ಸಕಲೇಶಪುರದಲ್ಲಿ 350 ಬೀದಿ ನಾಯಿಗಳ ಹತ್ಯೆ!: ಸುಪ್ರೀಂ ಗರಂ
350 ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆ ಸಕಲೇಶಪುರದ ಪುರಸಭೆ ಮುಖ್ಯಾಧಿಕಾರಿ ಹಾಗೂ ಖಾಸಗಿ ಗುತ್ತಿಗೆದಾರರೊಬ್ಬರ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ.
ನವದೆಹಲಿ[ನ.18]: 350 ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆ ಸಕಲೇಶಪುರದ ಪುರಸಭೆ ಮುಖ್ಯಾಧಿಕಾರಿ ಹಾಗೂ ಖಾಸಗಿ ಗುತ್ತಿಗೆದಾರರೊಬ್ಬರ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ.
ಸಕಲೇಶಪುರ ಪಟ್ಟಣದ ಪುರಸಭೆ ಮುಖ್ಯ ಅಧಿಕಾರಿ ವಿ.ಟಿ.ವಿಲ್ಸನ್ ಹಾಗೂ ಗುತ್ತಿಗೆದಾರ ವಿ.ಜಾಜ್ರ್ ರಾಬರ್ಟ್ ಅವರಿಗೆ ಈ ಸಂಬಂಧ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
2015ರ ನ.18ರ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಎಲ್ಲಾ ಸ್ಥಳೀಯ ಅಧಿಕಾರಿಗಳು ಹಾಗೂ ಪಂಚಾಯತ್ಗಳು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ- 1960 ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದರೆ, ಸಕಲೇಶಪುರ ಪುರಸಭೆ ಅಧಿಕಾರಿ ಹಾಗೂ ಗುತ್ತಿಗೆದಾರ ಉದ್ದೇಶಪೂರ್ವಕವಾಗಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರರೂ ಆಗಿರುವ ಅರ್ಜಿದಾರ ನವೀನ್ ಕಾಮತ್ ದೂರು ದಾಖಲಿಸಿದ್ದರು.
2017ರ ಅಕ್ಟೋಬರ್ನಲ್ಲಿ ಸಕಲೇಶಪುರ ಪುರಸಭೆ ಮುಖ್ಯ ಅಧಿಕಾರಿ ವಿಲ್ಸನ್ ಅವರು ತಮ್ಮ ಪುರಸಭೆ ವ್ಯಾಪ್ತಿಯ ಒಳಗೆ ಬೀದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಬಿಡಲು ಜಾಜ್ರ್ಗೆ ಗುತ್ತಿಗೆ ನೀಡಿದ್ದರು. 350 ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಲು ಜಾಜ್ರ್ಗೆ .91,537 ನೀಡಲಾಗಿತ್ತು. ಕಾಯ್ದೆಯ ಪ್ರಕಾರ ನಾಯಿಗಳನ್ನು ಹಿಡಿದ ಬಳಿಕ ಅವುಗಳಿಗೆ ಮರು ವಸತಿ ಕಲ್ಪಿಸಬೇಕಿತ್ತು. ಆದರೆ ನಾಯಿಗಳನ್ನು ಸಕಲೇಶಪುರ ಸ್ಮಶಾನ ಮೈದಾನದಲ್ಲಿ ಹೂತಿದ್ದರು. ಸಾಮೂಹಿಕ ಹತ್ಯೆ ನಡೆಸುವಂತಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.