Asianet Suvarna News Asianet Suvarna News

Chikkaballapura ; ಬೆಂಬಲ ಬೆಲೆ: ನೋಂದಣಿ ಆಗದೇ ರೈತರ ಪರದಾಟ

ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ, ಭತ್ತ ಮಾರಾಟ ಮಾಡಲು ನೋಂದಣಿ ಕೇಂದ್ರಗಳಿಗೆ ಹೆಸರು ನೊಂದಣಿಗಾಗಿ ತೆರಳಿದ ಅನ್ನದಾತರಿಗೆ ನಿರಾಸೆ ಎದುರಾಗಿ ನೊಂದಣಿಗಾಗಿ ಪರದಾಡುವಂತಾಯಿತು.

Farmers Suffers for Supporting Price Registration snr
Author
First Published Dec 17, 2022, 6:35 AM IST

  ಚಿಕ್ಕಬಳ್ಳಾಪುರ (ಡಿ. 17): ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ, ಭತ್ತ ಮಾರಾಟ ಮಾಡಲು ನೋಂದಣಿ ಕೇಂದ್ರಗಳಿಗೆ ಹೆಸರು ನೊಂದಣಿಗಾಗಿ ತೆರಳಿದ ಅನ್ನದಾತರಿಗೆ ನಿರಾಸೆ ಎದುರಾಗಿ ನೊಂದಣಿಗಾಗಿ ಪರದಾಡುವಂತಾಯಿತು.

ಹೌದು, ಡಿ.15 ರಿಂದಲೇ ಬೆಂಬಲ ಬೆಲೆ (Supporting Price)  ಯೋಜನೆಯಡಿ ರಾಗಿ, ಭತ್ತ (Paddy) , ಜೋಳ ಮಾರಾಟಕ್ಕೆ ರೈತರು ನೋಂದಣಿ ಮಾಡಿಕೊಳ್ಳಬಹುದೆಂದು ಜಿಲ್ಲಾಡಳಿತ ಪ್ರಕಟಿಸಿದರೂ ಗುರುವಾರ ಜಿಲ್ಲೆಯ ಬಹುತೇಕ ನೋಂದಣಿ ಕೇಂದ್ರಗಳಲ್ಲಿ ರೈತರ ನೊಂದಣಿಗೆ ವಿವಿಧ ವಿಘ್ನಗಳು ಎದುರಾಗಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಬಂದ ರೈತರು ಬರಿಗೈಯಲ್ಲಿ ಹಿಂತಿರುಗಿದರು.

ನೂರೆಂಟು ಸಮಸ್ಯೆ ಹೇಳಿದ ಅಧಿಕಾರಿ

ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಜೋಳ ಮಾರಾಟಕ್ಕೆ ರೈತರ ನೋಂದಣಿಗಾಗಿ ಜಿಲ್ಲಾ ಕೇಂದ್ರದ ಎಪಿಎಂಸಿ ಆವರಣದಲ್ಲಿ ತೆರೆದಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಕಚೇರಿ ಗುರುವಾರ ಬೀಕೋ ಎನ್ನುವಂತಿತ್ತು. ನೋಂದಣಿಗಾಗಿ ಬಂದ ರೈತರು ವಾಪಸ್‌ ಹೋದರು. ಕಚೇರಿಯಲ್ಲಿ ಸೂಕ್ತ ಸಿಬ್ಬಂದಿ ಕೊರತೆ ಇದೆ. ಕಂಪ್ಯೂಟರ್‌ ಸಮಸ್ಯೆ ಇದೆ. ಸಾಪ್‌್ಟವರ್‌ ಅಪ್‌ಡೇಟ್‌ ಆಗಬೇಕು, ಕೋಡ್‌, ಪಾಸ್‌ವರ್ಡ್‌ ಕ್ರಿಯೆಟ್‌ ಆಗಬೇಕೆಂದು ಹೇಳಿ ರೈತರನ್ನು ವಾಪಸ್ಸು ಕಳುಹಿಸಿದ್ದಾರೆ. ರೈತರ ನೊಂದಣಿ ಕಾರ್ಯ ಸಮರ್ಪಕವಾಗಿ ಸರಿ ಹೋಗಬೇಕಾದರೆ ಇನ್ನೂ ಒಂದರೆಡು ದಿನ ಕಾಯಬೇಕಾಗುತ್ತದೆಯೆಂದು ಜಿಲ್ಲೆಯಲ್ಲಿ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಜೋಳ ಸಂಗ್ರಹಣೆಗಾಗಿ ಸರ್ಕಾರದಿಂದ ನೇಮಕವಾಗಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಧಿಕಾರಿಯೊಬ್ಬರು ಕನ್ನಡಪ್ರಭಗೆ ತಿಳಿಸಿದರು.

ಜಿಲ್ಲೆಯಲ್ಲಿ ಎಂಎಸ್‌ಪಿ ನೊಂದಣಿಗಾಗಿ ಬಾಗೇಪಲ್ಲಿ ಪಟ್ಟಣದಲ್ಲಿ ಟಿಬಿ ಕ್ರಾಸ್‌ನಲ್ಲಿ ಎಪಿಎಂಸಿ ಪ್ರಾಂಗಣ, ಚಿಕ್ಕಬಳ್ಳಾಪುರ ಎಪಿಎಂಸಿ ಪ್ರಾಂಗಣ, ಚಿಂತಾಮಣಿ ತಾಲೂಕಿನ ಕಾಗತಿ ಬಳಿ ಇರುವ ಎಸ್‌ಡ್ಲ್ಯೂಸಿ ಸಗಟು ಮಳಿಗೆ, ಗೌರಿಬಿದನೂರು ಎಪಿಎಂಸಿ ಪ್ರಾಂಗಣ, ಗುಡಿಬಂಡೆಯಲ್ಲಿ ಪಡಿತರ ಸಗಟು ಮಳಿಗೆ, ಶಿಡ್ಲಘಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅವಕಾಶ ಕಲ್ಪಿಸಿತ್ತಾದರೂ ಮೊದಲ ದಿನವೇ ಸಿಬ್ಬಂದಿ ಕೊರತೆ, ಕಂಪ್ಯೂಟರ್‌ ಹಾಗೂ ಸಾಪ್‌್ಟವೇರ್‌ ಸಮಸ್ಯೆಯಿಂದ ರೈತರ ನೊಂದಣಿ ಆಗದೇ ರೈತರು ನೊಂದಣಿ ಕೇಂದ್ರಗಳಿಗೆ ಆಗಮಿಸಿ ವಾಪಸ್‌ ಹೋಗಿದ್ದಾರೆ.

ರೈತರಲ್ಲಿ ಆತಂಕ ತಂದ ಗರಿಷ್ಠ ಮಿತಿ

ಸಣ್ಣ, ಅತಿ ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್‌ ಅಷ್ಟುಮಾತ್ರ ರಾಗಿ ಹಾಗೂ ಜೋಳ ಖರೀದಿಸಬೇಕೆಂದು ಸರ್ಕಾರ ಕಡ್ಡಾಯವಾಗಿ ಸೂಚಿಸಿರುವುದು ಸಾಕಷ್ಟುಅನ್ನದಾತರನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಮೊದಲ ದಿನವೇ ಧಾವಂತದಲ್ಲಿ ರೈತರು ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆಂದು ಹೆಸರು ನೊಂದಣಿಗಾಗಿ ಆಗಮಿಸಿದರೂ ಸಾಧ್ಯವಾಗದೇ ವಾಪಸ್ಸು ತೆರಳಬೇಕಾಯಿತು.

ಎಣ್ಣೆ ಕಾಳಿಗೆ ಬೆಂಬಲ ಬೆಲೆಗೆ ಶಿಫಾರಸು

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಡಿ.08): ರಾಜ್ಯದಲ್ಲಿ ಎಣ್ಣೆಕಾಳು ಬೆಳೆಗೆ ವಿಪುಲ ಅವಕಾಶವಿರುವ ಹಿನ್ನೆಲೆಯಲ್ಲಿ ಕೃಷಿ ವಿವಿಗಳು ಹೆಚ್ಚು ಇಳುವರಿ ನೀಡುವ ಹೊಸ ತಳಿಗಳನ್ನು ಸಂಶೋಧಿಸಬೇಕು. ನವೀಕೃತ ತಂತ್ರಜ್ಞಾನ ಬಳಕೆಗೆ ಸರ್ಕಾರ ಪ್ರೋತ್ಸಾಹ ಹಾಗೂ ಸಹಾಯಧನ ನೀಡಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗ ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಎಣ್ಣೆಕಾಳು ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಬೆಳೆಗಾರರಿಗೆ ಕಡಿಮೆ ಬಡ್ಡಿದರ ಅಥವಾ ಬಡ್ಡಿ ರಹಿತವಾಗಿ ಸಾಲ ನೀಡಬೇಕು. ಬೆಳೆ ವಿಮೆ ಕಡ್ಡಾಯ ಮಾಡಬೇಕು. ಸೆಕೆಂಡರಿ ಅಗ್ರಿಕಲ್ಚರಲ್‌ ನಿರ್ದೇಶನಾಲಯ ಎಣ್ಣೆ ಕಾಳು ಬೆಳೆಗೆ ಆದ್ಯತೆ ಕೊಡಬೇಕು. 

ಬೆಳೆ ಪ್ರದೇಶ ಹೆಚ್ಚಳ, ಸಂಸ್ಕರಣೆಗೆ ಒತ್ತು ನೀಡಬೇಕು ಎಂಬುದು ಸೇರಿದಂತೆ ಹಲವು ಶಿಫಾರಸುಗಳ ವರದಿಯನ್ನು ಕೃಷಿ ಬೆಲೆ ಆಯೋಗ ಸಿದ್ಧಪಡಿಸಿದ್ದು, ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಣ್ಣೆಕಾಳು ಬೆಳೆಯುವ ಪ್ರದೇಶ ಹಾಗೂ ಇಳುವರಿ ಸಹ ಕಡಿಮೆಯಾಗುತ್ತಿದೆ. 2021-22ನೇ ಸಾಲಿನಲ್ಲಿ 12.47 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆ ಕಾಳು ಬೆಳೆದಿದ್ದರೂ ಇಳುವರಿ ಮಾತ್ರ 11.74 ಲಕ್ಷ ಟನ್‌ಗೆ ಕುಸಿದಿದೆ. ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತಿತರ ರಾಜ್ಯಗಳ ಇಳುವರಿಗೆ ಹೋಲಿಸಿದರೆ ರಾಜ್ಯದ ಇಳುವರಿ ಬಹಳ ಕಡಿಮೆ ಇದೆ. 

Maharashtra Karnataka Border Row: ಬಸ್‌, ಬ್ಯಾಂಕಿಗೆ ಮಸಿ: ಮಹಾ ಪುಂಡಾಟಿಕೆ!

ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ತಾಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ಆದರೆ ರಾಜ್ಯದಲ್ಲಿ ತಾಳೆ ಬೆಳೆಯಲು ಅಷ್ಟೇನೂ ಪೂರಕ ವಾತಾವರಣ ಇಲ್ಲದಿರುವುದರಿಂದ ಯೋಜನೆಗೆ ನಮ್ಮಲ್ಲಿ ಒಂದಷ್ಟು ಹಿನ್ನಡೆಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಸೋಯಾ ಅವರೆ ಬೆಳೆಯುತ್ತಿದ್ದರೆ, ನಂತರದ ಸ್ಥಾನದಲ್ಲಿ ನೆಲಗಡಲೆ ಮತ್ತು ಸಾಸಿವೆ ಇವೆ. ಇನ್ನುಳಿದಂತೆ ಹರಳು, ಎಳ್ಳು, ಹುಚ್ಚೆಳ್ಳು, ಅಗಸೆ, ಕುಸುವೆ ಮತ್ತಿತರ ಬೆಳೆಗಳನ್ನೂ ಬೆಳೆಯಲಾಗುತ್ತಿದೆ. ದೇಶದಲ್ಲಿ ಒಟ್ಟಾರೆ 288 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆಕಾಳುಗಳನ್ನು ಬೆಳೆಯುತ್ತಿದ್ದು, ಮಧ್ಯಪ್ರದೇಶ ಪ್ರಥಮ ಸ್ಥಾನದಲ್ಲಿದ್ದರೆ, ರಾಜಸ್ಥಾನ ದ್ವಿತೀಯ ಸ್ಥಾನದಲ್ಲಿದೆ.

ವರ್ಷ ರಾಜ್ಯದ ಎಣ್ಣೆ ಕಾಳು ಬೆಳೆಗಳ ವಿವರ
ವಿಸ್ತೀರ್ಣ(ಲಕ್ಷ ಹೆಕ್ಟೇರ್‌) ಉತ್ಪಾದನೆ(ಲಕ್ಷ ಟನ್‌)

2005-06 28.63 15.27
2009-10 20.01 9.00
2014-15 13.72 9.58
2018-19 9.98 7.90
2020-21 12.09 12.49
2021-22 12.47 11.74

ಸರ್ಕಾರಕ್ಕೆ ಕೃಷಿ ಬೆಲೆ ಆಯೋಗದ ಶಿಫಾರಸು
- ಎಣ್ಣೆಕಾಳಿಗೆ ಬೆಂಬಲ ಬೆಲೆ, ಪ್ರೋತ್ಸಾಹ ಧನ ಹೆಚ್ಚಿಸಬೇಕು
- ಬೆಳೆಗಾರರಿಗೆ ಕಡಿಮೆ ಬಡ್ಡಿದರ ಅಥವಾ ಬಡ್ಡಿ ರಹಿತ ಸಾಲ ನೀಡಬೇಕು
- ಎಣ್ಣೆಕಾಳು ಬೆಳೆಗಳಿಗೆ ಬೆಳೆ ವಿಮೆ ಕಡ್ಡಾಯ ಮಾಡಬೇಕು
- ಸೆಕೆಂಡರಿ ಅಗ್ರಿಕಲ್ಚರಲ್‌ ನಿರ್ದೇಶನಾಲಯ ಎಣ್ಣೆ ಕಾಳು ಬೆಳೆಗೆ ಆದ್ಯತೆ ಕೊಡಬೇಕು
- ಎಣ್ಣೆಕಾಳು ಬೆಳೆ ಪ್ರದೇಶ ಹೆಚ್ಚಳ, ಸಂಸ್ಕರಣೆಗೆ ಒತ್ತು ನೀಡಬೇಕು

Follow Us:
Download App:
  • android
  • ios