Asianet Suvarna News Asianet Suvarna News

ಕಡಲ್ಕೊರೆತದಿಂದ Honnavar Eco Beach ಗೆ ಭಾರಿ ಹಾನಿ

ವಿಶ್ವ ಬ್ಲ್ಯೂ ಫ್ಲ್ಯಾಗ್‌ ಮಾನ್ಯತೆಯ ಹೊನ್ನಾವರದ  ಇಕೋ ಬೀಚ್‌ಗೆ ಕಡಲ್ಕೊರೆತದಿಂದ ಭಾರಿ ಹಾನಿಯಾಗಿದೆ. ಕಡಲತೀರದಲ್ಲಿ ನಿರ್ಮಿಸಲಾದ ಪ್ರವಾಸಿಗರ ಆಕರ್ಷಿಸುವ ಕಾಮಗಾರಿಗಳು ಅಲೆಯ ರಭಸಕ್ಕೆ ಅಸ್ತವ್ಯಸ್ತವಾಗಿವೆ.

 

Honnavar Eco Beach  damaged after  sea erosion gow
Author
Bengaluru, First Published Jul 19, 2022, 7:41 AM IST

ಉತ್ತರ ಕನ್ನಡ (ಜು.19):  ಅಂತಾರಾಷ್ಟ್ರೀಯ ಬ್ಲ್ಯೂ ಫ್ಲ್ಯಾಗ್‌ ಮಾನ್ಯತೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಹೊನ್ನಾವರ ಬಳಿಯ ಕಾಸರಕೋಡಿನ ಇಕೋ ಬೀಚ್‌ ಕಡಲ್ಕೊರೆತಕ್ಕೆ ಹಾನಿಗೊಳಗಾಗಿದೆ. ಕಡಲತೀರದಲ್ಲಿ ನಿರ್ಮಿಸಲಾದ ಪ್ರವಾಸಿಗರ ಆಕರ್ಷಿತ ಕಾಮಗಾರಿಗಳು ಅಲೆಯ ರಭಸಕ್ಕೆ ಅಸ್ತವ್ಯಸ್ತವಾಗಿವೆ. ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಪಡೆದಿದ್ದ ಕೆಲವೇ ಬೀಚ್‌ಗಳ ಪೈಕಿ ಹೊನ್ನಾವರದ ಇಕೋ ಬೀಚ್‌ ಕೂಡ ಸೇರಿತ್ತು. ಭಾರೀ ಮಳೆ ಹಾಗೂ ಕಡಲಿನ ಹೊಡೆತಕ್ಕೆ ಕಡಲತೀರ ಸಂಪೂರ್ಣ ಹಾಳಾಗಿದೆ. ಪ್ರವಾಸಿಗರಿಗೆ ನಡೆದಾಡಲು ಇದ್ದ ಸಿಮೆಂಟ್‌ ಪೂಟ್‌ಪಾತ್‌, ಬ್ಲ್ಯೂ ಫ್ಲ್ಯಾಗ್‌ ಹಾರಿಸುತ್ತಿದ್ದ ಧ್ವಜ ಸ್ತಂಭ, ವಾಚ್‌ ಟವರ್‌ ಮತ್ತಿತರ ಆಕರ್ಷಣೀಯಗಳು ಹಾನಿಗೊಳಗಾಗಿದೆ. ಸುಮಾರು 500 ಮೀಟರ್‌ ಉದ್ದಕ್ಕೂ 10 ಮೀಟರ್‌ ಎತ್ತರದವರೆಗೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ. ಕಡಲ್ಕೊರೆತದಿಂದ ನಯನ ಮನೋಹರ ಇಕೋ ಬೀಚ್‌ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟುಹಾನಿಯಾಗಿ ಕಡಲ ಒಡಲಿಗೆ ಸೇರುವ ಭೀತಿ ಎದುರಿಸುತ್ತಿದೆ. ಇಕೋ ಬೀಚ್‌ ಹಾಗೂ ಪಾರ್ಕ್ನ್ನು ಖಾಸಗಿ ಸಂಸ್ಥೆಗೆ ನಿರ್ವಹಣೆಗಾಗಿ ವಹಿಸಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಸುರಿದ ಅಬ್ಬರದ ಮಳೆ ಹಾಗೂ ಭೀಕರ ಸಮುದ್ರ ಕೊರೆತದಿಂದ ಬ್ಲ್ಯೂ ಫ್ಲ್ಯಾಗ್‌ ಬೀಚ್‌ನ ಕೆಲವು ಭಾಗದ ಕುರುಹುಗಳು ಇಲ್ಲದಂತಾಗಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟುಹಾನಿಯಾಗುವ ಭೀತಿ ಇದೆ. ಇಕೋ ಬೀಚ್‌ ಕಡಲ್ಕೊರೆತಕ್ಕೆ ಹಾನಿಯಾಗಿರುವುದು ಇದು ಮೊದಲೇನಲ್ಲ. ಈ ಹಿಂದೆ ‘ತೌಕ್ತೆ’ ಚಂಡಮಾರುತದ ಸಂದರ್ಭದಲ್ಲಿಯೂ ಹಾನಿಗೊಳಗಾಗಿತ್ತು. ಉದ್ಘಾಟನೆಗೂ ಮೊದಲೇ ಕಡಲಬ್ಬರಕ್ಕೆ ತುತ್ತಾಗಿತ್ತು. ಇದರಿಂದ ಇಕೋ ಬೀಚ್‌ಗಾಗಿ ವ್ಯಯಿಸಿದ ಹಣ ನೀರಲ್ಲಿ ಹೋಮವಾದಂತಾಗಿತ್ತು. ಪುನಃ ಪ್ರವಾಸಿಗರ ಆಕರ್ಷಣೆಗೆ ಒಳಗಾಗುವಂತೆ ವ್ಯವಸ್ಥಿತ ಮೂಲ ಸೌಕರ್ಯಗಳೊಂದಿಗೆ ಬೀಚ್‌ ತಲೆ ಎತ್ತಿತ್ತು. ಇದೀಗ ಮತ್ತೆ ಹಾನಿಗೊಳಗಾಗಿದೆ. 

ಕಡಲ್ಕೊರೆತ ತಡೆಗೆ ಕಳೆದ ವರ್ಷ 30 ಕೋಟಿ, ಈ ವರ್ಷ ಇನ್ನೆಷ್ಟುಕೋಟಿ?: ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಕಡಲುಕೊರೆತವನ್ನು ತಡೆಯುವುದಕ್ಕೆ 30 ಕೋಟಿ ರು.ಗೂ ಹೆಚ್ಚು ಹಣವನ್ನು ವ್ಯಯಿಸಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಇತ್ತೀಚೆಗೆ ಉಡುಪಿಯಲ್ಲಿ ಹೇಳಿದ್ದಾರೆ. ಆದರೂ ಕಡಲು ಕೊರೆತ ನಿಂತಿಲ್ಲ, ಈ ಬಾರಿಯೂ ಮಾಮೂಲಿಯಂತೆ ಜಿಲ್ಲೆಯಲ್ಲಿ ಕಡಲುಕೊರೆತ ನಡೆಯುತ್ತಲೇ ಇದೆ.

ಕಳೆದೊಂದು ತಿಂಗಳ ಮಳೆಯ ಹೊಡೆತಕ್ಕೆ ಜಿಲ್ಲೆಯಲ್ಲಿ ಸುಮಾರು 1.8 ಕಿ.ಮೀ. (1,840 ಮೀ.) ನಷ್ಟುಭೂಮಿಯನ್ನು ಸಮುದ್ರ ಕೊರೆದು ಹಾಕಿದೆ. ಮಳೆ ಕೊಂಚ ಇಳಿಮುಖವಾಗಿದ್ದರೂ ಸಮುದ್ರದಲ್ಲಿ ಭಾರಿ ಅಲೆಗಳ ಮೊರೆತ, ಅವುಗಳಿಂದ ಭೂಮಿ ಕೊರೆತ ಮುಂದುವರಿದಿದೆ.

ಮುಖ್ಯವಾಗಿ ಕಾಪು ಮತ್ತು ಬೈಂದೂರು ತಾಲೂಕುಗಳಲ್ಲಿ ಸಮುದ್ರ ಕೊರೆತ ತೀವ್ರವಾಗಿದೆ. ಕಾಪು ತಾಲೂಕಿನ ಮೂಳೂರುನಲ್ಲಿ 200 ಮೀ., ನಡಿಪಟ್ನದಲ್ಲಿ 270 ಮೀ., ಕೈಪುಂಜಾಲುನಲ್ಲಿ 240 ಮೀ., ಬೈಂದೂರು ತಾಲೂಕಿನ ಮರವಂತೆಯಲ್ಲಿ 350 ಮೀ., ಅದ್ರಗೋಳಿಯಲ್ಲಿ 200 ಮೀ., ಕುಂದಾಪುರ ತಾಲೂಕಿನ ಕಂಚುಗೋಡುನಲ್ಲಿ 250 ಮೀ., ಬ್ರಹ್ಮಾವರ ತಾಲೂಕಿನ ಪಡುಕರೆಯಲ್ಲಿ 130 ಮೀ. ಮತ್ತು ಉಡುಪಿ ತಾಲೂಕಿನ ಕುತ್ಪಾಡಿಯಲ್ಲಿ 200 ಮೀ.ಗಳಷ್ಟುಪ್ರದೇಶದಲ್ಲಿ ಕಡಲು ಭೂಮಿಯನ್ನು ಆಕ್ರಮಿಸಿಕೊಂಡಿದೆ.

ಈ ಕೊರೆತವನ್ನು ತಕ್ಷಣಕ್ಕೆ ಮತ್ತು ತಾತ್ಕಾಲಿಕವಾಗಿ ತಡೆಯುವುದಕ್ಕೆ 13.82 ಕೋಟಿ ರು.ಗಳ ಪ್ರಸ್ತಾವನನ್ನು ಕಂದಾಯ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಮಳೆಗಾಲ ಇನ್ನೂ ಮುಗಿದಿಲ್ಲವಾದ್ದರಿಂದ, ಕಡಲು ಕೊರೆತ ಇನ್ನೂ ನಡೆಯಲಿರುವುದರಿಂದ ಸರ್ಕಾರಕ್ಕೆ ಅಧಿಕಾರಿಗಳು ಪುನಃ ಒಂದೆರಡು ಪ್ರಸ್ತಾಪಗಳನ್ನು ಸಲ್ಲಿಸುವ ಅವಕಾಶವಿದೆ.

ಒಂದು ಅಂದಾಜು ಪ್ರಕಾರ ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಡಲು ಕೊರೆತ ತಡೆಯಲು ಕಲ್ಲಿನಗೋಡೆ ನಿರ್ಮಾಣಕ್ಕೆ, ಮರಳಿನ ಚೀಲಗಳನ್ನು ಹಾಕುವುದಕ್ಕೆ ಮತ್ತು ಸಂತ್ರಸ್ಥರಿಗೆ ಪರಿಹಾರ ನೀಡುವುದಕ್ಕೆ ಎಡಿಬಿಯಿಂದ 250 ಕೋಟಿ ರು.ಗಳಿಗೂ ಹೆಚ್ಚು ಹಣವನ್ನು ಸಾಲವಾಗಿ ಪಡೆದು ವ್ಯಯಿಸಲಾಗಿದೆ. ಆದರೆ ಯಾವುದೇ ತಡೆಗೋಡೆಗಳು ಸಮುದ್ರವನ್ನು ತಡೆದು ನಿಲ್ಲಿಸುವುದಕ್ಕೆ ಸಾಧ್ಯವಾಗಿಲ್ಲ.

ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರೂ, ಬಂದರು ಮತ್ತು ಮೀನುಗಾರಿಕಾ ಸಚಿವರೂ ಆಗಿರುವ ಎಸ್‌.ಅಂಗಾರ ಅವರು ಈ ಬಾರಿ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿ ಕಡಲು ಕೊರೆತ ತಡೆಯುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ಅದು ಎಷ್ಟುಕಾರ್ಯಸಾಧು ಎಂಬುದನ್ನು ಕಾಲವೇ ಹೇಳಬೇಕಾಗಿದೆ.

2 ತಂತ್ರಜ್ಞಾನಗಳ ಪ್ರಯೋಗ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಡಲು ಕೊರೆತ ನಿಲ್ಲಿಸಲು, ಕೇರಳದಲ್ಲಿ ಯಶಸ್ವಿಯಾಗಿರುವ ಸೀ ವೇವ್‌ ಬ್ರೇಕರ್‌ ಮತ್ತು ಡಕ್‌ ಫäಟ್‌ ಎಂಬ ಹೊಸ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ಬಳಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಅವರನ್ನು ಕಂಡು ಪ್ರಸ್ತಾಪ ಸಲ್ಲಿಸಲಾಗಿದೆ. ಅವರು ಅಗತ್ಯ ಅನುದಾನ ನೀಡುವ ಭರವಸೆ ಇದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ತಿಳಿಸಿದ್ದಾರೆ.

Follow Us:
Download App:
  • android
  • ios