ಮಂಡ್ಯ: ಅಂತ್ಯಕ್ರಿಯೆಗೆ ತೆರಳುತ್ತಿದ್ದವರ ಮೇಲೆ ಜೇನು ದಾಳಿ, ಮಧ್ಯದಾರಿಯಲ್ಲೇ ಶವ ಬಿಟ್ಟು ಪರಾರಿ
ಅಂತ್ಯ ಸಂಸ್ಕಾರಕ್ಕೆಂದು ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಜೇನು ದಾಳಿ ನಡೆಸಿದೆ.
ಮಂಡ್ಯ[ಮಾ. 02] ಜೇನುದಾಳಿ ಭೀತಿಯಿಂದ ಅಂತ್ಯಕ್ರಿಯೆಗೆ ಕೊಂಡೊಯ್ಯುತ್ತಿದ್ದ ಶವವನ್ನು ಸ್ಥಳದಲ್ಲೇ ಬಿಟ್ಟು ಪರಿವಾರದವು ಪರಾರಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪೀ. ಹಳ್ಳಿಯಲ್ಲಿ ಘಟನೆ ನಡೆದಿದ್ದು, ಗ್ರಾಮದ ಉಂತೂರಮ್ಮ ದೇವಿಯ ಗುಡ್ಡಪ್ಪ ಬೋರಯ್ಯ ಅಲಿಯಾಸ್ ದೊಳ್ಳಯ್ಯ ಗುರುವಾರ ಸಂಜೆ 5ರಲ್ಲಿ ಮೃತಪಟ್ಟಿದ್ದರು.ಇಂದು ಮಧ್ಯಾಹ್ನ ವೇಳೆಯಲ್ಲಿ ದೇವಾಲಯದ ಸಮೀಪದಲ್ಲೇ ಅಂತ್ಯ ಸಂಸ್ಕಾರ ಮಾಡಲು ಮೃತದೇಹವನ್ನು ತೆಗೆದುಕೊಂಡು 150ಕ್ಕೂ ಹೆಚ್ಚು ಜನತೆ ಹೋಗಿದ್ದಾರೆ. ಆಗ ಜೇನು ದಾಳಿ ಮಾಡಿ, ನೂರಾರು ಜನರಿಗೆ ಕಚ್ಚಿವೆ.
ಜೇನು ದಾಳಿ ಭೀತಿಯಿಂದ ಜನತೆ ಶವವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಜೇನು ದಾಳಿಯಿಂದ ಅಸ್ವಸ್ಥಗೊಂಡ ಹಲವರು ಕೊಡಿಯಾಲ ಹಾಗೂ ಅರಕೆರೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶವದ ಅಂತ್ಯ ಸಂಸ್ಕಾರ ಮಾಡಲು ಯಾರೊಬ್ಬರೂ ಧೈರ್ಯ ತೋರುತ್ತಿಲ್ಲ. ಹಾಗಾಗಿ ಮೃತದೇಹ ಅನಾಥವಾಗಿ ಬಿದ್ದಿತ್ತು. ಈ ದೇವಿಗೆ ಜೇನುಗಳೇ ರಕ್ಷಣೆಯಂತೆ. ಆದ್ದರಿಂದ ದೇವಿಯ ಸಮೀಪದಲ್ಲೇ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದರಿಂದ ಸಿಟ್ಟಾಗಿ ಜೇನುಗಳು ದಾಳಿ ನಡೆಸಿವೆ ಎಂದು ಜನರು ಹೇಳಿದ್ದಾರೆ.