ಬಡವರು ಕೂಲಿ ಕಾರ್ಮಿಕರು ಹಾಗು ಸೂರಿಲ್ಲದ ಸ್ಲಂ ಜನರಿಗಾಗಿ ಸರ್ಕಾರ ಪ್ರಧಾನಮಂತ್ರಿ ಅವಾಜ್ ಯೋಜನೆ ಅಡಿ ಸೂರು ಭಾಗ್ಯ ಆರಂಭಿಸಿದೆ. ಆದ್ರೆ ಸ್ಲಂ ಬೋರ್ಡ್ ಅಧಿಕಾರಿಗಳು, ಟೆಂಡರ್ ದಾರ‌ ಹಾಗೂ ಕಂಟ್ರಾಕ್ಟರ್ ಯಡವಟ್ಟಿನಿಂದಾಗಿ ಆ ಯೋಜನೆ ಹಳ್ಳ ಹಿಡಿದಿದೆ.

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮೇ.24): ಬಡವರು ಕೂಲಿ ಕಾರ್ಮಿಕರು ಹಾಗು ಸೂರಿಲ್ಲದ ಸ್ಲಂ ಜನರಿಗಾಗಿ ಸರ್ಕಾರ ಪ್ರಧಾನಮಂತ್ರಿ ಅವಾಜ್ ಯೋಜನೆ ಅಡಿ ಸೂರು ಭಾಗ್ಯ ಆರಂಭಿಸಿದೆ. ಆದ್ರೆ ಸ್ಲಂ ಬೋರ್ಡ್ ಅಧಿಕಾರಿಗಳು, ಟೆಂಡರ್ ದಾರ‌ ಹಾಗೂ ಕಂಟ್ರಾಕ್ಟರ್ ಯಡವಟ್ಟಿನಿಂದಾಗಿ ಆ ಯೋಜನೆ ಹಳ್ಳ ಹಿಡಿದಿದೆ. ಹೌದು, ಹೊಟ್ಟೆಪಾಡಿಗಾಗಿ ಕೂಲಿ ನಾಲಿ ಮಾಡುವ ಕಾರ್ಮಿಕರ ಬದುಕು ಹಸನಾಗಲಿ ಅಂತ ಸರ್ಕಾರ ಸೂರಿಲ್ಲದವರಿಗೆ ಸುಲಭವಾಗಿ ಮನೆಭಾಗ್ಯ ಕಲ್ಪಿಸಲು ಪ್ರಧಾನಮಂತ್ರಿ ಅವಾಜ್ ಯೋಜನೆಯನ್ನು 2015 ರಲ್ಲಿ ಅನುಷ್ಟಾನಗೊಳಿಸಿದೆ‌.ಹೀಗಾಗಿ ಕೋಟೆನಾಡು ಚಿತ್ರದುರ್ಗದ 13 ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಸ್ಲಂ ಜನರು ಸರ್ಕಾರದ‌ ನಿಯಮದಂತೆ ಮೂರು ಕಂತುಗಳಲ್ಲಿ 75000 ರೂಪಾಯಿ ವಂತಿಕೆ ಹಣವನ್ನು ಡಿಡಿ ರೂಪದಲ್ಲಿ ಪಾವತಿಸಿದ್ದಾರೆ. 

ಹೀಗಾಗಿ ಸರ್ಕಾರ ಸಹ 1226 ಮನೆಗಳ ನಿರ್ಮಾಣಕ್ಕಾಗಿ ( ಬಾಗಲಕೋಟೆ ಮೂಲದ ಬಸವರಾಜ್ ಜಾಲಿಹಾಳ್ ಎನ್ನುವವರಿಗೆ ಟೆಂಡರ್ ನೀಡಿದೆ. ಆದ್ರೆ ಬಡವರ ಪಾಲಿಗೆ ವರವಾಗಬೇಕಿದ್ದ ಪ್ರಧಾನಮಂತ್ರಿ ಅವಾಜ್ ಯೋಜನೆಯಿಂದಾಗಿ ಇದ್ದ ಮನೆಯನ್ನು ಕಳೆದುಕೊಂಡು ನಿವಾಸಿಗಳು ಬೀದಿಗೆ ಬೀಳುವಂತಾಗಿದೆ. ಕೆಲವರ ಮನೆ ಕಾಮಗಾರಿ ಆರಂಭವಾಗಿ ಮೂರು ಕಳೆದರು ಮನೆ ಸಂಪೂರ್ಣವಾಗಿಲ್ಲ. ಅಲ್ಲದೇ ನಿರ್ಮಾಣವಾದ ಹಲವು ಮನೆಗಳು ಕಳಪೆ ಕಾಮಗಾರಿಯಿಂದಾಗಿ ಗೃಹಪ್ರವೇಶಕ್ಕು ಮುನ್ನವೇ ಗೋಡೆಗಳು ಬಿರುಕು ಬಿಟ್ಟಿವೆ. ಹಾಗೆಯೇ ಯೋಜನೆಯಂತೆ ಮನೆ ಕಟ್ಟದೇ ಟೆಂಡರ್ ದಾರರು, ಗುತ್ತಿಗೆದಾರರು ಹಾಗು ಅಧಿಕಾರಿಗಳು ಶಾಮೀಲಾಗಿ‌ ಕಿಟಕಿ ಬಾಗಿಲು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯದ ಸಾಮಾಗ್ರಿಗಳನ್ನೇ ವಿತರಿಸಿಲ್ಲ. 

ಕೇವಲ ಕಾಟಚಾರಕ್ಕೆ ಕಳಪೆಮನೆ ಕಟ್ಟಿ ಸರ್ಕಾರದ ಕೋಟಿ ಕೋಟಿ ಹಣವನ್ನು ಲೂಟಿ ಹೊಡೆದಿದ್ದಾರೆ. ಹೀಗಾಗಿ ಮನೆಯಲ್ಲಿನ ಬಂಗಾರದ ಒಡವೆ, ಮಾಂಗಲ್ಯ ಸರಅಡವಿಟ್ಟು ಮನೆಕಾಮಗಾರಿ ಮುಗಿಸ್ತಿದ್ದೇವೆಂಬ ಆರೋಪ ಫಲಾನುಭವಿಗಳಿಂದ ಕೇಳಿ ಬಂದಿದೆ. ಹೀಗಾಗಿ ಫಲಾನುಭವಿಗಳು ಕೊಳಚೆ ನಿರ್ಮೂಲನ ಮಂಡಳಿ ಹಾಗು ನಗರಸಭೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ‌. ಇನ್ನು ಈ ವಿಚಾರವಾಗಿ ಕೋಟೆನಾಡಿನ ಹೋರಾಟಗಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಂಡು ಫಲಾನುಭವಿಗಳಿಗೆ ಯೋಜನೆಯನ್ನು ಸಮರ್ಪಕವಾಗಿ ತಲುಪಿಲಿಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.‌ 

ಎಸ್ಸೆಸ್ಸೆಲ್ಸಿ ರಿಸಲ್ಟ್‌ ಕುಸಿತ: ಛಾಯಾಪ್ರತಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲೂ ಇಳಿಕೆ

ಜೊತೆಗೆ ಈ ಕಾಮಗಾರಿಯಲ್ಲಿ ಯಾರೆಲ್ಲಾ ಅಧಿಕಾರಿಗಳು ಭಾಗಿಯಾಗಿದ್ದರು ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಮೂಲಕ ನೊಂದ ಹಾಗೂ ಅನ್ಯಾಯಕ್ಕೆ ಒಳಗಾಗಿರುವ ಫಲಾನುಭವಿಗಳಿಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದರು. ಒಟ್ಟಾರೆ ಸ್ಲಂ ಜನರ ಸೂರು ಭಾಗ್ಯದಲ್ಲೂ ಅಧಿಕಾರಿಗಳು, ಟೆಂಡರ್ ದಾರ ಹಾಗು ಗುತ್ತಿಗೆದಾರರು ಸರ್ಕಾರದ ಹಣವನ್ನು ಗುಳುಂ‌ ಎನಿಸಿದ್ದಾರೆ. ಹೀಗಾಗಿ ಫಲಾನುಭವಿಗಳಿಗೆ ಸರ್ಕಾರ ನೀಡಿರೋ ಸೂರು ಭಾಗ್ಯ ಪ್ರಯೋಜನ ಇಲ್ಲದಂತಾಗಿದೆ. ಇನ್ನಾದ್ರು ಸರ್ಕಾರ‌ ಈ‌ ಯೋಜನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಬಡವರಿಗೆ ನ್ಯಾಯ ಒದಗಿಸಬೇಕಿದೆ‌.