Asianet Suvarna News Asianet Suvarna News

ಪ್ರವೀಣ್ ಹತ್ಯೆಗೆ ಭುಗಿಲೆದ್ದ ಆಕ್ರೋಶ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಲ್ಲಲ್ಲಿ ಭಾರೀ ಪ್ರತಿಭಟನೆ

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ಮಲೆನಾಡಿನಲ್ಲಿ ಆಕ್ರೋಶದ ಕಿಚ್ಚು ಜೋರಾಗಿದೆ. ಮಲೆನಾಡಿನಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ರೆ ಮತ್ತೊಂದಡೆ ಸೂಕ್ತ ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು ಬಂದ್‌ ಕಾವು ಜೋರಾಗಿದೆ.

BJP activist Praveen murder case, bjp activist district wide protest in chikkamagaluru akb
Author
Chikkamagaluru, First Published Jul 28, 2022, 9:07 PM IST

ಚಿಕ್ಕಮಗಳೂರು :ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪ್ರಕರಣ ಮಲೆನಾಡಿನಲ್ಲಿ ಆಕ್ರೋಶದ ಕಿಚ್ಚು ಜೋರಾಗಿದೆ. ಮಲೆನಾಡಿನಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ರೆ ಮತ್ತೊಂದಡೆ ಸೂಕ್ತ ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು ಬಂದ್‌ ಕಾವು ಜೋರಾಗಿದೆ. ಬಿಜೆಪಿ ಯುವ ಮೋರ್ಚಾ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಜಯಪುರ ಪಟ್ಟಣ ಸಂಪೂರ್ಣವಾಗಿ ಬಂದ್ ಆಗಿದ್ದು, ಕೊಪ್ಪದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. 

ಕೊಪ್ಪ ಪಟ್ಟಣ ಬೆಳಗ್ಗೆ 6 ಗಂಟೆಯಿಂದ ಸಂಜೆ 6ವರೆಗೆ ಪೂರ್ಣಪ್ರಮಾಣದಲ್ಲಿ ಸ್ತಬ್ಧಗೊಂಡಿತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಮಾಲೀಕರು ಬಂದ್‌ಗೆ ಸಹಕರಿಸಿದರು. ಹಾಲು, ಔಷಧಿ ಅಂಗಡಿಗಳನ್ನು ಹೊರತು ಪಡಿಸಿದರೆ ಉಳಿದ ಅಂಗಡಿಗಳ ಬಾಗಿಲು ಮುಚ್ಚಲಾಗಿತ್ತು. ಖಾಸಗಿ ವಾಹನಗಳು ಮತ್ತು ಆಟೋ ರಿಕ್ಷಾಗಳು ರಸ್ತೆಗಿಳಿಯಲಿಲ್ಲ, ಬಂದ್ ವಿಷಯ ತಿಳಿಯದವರು ಕೊಪ್ಪ ಪಟ್ಟಣಕ್ಕೆ ಆಗಮಿಸಿದವರು, ಪ್ರಯಾಣಕ್ಕೆ ಪರದಾಡಿದರು. ವಿವಿಧ ವಸ್ತುಗಳನ್ನು ಖರೀದಿಸಲಾಗದೆ ಬಂದ ದಾರಿಗೆ ಸುಂಕವಿಲ್ಲದಂತೆ ಮನೆದಾರಿ ತುಳಿದರು.

ಹತ್ಯೆ ಖಂಡಿಸಿ ಪ್ರತಿಭಟನೆ, ಟೈರ್ ಗೆ ಬೆಂಕಿ 

ಮಂಗಳೂರು ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಕೊಪ್ಪ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ  ನಡೆಸಲಾಯಿತು. ರಸ್ತೆಯಲ್ಲಿ ಟೈರ್‌ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮೆರವಣಿಗೆ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಯುವ ಮೋರ್ಚಾದ ಮುಖಂಡ ರಾಕೇಶ್ ಹಿರೇಕುಡಿಗೆ, ಹಿಂದೂಗಳು ಒಗ್ಗೂಡದಿದ್ದರೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲವೆಂದು ಎಚ್ಚರಿಸಿದರು. ಬಿಜೆಪಿ ಆಡಳಿತದಲ್ಲೇ ಪಕ್ಷದ ಕಾರ್ಯಕರ್ತರಿಗೆ ಈ ಗತಿ ಬಂದಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಕ್ಕೆ ಇತಿಶ್ರೀ ಹಾಡಲು ರಾಜ್ಯ ಸರ್ಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಹರ್ಷನ ಕೊಲೆ ಆರೋಪಿಗಳು ಕಾರಾಗೃಹದಲ್ಲಿ ರಾಜಾತಿಥ್ಯ ಸ್ವೀಕರಿಸುತ್ತಿದ್ದಾರೆಂದು ಆರೋಪಿಸಿದರು. 


ಜಯಪುರದಲ್ಲಿ ಬಂದ್ 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಆಚರಿಸಲಾಯಿತು. ಹಾಲು, ಮೆಡಿಕಲ್ ಸ್ಟೋರ್, ಪೆಟ್ರೋಲ್‌ ಬಂಕ್ ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನು ಮುಚ್ಚಲಾಗಿತ್ತು. ಮುಖ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್, ಮೇಗುಂದ ಹೋಬಳಿ ಸಂಚಾಲಕ ಅಕ್ಷಯ್, ಜಯಪುರ ಘಟಕದ ಅಭಿಷೇಕ್, ಸಂತೋಷ್ ಅರೆನೂರು, ಜಯಪುರ ಗ್ರಾಮ ಪ೦ಚಾಯಿತಿ ಅಧ್ಯಕ್ಷೆ ರಮ್ಯ ಇದ್ದರು. ಬಳಿಕ ಠಾಣಾಧಿಕಾರಿ ಜ್ಯೋತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮಲೆನಾಡಿನಲ್ಲಿ ಮುಂದುವರಿದ ಸಾಮೂಹಿಕ ರಾಜೀನಾಮೆ 

ಮಂಗಳೂರು ಪ್ರವೀಣ್ ಹತ್ಯೆ ಪ್ರಕರಣ ಖಂಡಿಸಿ ನಿನ್ನೆ ಜುಲೈ 27ರಂದು ಯುವಾಮೋರ್ಚಾ ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದರು. ಇದರ ಬೆನ್ನಲ್ಲೇ ಇಂದು ಕೂಡ ಬಿಜೆಪಿ ಕಾರ್ಯಕರ್ತರಿಂದ ಸಾಮೂಹಿಕ ರಾಜೀನಾಮೆ ನೀಡುವ ಪ್ರಕ್ರಿಯೆ ಮುಂದುವರಿದೆ, ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಸರ್ವ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಪ್ರವೀಣ್ ಹಂತಕರಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಜಿಲ್ಲಾಧ್ಯಕ್ಷರಿಗೆ  ಸಾಮೂಹಿಕ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ಹಿಂದೂಪರ ಗಟ್ಟಿ ನಿಲುವು ತೆಗೆದುಕೊಳ್ಳುವಂತೆ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಯನ್ನು ಖಂಡಿಸಿದ್ದಾರೆ.

Follow Us:
Download App:
  • android
  • ios