ರಾಮನಗರದಲ್ಲಿ ನಾಲ್ವರಿಗೆ ಕೊರೋನಾ ಶಂಕೆ : ಬೆಂಗಳೂರಲ್ಲಿ ಟೆಸ್ಟ್
ರಾಮನಗರ ಜಿಲ್ಲೆಯಲ್ಲಿ ನಾಳ್ವರು ಕೊರೋನಾ ಶಂಕಿತರು ಪತ್ತೆಯಾಗಿದ್ದು, ಪರೀಕ್ಷೆಗೆ ಬೆಂಗಳೂರಿಗೆ ರವಾನಿಸಲಾಗಿದೆ.
ರಾಮನಗರ [ಮಾ.17]: ಜರ್ಮಿನಿಯಿಂದ ಹಿಂದಿರುಗಿದ ವಿದ್ಯಾರ್ಥಿನಿ ಸೇರಿದಂತೆ ನಾಲ್ವರಲ್ಲಿ ಕೊರೋನಾ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರ ರಕ್ತದ ಮಾದರಿ, ಗಂಟಲು ದ್ರವವನ್ನು ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಜರ್ಮಿನಿಯಿಂದ ಚನ್ನಪಟ್ಟಣಕ್ಕೆ ಹಿಂದಿರುಗಿದ ವಿದ್ಯಾರ್ಥಿನಿಯೊಬ್ಬರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ಮತ್ತು ಆಕೆಯ ತಂದೆ, ತಾಯಿಯ ರಕ್ತ ಮಾದರಿ, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮೂವರ ಪೈಕಿ ವಿದ್ಯಾರ್ಥಿನಿಯನ್ನು ಮಾತ್ರ ರಾಮನಗರ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆಗೆ ಕ್ರಮಕೈಗೊಳ್ಳಲಾಗಿದೆ.
ವಿದ್ಯಾಭ್ಯಾಸಕ್ಕೆಂದು ಜರ್ಮನಿಗೆ ತೆರಳಿದ್ದ 21 ವರ್ಷದ ಚನ್ನಪಟ್ಟಣ ನಗರ ವ್ಯಾಪ್ತಿಯ ನಿವಾಸಿ ಕೇವಲ 2 ದಿನಗಳ ಹಿಂದೆಯಷ್ಟೇ ತವರಿಗೆ ಹಿಂದಿರುಗಿದ್ದರು. ಭಾನುವಾರ ಸಂಜೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ್ದಾರೆ. ತಕ್ಷಣ ಜಾಗೃತರಾದ ಅಧಿಕಾರಿಗಳು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆ ತಂದು ತಪಾಸಣೆ ಮಾಡಿಸಿದ್ದಾರೆ.
ಯುರೋಪ್ ಜನರಿಗೆ ಭಾರತಕ್ಕೆ ನೋ ಎಂಟ್ರಿ!.
ರೋಗ ಲಕ್ಷಣಗಳನ್ನು ಆಧರಿಸಿ ಕೊರೋನಾ ವೈರಸ್ ಸೋಂಕು ತಪಾಸಣೆಗೆಂದು ಆಕೆಯ ಜತೆಗೆ ತಂದೆ, ತಾಯಿಯ ರಕ್ತ ಮಾದರಿ, ಗಂಟಲು ದ್ರವವನ್ನು ಆಸ್ಪತ್ರೆಯ ತಜ್ಞ ವೈದ್ಯರು ಸಂಗ್ರಹಿಸಿದ್ದಾರೆ.
ಮರಗೆಲಸದ ಕಾರ್ಮಿಕನಿಗೂ ಕೊರೋನಾ ಶಂಕೆ:
ಚನ್ನಪಟ್ಟಣ ಮೂಲದ ಮರಗೆಲಸ ಕಾರ್ಮಿಕರೊಬ್ಬರು ಮೈಸೂರಿನಿಂದ ಹಿಂದಿರುಗಿದ್ದು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ರಕ್ತಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆತನನ್ನು ಪರೀಕ್ಷಿಸಿದ ವೈದ್ಯರು, ಅಂತಹುದೇನು ಸೋಂಕು ಇಲ್ಲ, ಆದರೂ 14 ದಿವಸ ಎಲ್ಲೂ ತಿರುಗಾಡಬೇಡ ಮನೆಯಲ್ಲಿಯೇ ಇರುವಂತೆ ಸಲಹೆ ನೀಡಿದ್ದಾರೆ.
ಒಟ್ಟು ನಾಲ್ವರ ರಕ್ತ ಮಾದರಿ, ಗಂಟಲು ದ್ರವವನ್ನು ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ವರದಿ ಬರಲು ಕನಿಷ್ಠ 24 ಗಂಟೆ ಕಾಲಾವಕಾಶಬೇಕು. ಮಾ.17 ರಂದು ಬೆಳಗ್ಗೆ ಅಥವಾ ಸಂಜೆ ವೇಳೆಗೆ ವರದಿ ಕೈಸೇರಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.