Asianet Suvarna News Asianet Suvarna News

ಕುಲಶಾಸ್ತ್ರ ಅಧ್ಯಯನಕ್ಕೆ 25 ಲಕ್ಷ ರು.: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕಡಿಮೆ ಜನಸಂಖ್ಯೆಯೊಂದಿಗೆ ಸರ್ಕಾರ ಮಟ್ಟದಲ್ಲಿ ಹೆಚ್ಚು ಗುರುತಿಸಿಕೊಳ್ಳಲಾಗದ ಜನಾಂಗಗಳ ಕುಲಶಾಸ್ತ್ರ ಅಧ್ಯಯನದ ಮೂಲಕ ಮೀಸಲಾತಿ ನೀಡುವ ನಿಯಮವಿದೆ. ಕೊಡವ 18 ಭಾಷಿಕ ಜನಾಂಗಗಳ ಕುಲಶಾಸ್ತ್ರಕ್ಕೆ ಬೇಡಿಕೆ ಇಟ್ಟಿರುವುದನ್ನು ಪರಿಗಣಿಸಿ, ತಕ್ಷಣ ಕ್ರಮಕ್ಕೆ ಆದೇಶ ನೀಡಲಾಗುವುದು: ಸಚಿವ ಕೋಟ ಶ್ರೀನಿವಾಸ ಪೂಜಾರಿ 

25 Lakhs for Studying Genealogy Says Minster Kota Srinivas Poojary grg
Author
First Published Feb 20, 2023, 1:00 AM IST

ಗೋಣಿಕೊಪ್ಪ(ಫೆ.20): ಹದಿನೆಂಟು ಕೊಡವ ಭಾಷಾ ಮೂಲ ನಿವಾಸಿಗಳ ಕುಲಶಾಸ್ತ್ರ ಅಧ್ಯಯನಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು. ಭಾನುವಾರ ಬಿಟ್ಟಂಗಾಲದಲ್ಲಿರುವ ಕೊಡಗು ಹೆಗ್ಗಡೆ ಸಮಾಜ ಸಭಾಂಗಣದಲ್ಲಿ ಕೊಡವ ಭಾಷಿಕ ಸಮುದಾಯಗಳ ಕೂಟ ಆಯೋಜಿಸಿದ್ದ 18 ಕೊಡವ ಭಾಷಿಕ ಜನಾಂಗಗಳ ಒತ್ತೋರ್ಮೆ ಕೂಟದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ, ಮನವಿ ಸ್ವೀಕರಿಸಿ ಮಾತನಾಡಿದರು.

ಕಡಿಮೆ ಜನಸಂಖ್ಯೆಯೊಂದಿಗೆ ಸರ್ಕಾರ ಮಟ್ಟದಲ್ಲಿ ಹೆಚ್ಚು ಗುರುತಿಸಿಕೊಳ್ಳಲಾಗದ ಜನಾಂಗಗಳ ಕುಲಶಾಸ್ತ್ರ ಅಧ್ಯಯನದ ಮೂಲಕ ಮೀಸಲಾತಿ ನೀಡುವ ನಿಯಮವಿದೆ. ಕೊಡವ 18 ಭಾಷಿಕ ಜನಾಂಗಗಳ ಕುಲಶಾಸ್ತ್ರಕ್ಕೆ ಬೇಡಿಕೆ ಇಟ್ಟಿರುವುದನ್ನು ಪರಿಗಣಿಸಿ, ತಕ್ಷಣ ಕ್ರಮಕ್ಕೆ ಆದೇಶ ನೀಡಲಾಗುವುದು. ಇದಕ್ಕಾಗಿ 25 ಲಕ್ಷ ರು. ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಕೊಡವ ಭಾಷಿಕ ಜನಾಂಗಗಳ ಐನ್‌ಮನೆ ಅಭಿವೃದ್ದಿಗೆ 5 ಕೋಟಿ ರು. ನೀಡಲಾಗುವುದು, ಸಮುದಾಯಕ್ಕೆ ಬೇಕಾಗಿರುವ ಕಲ್ಯಾಣ ಸಮುದಾಯ ಭವನ ನಿರ್ಮಾಣಕ್ಕೆ 5 ಎಕರೆ ಸರ್ಕಾರಿ ಜಾಗ ನೀಡಲು ಸರ್ಕಾರ ಮುಂದಾಗಲಿದೆ. ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಆಗಿರುವ ಶಾಸಕ ಕೆ. ಜಿ. ಬೋಪಯ್ಯ ಅವರ ಮೂಲಕ ಬೇಡಿಕೆ ಈಡೇರಿಸಲಾಗುವುದು ಎಂದರು.

ಕೊಡಗು: ಕಾಫಿ ತೋಟದ ನೀರಿನ ತೊಟ್ಟಿಗೆ ಬಿದ್ದು ನರಳಿ ಹೆಣ್ಣಾನೆ ಸಾವು

ಒಳ ಮೀಸಲಾತಿಗೆ ಸದಾಶಿವ ವರದಿ ಆಧರಿಸಿ ಕ್ರಮಕೈಗೊಳ್ಳಲು ಸರ್ಕಾರ ಸಹಮತ ವ್ಯಕ್ತಪಡಿಸಿದೆ. ಇದರಂತೆ ಕೊಡವ ಭಾಷಿಕ ಜನಾಂಗಗಳ ಒಳಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ದೇಶವು ಸಮರ್ಥ ಭಾರತವಾಗಿ ಮುಂದುವರಿಯಲು ಕೊಡವ ಕೊಡುಗೆ ಕೂಡ ಹೆಚ್ಚಿದೆ. ಇದನ್ನು ಸರ್ಕಾರ ಕೂಡ ಅರಿತುಕೊಂಡಿದೆ. ದೇಶದ ಪದ್ಮಶ್ರೀ ಅಂತಹ ಪ್ರಶಸ್ತಿಗಳು ಕೂಡ ಇಂದು ಕಲೆ, ಸಂಸ್ಕೃತಿ, ಮೂಲಕ್ಕೆ ದೊರೆಯುತ್ತಿದೆ. ದೇಶ ಬದಲಾಗುತ್ತಿದೆ ಎಂದರು.

ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಪುಸ್ತಕ ಮಳಿಗೆ ಉದ್ಘಾಟಿಸಿ ಮಾತನಾಡಿ, ಭೌಗೋಳಿಕ ಮತ್ತು ಜನಸಂಖ್ಯೆಯಲ್ಲಿ ಕಡಿಮೆ ಇರುವ ಕೊಡವರ ಸಮಸ್ಯೆ ಹೆಚ್ಚಿದೆ. ಈ ಬಗ್ಗೆ ಶಾಸಕ ಕೆ. ಜಿ. ಬೋಪಯ್ಯ ಈಗಾಗಲೇ ಕೊಡವರ ಐನ್‌ಮನೆ ಅಭಿವೃದ್ಧಿ ಮೂಲಕ ಭಾಷೆ, ಸಂಸ್ಕೃತಿ ಪೋಷಣೆಗೆ ಪೀಠ ಸ್ಥಾಪನೆ ಮೂಲಕ ಸರ್ಕಾರದಿಂದ ಪ್ರೋತ್ಸಾಹ ಬೇಕು ಎಂಬುವುದನ್ನು ಸರ್ಕಾರದ ಮಟ್ಟದಲ್ಲಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು. ರಾಷ್ಟ್ರ ರಕ್ಷಣೆಯಲ್ಲಿ ಕೊಡವ ಕೊಡುಗೆ ಅಪಾರ. ಶೌರ್ಯ, ಕ್ರೀಡೆಯಲ್ಲಿ ಗುರುತಿಸಿಕೊಂಡಿರುವ ಕೊಡವರು ಟಿಪ್ಪು 32 ಬಾರಿ ಹೋರಾಟಕ್ಕೆ ಬಂದ ಸಂದರ್ಭ ಹೋರಾಡಿ ಜಯಿಸಿದ ಗೆದ್ದು ಸಮುದಾಯ ಎಂಬ ಹಿನ್ನೆಲೆ ಇದೆ. ಇದೊಂದು ರಾಷ್ಟ್ರೀಯತೆಯ ಪ್ರದೇಶ ಎಂದರು.

ವಿಧಾನ ಪರಿಷತ್‌ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಸರ್ಕಾರದ ಸವಲತ್ತು ಪಡೆಯಲು ಜನಸಂಖ್ಯೆ ಮುಖ್ಯ, ಒಗ್ಗಟ್ಟಿನ ಮೂಲಕ ಹೋರಾಟ ನಡೆಸಬೇಕಿದೆ ಎಂದರು.

ರಾಜ್ಯ ಮಾಜಿ ಅಡ್ವಕೇಟ್‌ ಜನರಲ್‌ ಅಜ್ಜಿಕುಟ್ಟೀರ ಎಸ್‌. ಪೊನ್ನಣ್ಣ ಮಾತನಾಡಿ, ಕೊಡವ ಕುಲಶಾಸ್ತ್ರ ಅಧ್ಯಯನ ನಡೆಸಲು ಸರ್ಕಾರ 6 ವರ್ಷದಿಂದ ಯೋಜನೆ ರೂಪಿಸಿಕೊಂಡಿದ್ದರೂ, ಪ್ರಯೋಜನವಾಗಿಲ್ಲ. ಸಂವಿಧಾನ ಬದ್ಧವಾಗಿರುವ ಕುಲಶಾಸ್ತ್ರ ಅಧ್ಯಯನ, ಮೀಸಲಾತಿ, ರಾಜಕೀಯ ಮೀಸಲಾತಿ ಬಗ್ಗೆ ಕಾನೂನು ಹೋರಾಟ ಅಗತ್ಯವಾಗಿದೆ. ಕೊಡವ ಕೆಂಬಟ್ಟಿಜನಾಂಗವನ್ನು ಆದಿ ಕರ್ನಾಟಕ ಮೀಸಲಾತಿಗೆ ಸೇರಿಸುವುದು ಸರಿಯಲ್ಲ. ವಿಶೇಷ ಭಾಷೆ, ಆಚಾರ-ವಿಚಾರ ಹೊಂದಿರುವ ಕೆಂಬಟ್ಟಿಜನಾಂಗಕ್ಕೆ ಅದರದ್ದೇ ಆದ ಮೀಸಲಾತಿ ಅವಶ್ಯವಿದೆ. ಹೆಗ್ಗಡೆ ಸಮಾಜಕ್ಕೆ ರಾಜಕೀಯ ಮೀಸಲಾತಿ ನೀಡುವುದು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ 18 ಕೊಡವ ಭಾಷಿಕ ಜನಾಂಗಗಳಿಗೆ ಸದಸ್ಯತ್ವ ನೀಡುವ ಕಾನೂನು ಹೋರಾಟದ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯ ನಡೆಸಬೇಕಿದೆ ಎಂದರು.

ಬೇಟೆಯಾಡಲು ಅನುಮತಿ ಕೊಡಿ: ಹುಲಿ ದಾಳಿಗೆ ಕೊಡಗಿನ ಶಾಸಕ ಬೋಪಯ್ಯ ಆಕ್ರೋಶ

ಹಂಪಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ತಂಬಂಡ ವಿಜಯ್‌ ಪೂಣಚ್ಚ, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚೀರ ಸುಭಾಷ್‌ ನಾಣಯ್ಯ, ಪಶ್ಚಿಮಘಟ್ಟಸಂರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಸಮಾಜ ಸೇವಕ ಕೆಎಂಬಿ ಗಣೇಶ್‌, ಕೊಡವ ತಕ್‌್ಕ ಜನಾಂಗಕಾರಡ ಒಕ್ಕೂಟ ಅಧ್ಯಕ್ಷ ಕೊರಕುಟ್ಟೀರ ಸರಾ ಚೆಂಗಪ್ಪ, ಸದಸ್ಯೆ ಬಬ್ಬೀರ ಸರಸ್ವತಿ, ಖಜಾಂಚಿ ಪಡಿಞರಂಡ ಪ್ರಭುಕುಮಾರ್‌ ಇದ್ದರು.
ಪ್ರದರ್ಶನ: ಸಮುದಾಯ ಕೃಷಿ, ಅಡುಗೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ವಸ್ತುಗಳನ್ನು ಕಣ್ತುಂಬಿಕೊಂಡರು. ನೂಪುಟ್‌್ಟವರ, ನೇಂಗಿ, ನೊಗ, ಕೊಡಕೆ, ಪತ್ತಾಕ್‌, ಬಳೆ, ಕರ್ತಮಣಿ, ಪೀಚೆಕತ್ತಿ, ಒಡಿಕತ್ತಿ, ಪವಳ ಸರ, ತೊಡಂಗ್‌, ದುಡಿ, ಗೆಜ್ಜೆತಂಡ್‌, ಆಯುಧಗಳು, ಆಭರಣ ತಯಾರಿಸುವ ವಸ್ತುಗಳು, ಒನಕೆ, ಪೊಟ್ಟಿ, ಪುತ್ತರಿ ಕುತ್ತಿ, ಮೊರ, ಪರೆ ಇಂತಹವುಗಳನ್ನು ಬಿಂಬಿಸಲಾಯಿತು.

18 ಕೊಡವ ಭಾಷಿಕ ಜನಾಂಗಗಳಾದ ಕೊಡಗು ಹೆಗ್ಗಡೆ, ಅಮ್ಮಕೊಡವ, ಐರಿ, ಕೆಂಬಟ್ಟಿ, ಕೊಯವ, ಸವಿತ ಸಮಾಜ, ಕುಡಿಯ, ಕಣಿಯ, ಪಣಿಕ, ಕೋಲೆಯ, ಬೂಣೆಪಟ್ಟಮ, ಬಣ್ಣ, ಮಡಿವಾಳ, ಗೊಲ್ಲ, ಮಲೆಯ, ನಾಯರ್‌, ಕಾಪಾಳ, ಮೇದ, ಪಾಲೆ ಸಮಾಜಗಳ ಪ್ರಮುಖರು ಪಾಲ್ಗೊಂಡಿದ್ದರು.

Follow Us:
Download App:
  • android
  • ios