ಯೋಗೀಶ ಗೌಡ ಹತ್ಯೆ ಪ್ರಕರಣ: ಇಂಡಿಗೆ ಜೈಲೇ ಗತಿ, ಧಾರವಾಡ ಜೈಲಿಗೆ ಶಿಫ್ಟ್
ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಆರೋಪದ ಅಡಿ ಡಿ.13ರಂದು ವಿಜಯಪುರದಲ್ಲಿ ಇಂಡಿ ವಶಕ್ಕೆ ಪಡೆದಿದ್ದ ಸಿಬಿಐ| ಬಸವರಾಜ ಮುತ್ತಗಿ ಅವರ ಹತ್ಯೆಗೆ ಸುಪಾರಿ|
ಧಾರವಾಡ(ಡಿ.18): ಯೋಗೀಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಕಾಲ ಸಿಬಿಐ ವಿಚಾರಣೆ ಆನಂತರ ವಿನಯ ಕುಲಕರ್ಣಿ ಅವರ ಮಾವ ಚಂದ್ರಶೇಖರ ಇಂಡಿ ಅವರನ್ನು ಡಿ.28ರವರೆಗೆ ನ್ಯಾಯಾಂಗ ಬಂಧನಕ್ಕೆ ಇಲ್ಲಿನ ಸಿಬಿಐನ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಸಿಬಿಎ ವಶದಲ್ಲಿದ್ದ ಅವರನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಆರೋಪದ ಅಡಿ ಡಿ.13ರಂದು ವಿಜಯಪುರದಲ್ಲಿ ಇಂಡಿ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಆನಂತರ ಆರೋಪ ಪಕ್ಕಾ ಆಗುತ್ತಿದ್ದಂತೆ 14ರಂದು ಬಂಧಿಸಲಾಗಿತ್ತು. ಬಳಿಕ ಡಿ.15ರಂದು ನ್ಯಾಯಾಲಯ 2 ದಿನ ಅವರನ್ನು ಹೆಚ್ಚಿನ ವಿಚಾರಣೆಗೆ ಸಿಬಿಐ ವಶಕ್ಕೆ ನೀಡಿತ್ತು. ವಿಚಾರಣೆ ಬಳಿಕ ಗುರುವಾರ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಇಂಡಿಗೆ ಡಿ.28ರವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತು. ಜತೆಗೆ ಡಿ.19ರಂದು ಇಂಡಿ ಅವರ ಕುಟುಂಬದ ಭೇಟಿಗೂ ಅವಕಾಶ ನೀಡಿ ಆದೇಶ ನೀಡಿತು.
ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ತಪ್ಪುಗಳ ಸರಮಾಲೆ: ಇಕ್ಕಟ್ಟಿಗೆ ಸಿಲುಕಿದ ಕುಲಕರ್ಣಿ
ಮುತ್ತಗಿ ನಾವು ಒಂದೇ ಕುಟುಂಬದ ಸದಸ್ಯರಿದ್ದಂತೆ
ಬಸವರಾಜ ಮುತ್ತಗಿ ಅವರ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಮುತ್ತಗಿ ಮತ್ತು ನಾವೆಲ್ಲರೂ ಮೊದಲಿನಿಂದಲೂ ಕುಟುಂಬದ ಸದಸ್ಯರಂತೆ ಇದ್ದೇವೆ ಎಂದು ಜಿಪಂ ಸದಸ್ಯ ಯೋಗೀಶಗೌಡ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐನ ವಿಚಾರಣೆ ಮುಗಿಸಿ ಬಂದ ವಿನಯ ಕುಲಕರ್ಣಿ ಅವರ ಸಹೋದರ ವಿಜಯ ಕುಲಕರ್ಣಿ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಸ್ತೂಲು ಪೂರೈಕೆ ಮಾಡಿರುವ ಆರೋಪ ಹೊತ್ತಿರುವ ವಿನಯ ಅವರ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಎರಡು ದಿನಗಳಿಂದ ವಿಚಾರಣೆ ನಡೆಸುತ್ತಿದ್ದು, ಇದೇ ಸಂದರ್ಭದಲ್ಲಿ ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ವಿಜಯ ಕುಲಕರ್ಣಿ ಸಹ ಸಿಬಿಐನ ವಿಚಾರಣೆಗೆ ಒಳಗಾದರು. ವಿಚಾರಣೆ ಮುಗಿಸಿ ಹೊರ ಬಂದ ಅವರು, ಮುತ್ತಗಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸುದ್ದಿ ಯಾರು ಹಬ್ಬಿಸಿದ್ದಾರೆ ಗೊತ್ತಿಲ್ಲ. ಅದೆಲ್ಲಾ ಸುಳ್ಳು. ನಾವೆಲ್ಲಾ ಒಂದೇ ತಾಟಿನಲ್ಲಿ ಊಟ ಮಾಡಿದ್ದೇವೆ ಎಂದು ಪ್ರತಿಕ್ರಿಯಿಸಿದರು.
ಹಾಗೆಯೇ ಗುರುವಾರ ವಿನಯ ಅವರ ಸಂಬಂಧಿ ನಟರಾಜ್, ಪೊಲೀಸ್ ಅಧಿಕಾರಿ ವರ್ಗದವರ ಜತೆಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ನಿವೃತ್ತ ಡಿವೈಎಸ್ಪಿ ಪುತ್ರ ಕಿರಣ ವೀರನಗೌಡರ ಅವರನ್ನೂ ವಿಚಾರಣೆ ಮಾಡಿ ಮಹತ್ವದ ಮಾಹಿತಿಯನ್ನು ಸಿಬಿಐ ಅಧಿಕಾರಿಗಳು ಸಂಗ್ರಹಿಸಿದರು.