತಿಗತಿ ಗುರುತಿಸುವ ‘ಟಿಜಯ್’ ಎಂಬ ಇಂಟರ್ನೆಟ್ ಆಫ್ ತಿಂಗ್ಸ್ (ಐಒಟಿ) ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಎಂಬ ಧರಿಸಬಹುದಾದ ಉಪಕರಣ ಆವಿಷ್ಕರಿಸಿದ ರಾಜಲಕ್ಷ್ಮೇ ಬೊರ್ಥಕೂರು (ಬೆಂಗಳೂರು)’, ಕ್ಯಾನ್ಸರ್ನಿಂದ ಧ್ವನಿ ಪೆಟ್ಟಿಗೆ ಕಳೆದುಕೊಂಡವವರಿಗೆ ಕೃತಕ ಧ್ವನಿ ಪೆಟ್ಟಿಗೆ (ಔಮ್ವಾಯ್್ಸ ಪ್ರೊಸೆಸಿಸ್) ಅಭಿವೃದ್ಧಿಪಡಿಸಿದ ಡಾ ವಿಶಾಲ್.ಯು.ಎಸ್. ರಾವ್ ಮತ್ತು ಶಶಾಂಕ್ ಮಹೇಶ್ (ಬೆಂಗಳೂರು)’ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದಲ್ಲಿ ಕಡಿಮೆ ವೆಚ್ಚದಲ್ಲಿ ಈರುಳ್ಳಿ ಸಂಗ್ರಹ ಮಾಡಲು ಪರಿಹಾರ ಅಭಿವೃದ್ಧಿಪಡಿಸಿದ ‘ರೋಹಿತ್ ಪಟೇಲ್ (ಮಧ್ಯಪ್ರದೇಶ)’ ಅವರು ಬೆಳ್ಳಿ ಪ್ರಶಸ್ತಿಗೆ ಭಾಜನರಾದರು.
‘ಹೊಸ ಆವಿಷ್ಕಾರಕ್ಕೆ ಸರ್ಕಾರ ಮಾರುಕಟ್ಟೆ ಒದಗಿಸಬೇಕು’
ಫೌಂಡೇಷನ್ನ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ಪ್ರಶಸ್ತಿ ನೀಡಿ ಹೊಸ ಆವಿಷ್ಕಾರ ಉತ್ತೇಜಿಸಿದರೇ ಭವಿಷ್ಯದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಮತ್ತಷ್ಟು ಆವಿಷ್ಕಾರಗಳು ಹೊರಬರಲು ಸಾಧ್ಯವಾಗುತ್ತದೆ. ಇಂತಹ ಆವಿಷ್ಕಾರಗಳನ್ನು ಸರ್ಕಾರ ಉತ್ತೇಜಿಸಬೇಕಿದೆ. ಭವಿಷ್ಯದ ಅಭಿವೃದ್ಧಿಗಾಗಿ ಹೊಸ ಆವಿಷ್ಕಾರಗಳಿಗೆ ಸರ್ಕಾರ ಮಾರುಕಟ್ಟೆ ಒದಗಿಸಬೇಕು ಎಂದರು.
ಎರಡನೇ ಆವೃತ್ತಿಯ ‘ಆರೋಹಣ’ಪ್ರಶಸ್ತಿಗೆ 1700ಕ್ಕೂ ಅಧಿಕ ಅರ್ಜಿ (ಆವಿಷ್ಕಾರ) ಸಲ್ಲಿಕೆಯಾಗಿದ್ದು, ಅದರಲ್ಲಿ ಹತ್ತು ಆವಿಷ್ಕಾರ ಆಯ್ಕೆ ಮಾಡುವುದೇ ಸವಾಲಾಗಿತ್ತು. ಈ ಬಾರಿ ಆರೋಗ್ಯ ರಕ್ಷಣೆ ಸಂಬಂಧಿಸಿದ ಅರ್ಜಿ ಹೆಚ್ಚಿದ್ದರಿಂದ ಮೂರನೇ ಆವೃತ್ತಿಯ ತೀರ್ಪುಗಾರರಲ್ಲಿ ನುರಿತ ವೈದ್ಯರೊಬ್ಬರಿಗೆ ಅವಕಾಶ ನೀಡಲಾಗುವುದು ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಸ್ಫೋಸಿಸ್ ಕಂಪನಿ ಅಧ್ಯಕ್ಷ ನಂದನ್ ನಿಲೇಕಣಿ ಮಾತನಾಡಿ, ವಿದ್ಯಾರ್ಥಿ ಹಂತದಿಂದಲೇ ಆವಿಷ್ಕಾರಕ್ಕೆ ಮುಂದಾದರೆ ಅಭಿವೃದ್ಧಿ ಹೆಚ್ಚು. ಆವಿಷ್ಕರಿಸಿದ ಉಪಕರಣ ಇನ್ನಷ್ಟು ಅಭಿವೃದ್ಧಿ ಪಡಿಸಿ, ಸ್ಮಾರ್ಟ್ ಮಾಡಿ ಜನರಿಗೆ ತಲುಪಿಸುವಂತೆ ಮಾಡಬೇಕೆಂದರು.
ವಿಶ್ವದ ಮೊದಲ ಮ್ಯಾನ್ಹೋಲ್ ರೋಬೋಟ್ ಯಂತ್ರ: ರಶೀದ್
ಮ್ಯಾನ್ಹೋಲ್ ದುರಂತ ಹೆಚ್ಚಾಗುತ್ತಿರುವ ಹಿನ್ನೆಲೆ ಪರಿಹಾರಾರ್ಥವಾಗಿ ಜಗತ್ತಿನಲ್ಲೇ ಮೊದಲ ಬಾರಿಗೆ ‘ಮ್ಯಾನ್ಹೋಲ್ ರೋಬೋಟ್ ಯಂತ್ರ’ ಆವಿಷ್ಕರಿಸಲಾಗಿದೆ. ಕ್ಯಾಮೆರಾ ಹೊಂದಿರುವ ಯಂತ್ರವನ್ನು ಮ್ಯಾನ್ಹೋಲ್ನಲ್ಲಿ ಇಳಿಸಿ ಮೇಲಿಂದಲೇ ಕಂಪ್ಯೂಟರ್ ಮೂಲಕ ಒಬ್ಬರೇ ನಿಯಂತ್ರಿಸಬಹುದು. ಸಂಪೂರ್ಣ ಮೆಟಲ್ನಿಂದ ತಯಾರಿಸಲಾಗಿದ್ದು, ಜಲನಿರೋಧಕವಾಗಿದೆ. ಒಟ್ಟು 1.5 ಕೋಟಿ ವೆಚ್ಚ ತಗುಲಿದೆ ಎಂದು ಕೇರಳದ ಬ್ಯಾಂಡಿಕೊಟ್ ಸಂಶೋಧಿಸಿದ ಕೆ.ರಶೀದ್ ತಿಳಿಸಿದರು.