ಬೆಳೆದ ಬೆಳೆ ವರುಣನ ಪಾಲು: ಉಳಿದದ್ದು ಪ್ರಾಣಿಗಳ ಪಾಲು
ಚಾಮರಾಜನಗರದಲ್ಲಿ ಹಾನೂರು ತಾಲೂಕಿನ ಜನ ಬೆಳೆದ ಬೆಳೆ ಕೈಗೆ ಸಿಗದೆ ಕಂಗಾಲಾಗಿದ್ದಾರೆ. ಬೆಳೆದದ್ದು ವರುಣನ ಪಾಲಾದ್ರೆ ಇನ್ನು ಉಳಿದದ್ದು ಕಾಡುಪ್ರಾಣಿಗ ಪಾಲಾಗ್ತಿದೆ. ಬೆಳೆದ ರೈತ ದಾರಿ ಕಾಣದೆ ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ಬಂದಿದೆ.
ಚಾಮರಾಜನಗರ(ಡಿ.07): ಬೆಳೆದದ್ದು ವರುಣನ ಪಾಲು, ಉಳಿದದ್ದು ಪ್ರಾಣಿಗಳ ಪಾಲು. ಮಲೆ ಮಹದೇಶ್ವರ ಬೆಟ್ಟತಪ್ಪಲಿನ ಕುಗ್ರಾಮ ಕಾಡುಹೊಲ ಗ್ರಾಮದ ರೈತರ ಜಮೀನುಗಳ ಸ್ಥಿತಿ. ಗುರುವಾರ ರಾತ್ರಿ ಆನೆಗಳ ಹಿಂಡು ದಾಳಿ ನಡೆಸಿ ಫಸಲು ನಾಶಗೊಳಿಸಿರುವ ಘಟನೆ ಜರುಗಿದೆ.
ಸಂಕಷ್ಟಕ್ಕೆ ರೈತರು:
ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಮಹದೇಶ್ವರ ಬೆಟ್ಟವ್ಯಾಪ್ತಿಯ ಕಾಡುಹೊಲ ಗ್ರಾಮದ ರೈತರಾದ ಪುಟ್ಟಣ್ಣಯ್ಯ, ಕೃಷ್ಣ, ಅಣ್ಣಯ್ಯ, ಪಟ್ಟಾಭಿ, ಮಹಾದೇವಸ್ವಾಮಿ ಹಾಗೂ ಇನ್ನಿತರರ ಜಮೀನುಗಳಲ್ಲಿ ಬೆಳೆಯಲಾಗಿದ್ದ ರಾಗಿ ಫಸಲನ್ನು ತಿಂದು ತುಳಿದು ನಾಶಗೊಳಿಸಿರುವುದರ ಜೊತೆಗೆ ಜಮೀನಿಗೆ ಸುತ್ತಲೂ ನಿರ್ಮಾಣ ಮಾಡಲಾಗಿರುವ ಕಲ್ಲಿನ ತಡೆಗೋಡೆಗಳನ್ನು ನಾಶಗೊಳಿಸಿವೆ. ಆನೆ ಹಿಂಡು ದಾಳಿ ನಡೆಸಿ ಫಸಲು ನಾಶಗೊಳಿಸಿರುವುದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.
ನಿರಂತರ ಕಾಡು ಪ್ರಾಣಿಗಳ ದಾಳಿ:
ಮಹದೇಶ್ಪರ ಬೆಟ್ಟವ್ಯಾಪ್ತಿಯ ವಲಯ ಅರಣ್ಯ ಪ್ರದೇಶದ ಅಂಚಿನಲ್ಲಿ ಬರುವ ಕಾಡುಹೊಲ ಗ್ರಾಮದ ರೈತರು ಮಳೆಯಾಶ್ರಿತ ಬೆಳೆಗಳನ್ನೇ ಪ್ರತಿವರ್ಷ ನಂಬಿ ಉತ್ತು ಬಿತ್ತಿ ಬೇಸಾಯ ಮಾಡುವ ಮೂಲಕ ಸಾಲದ ಸುಳಿಯಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ತಮ್ಮ ಜಮೀನುಗಳಲ್ಲಿ ರಾಗಿ ಫಸಲನ್ನು ಬೆಳೆಯುತ್ತಾರೆ. ಅರಣ್ಯದಂಚಿನಲ್ಲಿ ಬರುವುದರಿಂದ ಪ್ರತಿ ವರ್ಷ ಕಾಡು ಪ್ರಾಣಿಗಳಾದ ಕಾಡಾನೆಗಳು, ಕಾಡುಹಂದಿ, ಮತ್ತು ಜಿಂಕೆಗಳು ಸೇರಿದಂತೆ ಇನ್ನಿತರೆ ಸಸ್ಯಹಾರಿ ಪ್ರಾಣಿಗಳು ನಾಶಗೊಳಿಸುತ್ತಲೇ ಬಂದಿವೆ. ಈ ಬಗ್ಗೆ ಸಂಬಂಧಪಟ್ಟಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತಾ ಗಮನಹರಿಸಿ ನಷ್ಟದ ಸುಳಿಯಲ್ಲಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಸಕಾಲದಲ್ಲಿ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಸೋಲಾರ್ ಬೇಲಿ ನಾಶ:
ಅರಣ್ಯ ಇಲಾಖೆ ವತಿಯಿಂದ ಕಾಡಂಚಿನಲ್ಲಿ ಸೋಲಾರ್ ಬೇಲಿಗಳನ್ನು ನಿರ್ಮಾಣ ಮಾಡಲಾಗಿದ್ದು, ಸೋಲಾರ್ ಬೇಲಿಯ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಸೋಲರ್ ಬೇಲಿ ಹಾಳಾಗಿರುವುದರಿಂದ ಕಾಡು ಪ್ರಾಣಿಗಳು ನೇರವಾಗಿ ರಾತ್ರಿ ವೇಳೆ ಜಮೀನುಗಳಿಗೆ ಲಗ್ಗೆ ಇಟ್ಟು ಫಸಲುಗಳನ್ನು ನಾಶಗೊಳಿಸುತ್ತಿದ್ದರೂ ಈ ಭಾಗದ ಅರಣ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದು, ಕೂಡಲೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಬೆಳೆ ಪರಿಹಾರ ಜೊತೆಗೆ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರವನ್ನು ಸೂಚಿಸಬೇಕೆಂದು ರೈತ ಸಂಘಟನೆ ಸೂಚಿಸಿದೆ.
ಕೊಡಗಿನಲ್ಲಿ ಚುಮು ಚುಮು ಚಳಿ, 10 ಗಂಟೆಯಾದ್ರೂ ಬಿಸಿಲೇ ಬರಲ್ಲ..!
ಮಹದೇಶ್ವರ ಬೆಟ್ಟವ್ಯಾಪ್ತಿಯ ಕಾಡುಹೊಲ ಕಾಡಂಚಿನ ಗ್ರಾಮದಲ್ಲಿ ಸೋಲಾರ್ ಬೇಲಿಯನ್ನು ದುರಸ್ತಿಗೊಳಿಸಿ ಕಾಡು ಪ್ರಾಣಿಗಳು ಬಾರದಂತೆ ಕ್ರಮವಹಿಸಲಾಗುವುದು. ಜೊತೆಗೆ ರೈತರ ಜಮೀನಿನಲ್ಲಿ ಫಸಲು ನಾಶಗೊಂಡಿರುವ ಬಗ್ಗೆ ವಲಯ ಅರಣ್ಯಾಧಿಕಾರಿಗಳನ್ನು ಕಳುಹಿಸಿ ನಷ್ಟದ ಅಂದಾಜು ಪಟ್ಟಿತಯಾರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಡಿಎಫ್ಒ ಏಡುಕುಂಡಲು ಹೇಳಿದ್ದಾರೆ.
ಆರೋಗ್ಯ ಕೇಂದ್ರ ಬಂದ್: ತಮಿಳುನಾಡಿಗೆ ಅಲೆಯುತ್ತಿದ್ದಾರೆ ರೋಗಿಗಳು..!