Asianet Suvarna News Asianet Suvarna News

ಮತ್ತೆ ಬಿಜೆಪಿಗೆ ರಾಜು ಕಾಗೆ ಕರೆತರುವೆ: ಡಿಸಿಎಂ ಲಕ್ಷ್ಮಣ ಸವದಿ

ಪಿಕೆಪಿಎಸ್‌ ಶತಮಾನೋತ್ಸವದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಬಹಿರಂಗ ಹೇಳಿಕೆ| ಮೂರೂವರೆ ವರ್ಷಗಳ ನಂತರವೂ ಕಾಗವಾಡದಲ್ಲಿ ಶ್ರೀಮಂತ ಪಾಟೀಲ ಇರುತ್ತಾರೆ| ಅಥಣಿಯಲ್ಲಿ ಮಹೇಶ ಕುಮಟಳ್ಳಿ ಇರುತ್ತಾರೆ| ಸುಮಾರು ಮೂರ್ನಾಲ್ಕು ಚುನಾವಣೆ ನಡೆಸಿರುವ ಕಾಗೆ ಮತ್ತು ಸವದಿ, ಒಬ್ಬರಿಗೊಬ್ಬರು ಪರಸ್ಪರ ಸಹಕಾರ ನೀಡುತ್ತಾ ಗೆಲ್ಲುತ್ತಿದ್ದರು|

DCM Laxman Savadi Talks Over Raju Kage
Author
Bengaluru, First Published Dec 9, 2019, 9:18 AM IST

ಕಾಗವಾಡ(ಡಿ.09): ಬಿಜೆಪಿ ಟಿಕೆಟ್‌ ನಿರಾಕರಿಸಿದ ಕಾರಣ ಕಾಂಗ್ರೆಸ್‌ಗೆ ಹೋಗಿರುವ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಅವರನ್ನು ಮತ್ತೆ ಬಿಜೆಪಿಗೆ ಕರೆತರುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.

ಕಾಗವಾಡದಲ್ಲಿ ಭಾನುವಾರ ನಡೆದ ಪಿಕೆಪಿಎಸ್‌ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಇನ್ನು ಮೂರೂವರೆ ವರ್ಷಗಳ ನಂತರವೂ ಕಾಗವಾಡದಲ್ಲಿ ಶ್ರೀಮಂತ ಪಾಟೀಲ ಇರುತ್ತಾರೆ. ಅಥಣಿಯಲ್ಲಿ ಮಹೇಶ ಕುಮಟಳ್ಳಿ ಇರುತ್ತಾರೆ ಎಂದು ಹೇಳುವ ಮೂಲಕ ತಾನು ಕ್ಷೇತ್ರವನ್ನು ಕಳೆದುಕೊಂಡಿರುವ ಬಗ್ಗೆ ಇದೇ ಸಂದರ್ಭದಲ್ಲಿ ಸೂಕ್ಷ್ಮವಾಗಿ ಪ್ರಸ್ತಾಪಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾವಿಬ್ಬರೂ ಜೋಡೆತ್ತು ಇದ್ದಂತೆ. ಜೋಡೆತ್ತುಗಳು ಅಗಲಬಾರದು ಎನ್ನುವ ಮೂಲಕ ಇನ್ನು ಮೂರೂವರೆ ವರ್ಷಗಳ ಬಳಿಕ ನಿನಗೊಂದು ಬೇರೆ ಜಾಗ ಹುಡುಕುತ್ತೇನೆ. ಆಗ ಮತ್ತೆ ಪಕ್ಷಕ್ಕೆ ಮರಳಿ ಕರೆದುಕೊಂಡು ಬರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ಕಪಕ್ಕದ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಿಂದ ಒಂದೇ ಪಕ್ಷದಿಂದ ಸುಮಾರು ಮೂರ್ನಾಲ್ಕು ಚುನಾವಣೆ ನಡೆಸಿರುವ ಕಾಗೆ ಮತ್ತು ಸವದಿ, ಒಬ್ಬರಿಗೊಬ್ಬರು ಪರಸ್ಪರ ಸಹಕಾರ ನೀಡುತ್ತಾ ಗೆಲ್ಲುತ್ತಿದ್ದರು. ಇಬ್ಬರಿಗೂ ಒಬ್ಬರಿಗೊಬ್ಬರ ಕ್ಷೇತ್ರದಲ್ಲಿನ ಕೆಲವು ಗ್ರಾಮಗಳಲ್ಲಿ ಪ್ರಭಾವ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರೂ ಸೋತಿದ್ದು, ಅಲ್ಲಿ ಇಬ್ಬರಿಗೂ ಪ್ರತಿಸ್ಪರ್ಧಿಯಾಗಿದ್ದ ಅಭ್ಯರ್ಥಿಗಳೇ ಇಂದು ಬಿಜೆಪಿ ಸೇರಿಕೊಂಡಿದ್ದಾರೆ.

ಕುಮಟಳಿಯೊಂದಿಗೆ ಸವದಿ ರಾಜಿ:

ಬಿಜೆಪಿಯು ತಮ್ಮ ರಾಜಕೀಯ ಪ್ರತಿಸ್ಪರ್ಧಿಗೆ ಟಿಕೆಟ್‌ ನೀಡಿದ್ದರಿಂದ ಬಂಡಾಯ ಇದ್ದಿದ್ದಕ್ಕಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಇನ್ನೊಂದೆಡೆ ಸೋತವನನ್ನು ಉಪಮುಖ್ಯಮಂತ್ರಿ ಮಾಡಿದ್ದಕ್ಕೆ ಲಕ್ಷ್ಮಣ ಸವದಿ ಬಿಜೆಪಿಯಲ್ಲಿಯೇ ಉಳಿದುಕೊಂಡಿದ್ದು, ತಮ್ಮ ರಾಜಕೀಯ ಎದುರಾಳಿ ಮಹೇಶ ಕುಮಠಳ್ಳಿ ಅವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ.

ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ವಿರೋಧ ಮಾಡಬೇಡ:

ಇದೇ ವೇಳೆ ರಾಜು ಕಾಗೆ ಅವರೊಂದಿಗಿನ ತಮ್ಮ ಹಳೆಯ ಸಲುಗೆಯನ್ನು ಬಳಸಿಕೊಂಡು ಮಾತನಾಡಿದ ಸವದಿ, ತನಗೆ ಡಿಸಿಸಿ ಬ್ಯಾಂಕ್‌ ನಲ್ಲಿ ವಿರೋಧ ಮಾಡಬೇಡ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ ಎಂದು ಕೇಳಿಕೊಂಡರು. ಆದರೆ ಸಭೆಯಲ್ಲಿ ಉಪಸ್ಥಿತರಿದ್ದ ರಾಜು ಕಾಗೆ ಎಲ್ಲದಕ್ಕೂ ಮುಗುಳ್ನಗೆ ಮೂಲಕವೇ ಪ್ರತಿಕ್ರಿಯಿಸಿದರು

ಅಥಣಿಯಿಂದ ಕಾಗವಾಡ ಬೇರ್ಪಟ್ಟು ಕಾಗವಾಡ ಈಗ ಹೊಸ ತಾಲೂಕಾಗಿ ರಚನೆಯಾಗಿದೆ. ನಾನು ಮುಂದಿನ ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿ ಬರುತ್ತೇನೆ ಎಂದು ರಾಜು ಕಾಗೆ ಹೇಳಿದಾಗ, ಡಿಸಿಎಂ ಲಕ್ಷ್ಮಣ ಸವದಿಯವರು ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ ನೀನು ಪಿಕೆಪಿಎಸ್‌ನ ಸದಸ್ಯನೂ ಅಲ್ಲ, ಸಾಲಗಾರರನೂ ಅಲ್ಲ. ನಿನಗೆ ಈ ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ. ಇನ್ನು ಮೂರುವರೆ ವರ್ಷಗಳ ಕಾಲ ನಮ್ಮದೇ ಸರ್ಕಾರ ಇರುತ್ತದೆ. ಅಥಣಿ ಹಾಗೂ ಕಾಗವಾಡದಲ್ಲಿ ನಮ್ಮ ಪಕ್ಷದವರೇ ಶಾಸಕರಾಗಿರುತ್ತಾರೆ. ಬೇಕೆಂದರೆ ಮೂರುವರೆ ವರ್ಷಗಳ ನಂತರ ಮತ್ತೇ ಬಿಜೆಪಿಗೆ ಸ್ವಾಗತಿಸಿಕೊಳ್ಳುತ್ತೇವೆ. ಅಲ್ಲದೆ ನಿನಗಾಗಿ ಒಂದು ವಿಶೇಷ ಸ್ಥಾನಮಾನ ಕೊಡುತ್ತೇವೆ ಎಂದು ಹಾಸ್ಯಚಟಾಕಿ ಹಾರಿಸಿದರು.

ಆಗ ರಾಜು ಕಾಗೆ ಮಧ್ಯೆ ಪ್ರವೇಶಿಸಿ, ಕಳೆದ 20 ವರ್ಷಗಳಿಂದ ಐಸಿರಿ ಉಂಟೆ ಹೊರ ಬಂದಿದ್ದೇನೆ. ನೀವು ಈ ಹಿಂದೆ ಘೊಷಿಸಿದ ಕಾಡಾ ಅಧ್ಯಕ್ಷ ಸ್ಥಾನವಲ್ಲವೇ ಎಂದು ಪ್ರಶ್ನಿಸಿ ಸಾಕಪ್ಪ ನಿಮ್ಮ ಸಹವಾಸ ಎನ್ನುತ್ತ, ಕಾಗವಾಡ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ನನ್ನ ಅಭಿಮಾನಿಗಳು ಅಪ್ಪಿಕೊಂಡಿದ್ದು ಕಾಂಗ್ರಸ್‌ ತ್ಯಜಿಸದಂತೆ ಹೇಳಿದ್ದಾರೆ. ನಾನು ಈ ಉಪಚುನಾವಣೆಯಲ್ಲಿ ನನ್ನನ್ನು ಜನತೆ ಗೆಲ್ಲಿಸುತ್ತಾರೆ. ಹಾಗಾಗಿ ನಿಮ್ಮ ಬಿಜೆಪಿಗೆ ಬರುವ ಪ್ರಶ್ನೆಯೇ ಬರುವುದಿಲ್ಲ ಎಂದು ಮರುತ್ತರ ನೀಡುತ್ತಿದ್ದಂತೆ ನೆರದಿದ್ದ ಜನರು ಈ ಎರಡು ಜೋಡೆತ್ತುಗಳ ಜುಗಲ ಬಂಧಿಯಿಂದ ನಗೆಗಡಲಲ್ಲಿ ತೇಲಿದರು.

Follow Us:
Download App:
  • android
  • ios