ಕನ್ನಡ ಮಾಧ್ಯದಲ್ಲಿಯೇ ಓದಿ IFS ನಲ್ಲಿ ರ್ಯಾಂಕ್ ಪಡೆದ ಗ್ರಾಮೀಣ ಪ್ರತಿಭೆ
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಓದಿ ಇದೀಗ IFS ಪರೀಕ್ಷೆಯಲ್ಲಿ 14 ನೇ ರ್ಯಾಂಕ್ ಪಡೆದು ಹಾಸನ ಯುವಕ ಸಾಧನೆ ಮಾಡಿದ್ದಾರೆ.
ಚನ್ನರಾಯಪಟ್ಟಣ [ಮಾ.20]: ಲೋಕಸೇವಾ ಆಯೋಗವು 2019ರಲ್ಲಿ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ತಾಲೂಕಿನ ಚೌಳಗಾಲ ಗ್ರಾಮದ ಸಿ.ಕೆ.ಯೋಗೀಶ್ 14ನೇ ರ್ಯಾಂಕ್ ಪಡೆದು ಅರಣ್ಯ ಸೇವೆಗೆ ಆಯ್ಕೆಯಾಗಿದ್ದಾರೆ.
ತಾಲೂಕಿನ ಸ್ವಗ್ರಾಮದಲ್ಲಿ 1ರಿಂದ 10ನೇ ತರಗತಿವರೆಗೂ ಕನ್ನಡ ಮಾಧ್ಯಮಾದಲ್ಲಿ ಓದಿರುವ ಅವರು ನಂತರ ಬೆಂಗಳೂರಿನಲ್ಲಿ ಮೂರು ವರ್ಷದ ಡಿಪ್ಲೋಮಾ ಕೋರ್ಸ್ ಮುಗಿಸಿ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ತದನಂತರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಕಠಿಣ ಅಭ್ಯಾಸದೊಂದಿಗೆ ಅರಣ್ಯಸೇವೆ ಪರೀಕ್ಷೆಯಲ್ಲಿ ಎರಡನೇ ಪ್ರಯತ್ನದಲ್ಲಿ 14ನೇ ರಾರಯಂಕ್ ಗಳಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ದೆಹಲಿಯಲ್ಲಿ ಉಚಿತವಾಗಿ 10 ತಿಂಗಳು ಸರ್ಕಾರದ ವಿದ್ಯಾರ್ಥಿ ವೇತನದೊಂದಿಗೆ ಕೊಚಿಂಗ್ ಪಡೆದು ಮುಖ್ಯ ಪರೀಕ್ಷೆಯಲ್ಲಿ ಅರಣ್ಯ ವಿಜ್ಞಾನ, ಭೂಗರ್ಭ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡು ಸತತ ಅಭ್ಯಾಸದೊಂದಿಗೆ ಅರಣ್ಯ ಸೇವೆ ಮಾಡುವ ತಮ್ಮ ಮನದಾಳದ ಆಸೆಯನ್ನು ಸಕಾರಗೊಳಿಸಿಕೊಂಡಿದ್ದಾರೆ.
ಇದರೊಂದಿಗೆ ಐಎಎಸ್ ಪರೀಕ್ಷೆಯನ್ನು ನಾಲ್ಕನೇ ಬಾರಿಗೆ ಬರೆದು ಮಾನವಶಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ನೇರ ಸಂದರ್ಶನ ಪರೀಕ್ಷೆ ಮುಗಿದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕೆಎಎಸ್ ಪರೀಕ್ಷೆಯಲ್ಲಿಯೂ 29ನೇ ರ್ಯಾಂಕ್ ಪಡೆದು ತಹಶೀಲ್ದಾರ್ ಆಗಿ ಆಯ್ಕೆಯಾಗಿದ್ದಾರೆ.
ಪ್ರತಿ ಜೀವಿಯ ಉಳಿವಿಗಾಗಿ ಇರುವ ಅರಣ್ಯದ ಮೇಲೆ ತಮಗೆ ಅತೀವ ಪ್ರೀತಿ ಇದ್ದು, ಊರಿನಲ್ಲಿದ್ದಾಗ ತಮ್ಮ ತಂದೆ ಜಮೀನಿನಲ್ಲಿದ್ದ 10 ಮರಗಳನ್ನು ಕಡಿದು ಮಾರಾಟ ಮಾಡಿದ್ದಕ್ಕೆ ಅವರೊಂದಿಗೆ 6 ತಿಂಗಳು ಮಾತು ಬಿಟ್ಟಿದ್ದಾಗಿ ಹೇಳುವ ಅವರು ತಾವು ಪಡೆದ ಅಂಕಗಳಿಂದ ರಾಜ್ಯದಲ್ಲೆ ಅರಣ್ಯ ಸೇವೆ ಮಾಡುವ ಅವಕಾಶ ಸಿಗುವ ವಿಶ್ವಾಸವಿದೆ. ಒಂದೊಮ್ಮೆ ಐಎಎಸ್ ಆದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುವ ನಾಗರೀಕ ಸೇವೆ ತಮ್ಮ ಮೊದಲ ಆಯ್ಕೆ, ಆದಾಗದಿದ್ದಲ್ಲಿ ಅರಣ್ಯಸೇವೆಯಲ್ಲಿ ಮುಂದುವರೆಯುವುದಾಗಿ ತಿಳಿಸುತ್ತಾರೆ.
ಲಕ್ಷ ಸಂಬಳದ ಕೆಲಸ ತೊರೆದು ಕನ್ನಡದಲ್ಲೇ ಪರೀಕ್ಷೆ ಬರೆದು IAS ಪಾಸ್ ಮಾಡಿದ....
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರತಿಭೆ ಇದ್ದರೂ ಸೂಕ್ತ ವೇದಿಕೆ ದೊರಕದಿರುವುದು ಎಷ್ಟೂಮಂದಿ ಮರೆಯಾಗುತ್ತಿದ್ದಾರೆ. ಅವರಿಗೆ ಬಹು ಮುಖ್ಯವಾಗಿ ಕಾಡುವುದು ಇಂಗ್ಲಿಷ್ ಭಾಷೆಯ ತೊಡಕು, ಈ ನಿಟ್ಟಿನಲ್ಲಿ ಸರ್ಕಾರಗಳು ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ನ್ನು ಹೆಚ್ಚು ಪರಿಣಾಮಕಾರಿಯಾಗಿ ಕಲಿಸಿದ್ದೇ ಆದಲ್ಲಿ ದೇಶಕ್ಕಾಗಿ ಸೇವೆ ಮಾಡುವ ಮತ್ತಷ್ಟುಪ್ರತಿಭೆಗಳು ಸೃಷ್ಟಿಯಾಗುತ್ತವೆ ಎಂದು ಯೋಗೀಶ್ ಹೇಳುತ್ತಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಬೇಕಾದ್ರೆ ಪ್ರತಿದಿನ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು, ಪ್ರಸ್ತುತ ವಿದ್ಯಮಾನಗಳ ಜೊತೆಗೆ ಪ್ರತಿ ವಿಷಯದ ಬಗ್ಗೆ ಅಳವಾದ ಜ್ಞಾನ ಹೊಂದಿರಬೇಕು. ಪ್ರತಿಯೊಬ್ಬರಲ್ಲೂ ಅವರದೇ ಆದ ವಿಶೇಷತೆ, ದೌರ್ಬಲ್ಯತೆ ಇರುತ್ತೆ, ಇರುವ ದೌರ್ಬಲ್ಯವನ್ನು ಕಡಿಮೆಗೊಳಿಸುತ್ತಾ ಸಾಗಿ ನಮ್ಮಲ್ಲಿರುವ ವಿಶೇಷತೆಯನ್ನು, ಸಾಮಾರ್ಥ್ಯವನ್ನು ಬೆಳೆಸುತ್ತಾ ಸಾಗಿದಾಗ ನಾವಂದುಕೊಂಡ ಗುರಿ ಮುಟ್ಟಲು ಸಾಧ್ಯವೆಂದರು.