‘ನಾನಲ್ಲ, ನನ್ನ ಡೆಡ್ ಬಾಡಿ ಕೂಡ ಬಿಜೆಪಿಗೆ ಹೋಗಲ್ಲ’
ಚುನಾವಣೆಯಲ್ಲಿ ಸೋತ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿರುವ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಬಿಜೆಪಿ ಸೇರುತ್ತಾರೆ ಎಂಬ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಹಾಗಾದರೆ ಮಹದೇವಪ್ಪ ಏನು ಹೇಳಿದರು? ನೋಡಿಕೊಂಡು ಬನ್ನಿ...
ಮೈಸೂರು[ಜು.12] ‘ನನ್ನ ಡೆಡ್ ಬಾಡಿಕೂಡ ಬಿಜೆಪಿಗೆ ಹೋಗುವುದಿಲ್ಲ. ಚುನಾವಣೆ ಸೋತ ನಂತರ ನಾನು ದಿಗ್ಭ್ರಮೆಗೆ ಒಳಗಾಗಿದ್ದೆ’ ಹೀಗೆಂದು ಹೇಳಿದ್ದು ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಪ್ರಭಾವಿ ಸಚಿವ ಎಂದು ಗುರುತಿಸಿಕೊಂಡಿದ್ದ ಎಚ್.ಸಿ.ಮಹದೇವಪ್ಪ.
ಎಚ್.ಸಿ.ಮಹದೇವಪ್ಪ ಬಿಜೆಪಿ ಕಡೆ ಹೊರಟಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಉತ್ತರ ಮತ್ತು ಪ್ರತಿಕ್ರಿಯೆ ನೀಡಿರುವ ಮಹದೇವಪ್ಪ, ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದಿರುವವರು ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿಯೇ ಮಾತನಾಡುತ್ತೇನೆ ಎಂದಿದ್ದಾರೆ.
ಚುನಾವಣೆ ಸೋಲಿನ ನಂತರ ದಿಗ್ಭ್ರಮೆಗೊಳಗಾಗಿದ್ದೆ. ಸೋಲಿನಿಂದ ಆಚೆ ಬರಲು ಒಂದೂವರೆ ತಿಂಗಳು ಬೇಕಾಯಿತು. ಕೆಲ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸಿಕೊಳ್ಳಲು ಒಂದೂವರೆ ತಿಂಗಳಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದೆ. ಈ ಕಾರಣದಿಂದ ಸಭೆ ಸಮಾರಂಭದಲ್ಲಿ ಭಾಗಿಯಾಗಿರಲಿಲ್ಲ. ಆದರೆ ಇದನ್ನೇ ಕೆಲವರು ತಪ್ಪು ಅರ್ಥದಲ್ಲಿ ಭಾವಿಸಿದ್ದಾರೆ ಎಂದು ಮಹದೇವಪ್ಪ ಹೇಳಿದರು.