Asianet Suvarna News Asianet Suvarna News

Tumakuru: ಕೆರೆಗಳ ನಿರ್ವಹಣೆಗೆ ಗ್ರಾಪಂಗಳಲ್ಲಿ ಅನುದಾನ ಲಭ್ಯವಿಲ್ಲ

ಗ್ರಾಪಂ ಕೆರೆಗಳ ಅಭಿವೃದ್ಧಿ ಮತ್ತು ಪುನಶ್ಚೇತಕ್ಕೆ ರಾಜ್ಯ ಸರ್ಕಾರದ ಬಳಿ ಅನುದಾನ ಲಭ್ಯವಿಲ್ಲ. ಮಳೆರಾಯನ ಕೃಪೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿಬಿದ್ದಿವೆ. ಜಿಪಂ ಮತ್ತು ಗ್ರಾಪಂಗಳ ನಿರ್ವಹಣೆ ಕೊರತೆಯಿಂದ 82 ಕೆರೆಗಳ ಅಭಿವೃದ್ಧಿಯೇ ಮರೀಚಿಕೆಯಾಗಿ ನೀರಾವರಿ ಕೆಲಸಕ್ಕೆ ಸಂಕಷ್ಟ ಎದುರಾಗಿದೆ.

Grants are not available in Gram Panchayats for maintenance of lakes at tumakuru gvd
Author
First Published Aug 29, 2022, 9:25 PM IST

ಎಚ್‌.ಎನ್‌.ನಾಗರಾಜು

ಹೊಳವನಹಳ್ಳಿ (ಆ.29): ಗ್ರಾಪಂ ಕೆರೆಗಳ ಅಭಿವೃದ್ಧಿ ಮತ್ತು ಪುನಶ್ಚೇತಕ್ಕೆ ರಾಜ್ಯ ಸರ್ಕಾರದ ಬಳಿ ಅನುದಾನ ಲಭ್ಯವಿಲ್ಲ. ಮಳೆರಾಯನ ಕೃಪೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿಬಿದ್ದಿವೆ. ಜಿಪಂ ಮತ್ತು ಗ್ರಾಪಂಗಳ ನಿರ್ವಹಣೆ ಕೊರತೆಯಿಂದ 82 ಕೆರೆಗಳ ಅಭಿವೃದ್ಧಿಯೇ ಮರೀಚಿಕೆಯಾಗಿ ನೀರಾವರಿ ಕೆಲಸಕ್ಕೆ ಸಂಕಷ್ಟ ಎದುರಾಗಿದೆ.

ಕೊರಟಗೆರೆ ತಾಲೂಕಿನ 24 ಗ್ರಾಪಂ ವ್ಯಾಪ್ತಿಯಲ್ಲಿ 40 ಹೇಕ್ಟರ್‌ಗಿಂತ ಕಡಿಮೆ ಅಚ್ಚುಕಟ್ಟು ಪ್ರದೇಶವುಳ್ಳ 82 ಕೆರೆಗಳಿವೆ. ಈ ಕೆರೆಗಳ ನಿರ್ವಹಣೆ ಮತ್ತು ಅಭಿವೃದ್ಧಿಯು ಕಳೆದ 40 ವರ್ಷಗಳಿಂದ ಸಂಪೂರ್ಣ ಮರೀಚಿಕೆ ಆಗಿದೆ. ಕೊರಟಗೆರೆ ಜಿಪಂ ಮತ್ತು 24 ಗ್ರಾಪಂಗಳ ನಿರ್ವಹಣೆ ಕೊರತೆಯಿಂದ ನರೇಗಾ ಯೋಜನೆಯಡಿ ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಆಗದೇ ಕೆರೆಗಳಿಗೂ ಸಂಕಷ್ಟಎದುರಾಗಿದೆ.

ಗ್ರಾಪಂಗಳಿಗೆ 28,345 ಕೆರೆಗಳ ಹಸ್ತಾಂತರ: ಕರ್ನಾಟಕ ರಾಜ್ಯದಲ್ಲಿ 40 ಹೆಕ್ಟೇರ್‌ಗಿಂತ ಕಡಿಮೆ ಅಚ್ಚುಕಟ್ಟು ಪ್ರದೇಶವುಳ್ಳ ಜಿಪಂ ವ್ಯಾಪ್ತಿಯ ಸುಮಾರು 28,345 ಕೆರೆಗಳಿವೆ. ಅನುದಾನದ ಸಂಪನ್ಮೂಲದ ಕೊರತೆಯಿಂದ ಜಿಪಂ ಅಷ್ಟುಕೆರೆಗಳನ್ನು ಗ್ರಾಪಂಯ ಕೆರೆಗಳೆಂದು ನಾಮಕರಣ ಮಾಡಿದೆ. ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ನರೇಗಾ ಯೋಜನೆಯಡಿ ಅನುದಾನ ಬಳಕೆಗೆ ರಾಜ್ಯ ಸರ್ಕಾರ 2020ರಲ್ಲೇ ಆದೇಶ ಮಾಡಿದೆ. ಕೆರೆಗಳ ಅಭಿವೃದ್ಧಿ ನಿರ್ವಹಣೆಗೆ ನರೇಗಾ ಅನುದಾನ ಬಳಕೆಗೆ ಕಳೆದ 2 ವರ್ಷದಿಂದ ಗ್ರಾಪಂಗಳು ವಿಫಲವಾಗಿವೆ.

ಮೈತ್ರಿ ಸರ್ಕಾರದಲ್ಲಿ ಕಮಿಷನ್‌ ನನ್ನ ಗಮನಕ್ಕೆ ಬಂದಿಲ್ಲ: ಪರಮೇಶ್ವರ್‌

24 ಗ್ರಾಪಂನ 20 ಕೆರೆಗಳಿಗೆ ಸಂಕಷ್ಟ: ತುಂಬಾಡಿ ಗ್ರಾಮದ ಹಳೇಕೆರೆ, ಮುಸುವಿನಕಲ್ಲು ಗ್ರಾಮದ ಮುತ್ತುಕದ ಕೆರೆ, ತೋವಿನಕೆರೆ ಗ್ರಾಮದ ಗಾಣಿಗುಂಟೆ ಕೆರೆ, ಅರಸಾಪುರ ಕೆರೆ, ತುಂಬಾಡಿ ಗ್ರಾಪಂಯ ಗೌರಗಾನಹಳ್ಳಿ ಕೆರೆ, ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಕೆರೆ, ಕ್ಯಾಮೇನಹಳ್ಳಿ ಗ್ರಾಪಂಯ ಬೀದಲೋಟಿ ಕೆರೆ, ಹೊಳವನಹಳ್ಳಿಯ ನಾಗರಕೆರೆ ಸೇರಿದಂತೆ 20ಕ್ಕೂ ಅ​ಧಿಕ ಕೆರೆಗಳು ಅಪಾಯದ ಸ್ಥಿತಿಯಲ್ಲಿದೆ. ಕೆರೆಗಳ ಅಭಿವೃದ್ಧಿಗೆ ತುರ್ತಾಗಿ ಅನುದಾನ ಬೇಕಿದೆ.

82 ಕೆರೆಗಳ ಕೋಡಿ-ತೂಬು ಶಿಥಿಲ: ಕೊರಟಗೆರೆ ತಾಲೂಕಿನ 24 ಗ್ರಾಪಂಯ 82 ಕೆರೆಗಳ ಕೋಡಿ, ತೂಬು ಮತ್ತು ಏರಿ ಶಿಥಿಲವಾಗಿದೆ. ಕೆರೆಗಳ ಮೇಲೆ ಜಾಲಿ ಮತ್ತು ಜಂಗಲ್‌ ಗಿಡಗಳು ಬೆಳೆದು ಏರಿಗಳು ಬಿರುಕುಬಿಟ್ಟು ಕೆರೆಗಳ ಗುರುತಿಸುವುದೇ ಕಷ್ಟಸಾಧ್ಯ ಆಗಿದೆ. 20 ವರ್ಷಗಳಿಂದ ಮಳೆಯಿಲ್ಲದ ಅಭಿವೃದ್ಧಿ ಮತ್ತು ಪುನಶ್ಚೇತನ ಮರೀಚಿಕೆಯಾದ ಪರಿಣಾಮ ಶೇಕಡಾ ಅರ್ಧದಷ್ಟು ಕೆರೆಗಳು ಒತ್ತುವರಿಯಾಗಿ ಗ್ರಾಪಂಯ ಅ​ಧಿಕಾರಿಗಳಿಗೆ ಪ್ರಾಣಸಂಕಟ ಎದುರಾಗಿದೆ.

ಮಳೆರಾಯನ ಕೃಪೆಯಿಂದ 25 ವರ್ಷದ ನಂತರ ಗಾಣಿಗುಂಟೆ ಕೆರೆಯು ತುಂಬಿದೆ. ಜಿಪಂ ಮತ್ತು ಗ್ರಾಪಂ ಅ​ಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಯು ಶಿಥಿಲವಾಗಿದೆ. ನಮ್ಮ ಕೆರೆಯಲ್ಲಿ ಜಾಲಿಗಿಡ ಬೆಳೆದು ಕೆರೆಯ ಏರಿಯಲ್ಲಿ ಹತ್ತಾರು ಕಡೆಯಲ್ಲಿ ರಂಧ್ರಗಳು ಬಿದ್ದಿವೆ. ಸರ್ಕಾರ ಮತ್ತು ಸ್ಥಳೀಯ ಶಾಸಕರು ತಕ್ಷಣ ನಮ್ಮ ಕೆರೆಯನ್ನು ರಕ್ಷಣೆ ಮಾಡಬೇಕಿದೆ.
-ರಮೇಶ್‌ ಸ್ಥಳೀಯ ರೈತ, ತೋವಿನಕೆರೆ.

70 ವರ್ಷದ ಪುರಾತನ ಮುತ್ತುಕದ ಕೆರೆಯು 40 ಹೇಕ್ಟರ್‌ ವಿಸ್ತೀರ್ಣವಿದೆ. ಕೆರೆಯ ಅಭಿವೃದ್ಧಿ ಮತ್ತು ಪುನಶ್ಚೇತನ ಇಲ್ಲದೇ ದಶಕಗಳೇ ಕಳೆದಿವೆ. ಕೆರೆಯ ತೂೕಬು ಮತ್ತು ಏರಿ ಶಿಥಿಲವಾಗಿ ಕೆರೆಯ ನೀರು ವ್ಯರ್ಥವಾಗಿ ರೈತರ ಜಮೀನಿಗೆ ಹರಿಯುತ್ತಿದೆ. ಕೆರೆಯನ್ನು ರಕ್ಷಣೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕಿದೆ.
-ನರಸಿಂಹರಾಜು ಸ್ಥಳೀಯ ರೈತ, ಕಾಮೇನಹಳ್ಳಿ.

ಸೂಲಗಿತ್ತಿ ನರಸಮ್ಮನವರ ಸಾಧನೆ ಶ್ಲಾಘನೀಯ: ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ

ಕೆರೆಗಳ ಪುನಶ್ಚೇತನ ಮತ್ತು ನಿರ್ವಹಣೆಗೆ ಗ್ರಾಪಂಗಳಲ್ಲಿ ಅನುದಾನ ಲಭ್ಯವಿಲ್ಲ. ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡದೇ ಗ್ರಾಪಂಗಳಿಗೆ ಹಸ್ತಾಂತರ ಮಾಡಿರುವ ಸರ್ಕಾರದ ಆದೇಶವೇ ಅವೈಜ್ಞಾನಿಕ. ಕೊರಟಗೆರೆ ಕ್ಷೇತ್ರದ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಾನು ಈಗಾಗಲೇ ಪತ್ರ ಬರೆದಿದ್ದೇನೆ.
-ಡಾ.ಜಿ.ಪರಮೇಶ್ವರ್‌ ಶಾಸಕ, ಕೊರಟಗೆರೆ

Follow Us:
Download App:
  • android
  • ios